*ತಾಯಿ ಅಗಲಿಕೆ ಬಳಿಕ ಆತ್ಮಹತ್ಯೆಗೆ ವ್ಯಕ್ತಿ ಯತ್ನ: ಪ್ರಾಣ ಉಳಿಸಿದ ಎಮರ್ಜೆನ್ಸಿ ರೆಸ್ಕ್ಯೂ ತಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಯಿ ಅಗಲಿಕೆಯಿಂದ ಮನನೊಂದು ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಮಗನ ಜೀವ ಉಳಿಸಿ ಬೆಳಗಾವಿಯ ಹೆಲ್ಪ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ತಂಡ ಮಾನವೀಯ ಕಾರ್ಯ ಮಾಡಿದೆ.
ಗ್ರಾಮಸ್ಥರ ಸಮಯ ಪ್ರಜ್ಞೆ ಮತ್ತು ಒಂದು ಫೋನ್ ಕರೆ ಇನ್ನೇನು ಜೀವ ಕಳೆದುಕೊಳ್ಳುತ್ತಿದ್ದ ವ್ಯಕ್ತಿ ಪ್ರಾಣ ಉಳಿಸಿದೆ. ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಬಾಬು ಪಾಂಡು ಸಾಂಬರೇಕರ್(41) ಬದುಕುಳಿದ ವ್ಯಕ್ತಿ.
15 ದಿನಗಳ ಹಿಂದೆಯಷ್ಟೇ ಬಾಬು ಸಾಂಬರೇಕರ್ ಅವರ ತಾಯಿ ನಿಧನರಾಗಿದ್ದರು. ಅವಿವಾಹಿತ ಬಾಬು ತಾಯಿ ಜೊತೆಗೆ ಚನ್ನಾಗಿಯೇ ಆಗಿದ್ದರು. ಯಾವಾಗ ತಾಯಿ ಮೃತಪಡುತ್ತಾರೋ, ಆಗ ದಿನದಿಂದ ದಿನಕ್ಕೆ ಖಿನ್ನತೆಗೆ ಒಳಗಾಗಿದ್ದರು.
ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಾಬು ಇಂದು ಬೆಳಿಗ್ಗೆ ಅಂಬೇವಾಡಿ ಗ್ರಾಮದಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬಾವಿಯಲ್ಲಿ ಜಿಗಿಯುತ್ತಿದ್ದಂತೆ ಕೇಬಲ್ ಗೆ ಸಿಕ್ಕಿ ಹಾಕಿಕೊಂಡು ನೀರಲ್ಲಿ ತೇಲಾಡಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಮೇಲೆ ಬರುವಂತೆ ಎಷ್ಟೇ ಕೇಳಿಕೊಂಡರೂ ಆತ ಮಾತ್ರ ಕೇಳಿಲ್ಲ. ನಾನು ಸಾಯಬೇಕು, ನನ್ನ ಸಾಯಲು ಬಿಡಿ ಅಂತಾ ಕೂಗಾಡಿದ್ದಾನೆ.
ಅಷ್ಟೊತ್ತಿಗೆ ಗ್ರಾಮದ ಒಬ್ಬರು ಹೆಲ್ಪ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ಮುಖ್ಯಸ್ಥ ಬಸವರಾಜ ಹಿರೇಮಠ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಬಸವರಾಜ ಹಿರೇಮಠ ಆ ವ್ಯಕ್ತಿಯನ್ನು ಮಾತನಾಡಿಸಿ ಅವರು ಮೇಲೆ ಬರುವಂತೆ ತಿಳಿ ಹೇಳಿದ್ದಾರೆ. ಆದರೆ ಅವರ ಮಾತಿಗೂ ಆತ ಕ್ಯಾರೆ ಎಂದಿಲ್ಲ.
ತಡ ಮಾಡದೇ ಬಸವರಾಜ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಆಗಲೂ ಆತ ಅವರಿಗೆ ಸ್ಪಂದಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಬಸವರಾಜ ಆತನ ಕಪಾಳಕ್ಕೆ ಎರಡು ಬಾರಿಸಿ ಬೆನ್ನಿಗೆ ಹಗ್ಗ ಕಟ್ಟಿ ಮೇಲೆ ಎಳೆದೊಯ್ದು, ಆತನ ಜೀವವನ್ನು ಉಳಿಸಿದ್ದಾರೆ. ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬರು ಕೂಡ ಬಸವರಾಜ ಅವರ ಜೊತೆಗೆ ಬಾವಿಗಿಳಿದು ಬಾಬು ಸಾಂಬರೇಕರ್ ರಕ್ಷಿಸುವ ಕಾರ್ಯದಲ್ಲಿ ಶ್ರಮಿಸಿದರು. ನಂತರ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಾಮಾನ್ಯವಾಗಿ ಮೃತದೇಹ ನೀರಿನಿಂದ ಹೊರ ತೆಗೆಯಲು ಹೋಗಿರುತ್ತೇವೆ. ಅದೇರೀತಿ ಪ್ರವಾಹದಲ್ಲಿ ಸಿಲುಕಿದ ಅದೇಷ್ಟೋ ಜನರನ್ನು ನಮ್ಮ ತಂಡ ಉಳಿಸಿದೆ. ಆದರೆ, ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬದುಕಿಸಿದ ಮೊದಲ ಪ್ರಕರಣ ಇದು. ತಾಯಿ ಮೃತಪಟ್ಟಿದ್ದರಿಂದ ಆ ವ್ಯಕ್ತಿ ಬಹಳಷ್ಟು ನೊಂದಿದ್ದಾರೆ. ಜೀವನವೇ ಬೇಸರವಾಗಿ ಈ ರೀತಿ ಆತ್ಮಹತ್ಯೆಗೆ ಮುಂದಾಗಿದ್ದರು. ಅವರ ಜೀವ ಉಳಿಸಿ, ಧೈರ್ಯ ತುಂಬಿದ್ದೇವೆ. ಯಾರೂ ಆತ್ಮಹತ್ಯೆಗೆ ಯತ್ನಿಸಬೇಡಿ. ಅಮೂಲ್ಯ ಜೀವ ಕಳೆದುಕೊಳ್ಳಬೇಡಿ. ಯಾರಾದ್ರೂ ತುರ್ತು ಸಮಸ್ಯೆಯಲ್ಲಿ ಇರುವವರು 9922899500 ಮೊಬೈಲ್ ನಂಬರಿಗೆ ಕರೆ ಮಾಡಿ. ನಿಮ್ಮ ಒಂದು ಕರೆ ಜೀವ ಉಳಿಸುತ್ತದೆ ಎಂದು ಬಸವರಾಜ ಹಿರೇಮಠ ಕೋರಿದ್ದಾರೆ.




