Belagavi NewsBelgaum NewsKannada NewsKarnataka NewsNational

ಅಗಸ್ಟ್ 15 ರಂದು ರಕ್ತದಾನ ಶಿಬಿರ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೈನ್ ಇಂಟರ್ನ್ಯಾಷನಲ್ ಟ್ರೇಡ ಸಂಘ ಬೆಳಗಾವಿ ವಿಭಾಗದ ವತಿಯಿಂದ ಕಳೆದ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಈ ವರ್ಷವೂ ಆಗಸ್ಟ್ 15 ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಕ್ತದಾನ ಶಿಬರದ ಸಂಯೋಜಕ ಕುಂತಿನಾಥ ಕಲಮನಿ ಅವರು ಹೇಳಿದರು. 

ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿತೊ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದೆ. ಕಳೆದ ವರ್ಷ ಒಂದೇ ದಿನದಲ್ಲಿ 936 ಯುನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದು ಈ ವರ್ಷವೂ ಸಹ ಹೊಸ ದಾಖಲೆ ಮಾಡುವ ದಿಸೆಯಲ್ಲಿ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಈ ರಕ್ತದಾನ ಶಿಬಿರದಲ್ಲಿ ಕೆಎಲ್ಇ ಬ್ಲಡ್ ಬ್ಯಾಂಕ್, ಮಹಾವೀರ ಬ್ಲಡ್ ಬ್ಯಾಂಕ್, ಬಿಮ್ಸ್ ಬ್ಲಡ್ ಬ್ಯಾಂಕ್, ಮತ್ತು ಬೆಳಗಾಂವ ಬ್ಲಡ್ ಬ್ಯಾಂಕಗಳು ಸಹ ಭಾಗವಹಿಸಲಿವೆ. ಈ ಶಿಬಿರದಲ್ಲಿ ರಕ್ತ ನೀಡುವ ದಾನಿಗಳಿಗೆ ಒಂದು ವರ್ಷದ ಅವಧಿಯ ಒಂದು ಲಕ್ಷ ರೂ. ವರೆಗಿನ ಅಪಘಾತ ವಿಮೆಯ ಪಾಲಿಸಿಯನ್ನು ನೀಡಲಾಗುವುದು. ಇದರ ಪ್ರೀಮಿಯಂವನ್ನು ಜಿತೋ ಸಂಸ್ಥೆಯು ಭರಿಸಲಿದೆ ಎಂದು ಅವರು ತಿಳಿಸಿದರು. 

ಈ ರಕ್ತದಾನ ಶಿಬಿರಕ್ಕೆ ಬೆಳಗಾವಿಯ ವಿವಿಧ ಸಂಘ, ಸಂಸ್ಥೆಗಳು, ರೋಟರಿ ಸಂಸ್ಥೆಗಳು, ಬಿಸಿಸಿಐ, ಸೇರಿದಂತೆ ಕೈಗಾರಿಕೆಗಳು, ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು ಸಹ ಸಹಕಾರಿಸಲು ಮುಂದೆ ಬಂದಿದೆ. ಒಟ್ಟಾರೆ ಈ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು

ರಕ್ತದಾನಿಗಳಿಗೆ ಅಂದು ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಈ ರಕ್ತದಾನ ಶಿಬಿರದಲ್ಲಿ  ಶೇಖರಿಸಿದ ರಕ್ತವನ್ನು ಎಲ್ಲ ಬ್ಲಡ್ ಬ್ಯಾಂಕಗಳಲ್ಲಿ ಇಡಲಾಗುತ್ತದೆ. ಯಾರಿಗಾದರೂ ರಕ್ತದ ಅವಶ್ಯಕತೆವಿದ್ದಲ್ಲಿ ಅವರು ಜಿತೋ ಸಂಸ್ಥೆಯನ್ನು ಸಂಪರ್ಕಿಸಿದ್ದಲ್ಲಿ ಅಂತವರಿಗೆ  ತಕ್ಷಣ ರಕ್ತವನ್ನು ನೀಡುವ ವ್ಯವಸ್ಥೆಯನ್ನು ಜಿತೋ ಸಂಸ್ಥೆಯು ಮಾಡಲಿದೆ. ಉದ್ಯಮಬಾಗದಲ್ಲಿರುವ ಜಿತೋ ಕಚೇರಿಯನ್ನು ಸಂಪರ್ಕಿಸಿ ರಕ್ತವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು. 

ಇದೆ ಸಂದರ್ಭದಲ್ಲಿ ಕೆಎಲ್ಇ ಬ್ಲಡ್ ಬ್ಯಾಂಕ್ ಸಂಚಾಲಕ ಡಾ.ವಿರಗಿ ಅವರು ಮಾತನಾಡಿ, ಜಿತೋ ಸಂಸ್ಥೆಯು ಕೈಗೊಂಡಿರುವ ರಕ್ತದಾನ ಶಿಬಿರ ಅತ್ಯಂತ ಸಮಯೋಚಿತ ಕಾರ್ಯಕ್ರಮವಾಗಿದ್ದು, ಇದರಿಂದ ನಮ್ಮ ಕೆಎಲ್ಇ ಬ್ಲಡ್ ಬ್ಯಾಂಕಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರತಿ ದಿನ ಗ್ರಾಮೀಣ ಭಾಗದ ಜನರು ಬೆಳಗಾವಿಯ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಸಂಕಷ್ಟದ ಸಮಯಕ್ಕೆ ರಕ್ತದ ಬೇಡಿಕೆ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಅಗತ್ಯವಿದ್ದರಿಗೆ ರಕ್ತವನ್ನು ನೀಡಲು ಅನಕೂಲವಾಗಲೆಂದು ಜಿತೋ ಸಂಸ್ಥೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು, ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದ ಅವರು, ಶಿಬಿರದಲ್ಲಿ ನೀಡಲಾದ ರಕ್ತದ ಮಾದರಿಗಳನ್ನು ಎಲ್ಲ ರೀತಿಯಲ್ಲಿ ಟೆಸ್ಟಗಳನ್ನು ಮಾಡಿ ಅವುಗಳನ್ನು ಶೇಖರಿಸಲಾಗುತ್ತದೆ. ಅಗತ್ಯವಿದ್ದವರು ಜಿತೋ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.  

ಪತ್ರಿಕಾಗೋಷ್ಟಿಯಲ್ಲಿ ಜಿತೋ ಅಧ್ಯಕ್ಷ ವೀರಧವಲ ಉಪಾಧ್ಯೆ, ಕಾರ್ಯದರ್ಶಿ ಅಶೋಕ ಕಟಾರಿಯಾ, ರಕ್ತದಾನ ಶಿಬಿರದ ಮುಖ್ಯ ಸಂಯೋಜಕ ಹರ್ಷವರ್ಧನ ಇಂಚಲ, ಜಿತೋ ಸದಸ್ಯ ಅಭಯ ಆದಿಮನಿ ಮೊದಲಾದವರು ಉಪಸ್ಥಿತರಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button