Latest

ಮಾಧ್ಯಮಗಳು ಒಟ್ಟಾಗಿ ಮುನ್ನಡೆಯಬೇಕು – ಎಂ.ಕೆ.ಹೆಗಡೆ​

 

ಡಿಜಿಟಲ್ ಮಾಧ್ಯಮ ಸ್ಥಿತ್ಯಂತರಗಳು ಗೋಷ್ಠಿ 

ಪ್ರಗತಿವಾಹಿನಿ ಸುದ್ದಿ,​ ಕಲಬುರಗಿ:   ಡಿಜಿಟಲ್ ಮಾಧ್ಯಮ ಪತ್ರಿಕೋದ್ಯಮವನ್ನು ಇನ್ನಷ್ಟು ವಿಸ್ತಾರಗೊಳಿಸಿದೆ. ಇದರಿಂದಾಗಿ ಸಾವಿರಾರು ಪತ್ರಕರ್ತರು, ವರದಿಗಾರರು ಹುಟ್ಟಿಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮದಿಂದ ಬೇರೆ ಮಾಧ್ಯಮಗಳಿಗೆ ತಕ್ಷಣಕ್ಕೆ ಯಾವುದೇ ಹೊಡೆತ ಕಾಣುತ್ತಿಲ್ಲ. ಆದರೆ ಬೇರೆ ಮಾಧ್ಯಮಗಳಿಗಿಂತ ಪ್ರ​ಭಾವಶಾಲಿಯಾಗಿ ಡಿಜಿಟಲ್ ಮಾಧ್ಯಮ​ ಮುನ್ನುಗ್ಗುತ್ತಿರುವುದರಲ್ಲಿ ಎರಡು ಮಾತಿಲ್ಲ ಎಂ​ದು ​ಹಿರಿಯ ಪತ್ರಕರ್ತ​, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ​ಅಭಿಪ್ರಾಯ ಪಟ್ಟಿದ್ದಾರೆ.

ಇಲ್ಲಿನ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿರುವ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಡಿಜಿಟಲ್ ಮಾಧ್ಯಮದ ಸ್ಥಿತ್ಯಂತರಗಳ ಕುರಿತ ಮೊದಲ ಗೋಷ್ಠಿ​ಯಲ್ಲಿ ಅವರು ಮಾತನಾಡುತ್ತಿದ್ದರು.

ಡಿಜಿಟಲ್ ಸೇರಿದಂತೆ ಎಲ್ಲ ಮಾಧ್ಯಮಗಳೂ ಒಟ್ಟಾಗಿ ಮುನ್ನಡೆದಲ್ಲಿ ಮಾಧ್ಯಮ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದೆ. ಬೇರೆ ಬೇರೆ ತರದ ಮಾಧ್ಯಮಗಳು ಪರಸ್ಪರರನ್ನು ವಿರೋಧಿಗಳಂತೆ, ಪ್ರತಿಸ್ಪರ್ಧಿಗಳಂತೆ ನೋಡುವುದು ಸರಿಯಲ್ಲ. ಎಲ್ಲರೂ ಸೇರಿ ಮಾಧ್ಯಮ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸೋಣ. ಆಗ ಜೊಳ್ಳು ತನ್ನಿಂದ ತಾನೇ ಹಾರಿಹೊಗುತ್ತದೆ ಎಂದೂ ಅವರು ಹೇಳಿದರು.​

​ಗೋಷ್ಠಿಯನ್ನು ಉದ್ಘಾಟಿಸಿದ ​ಸಮೂಹ ಮಾಧ್ಯಮ ತಜ್ಞ ಜಿ.ಎನ್‌.ಮೋಹನ​, ಮುಂದಿನ ಕಾಲದ ಓದುಗರು ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ ಇರುತ್ತಾರೆ ಎಂಬ ಸೂಚನೆಯಿಂದ ಪಾಶ್ಚಿಮಾತ್ಯ ಪತ್ರಿಕೋದ್ಯಮ ಈಗಾಗಲೇ ಆ ನಿಟ್ಟಿನಲ್ಲಿ ವೇದಿಕೆ ತೆರೆದುಕೊಂಡಿದೆ. ಕನ್ನಡದ ಪ್ರಮುಖ ಪತ್ರಿಕೆಗಳೂ ಕೂಡ ಹಿಂದೆ ಬಿದ್ದಿಲ್ಲ ಎಂದು  ಹೇಳಿದರು.

 ಡಿಜಿಟಲ್ ಮಾಧ್ಯಮಗಳು ಇಂದು ಅಂಕಿ ಆಧರಿಸಿ ಅನಂತ ಸಾಧ್ಯತೆಗಳನ್ನು ಸೃಷ್ಟಿಸಿವೆ.ಅಪಾರ ಅವಕಾಶಗಳನ್ನು ಸೃಜಿಸಿದೆ.ಮಾಧ್ಯಮ ಈ ಸ್ಥಿತ್ಯಂತರಗಳನ್ನು ಅಳವಡಿಸಿಕೊಂಡು ವಿಕಸನಗೊಳ್ಳುತ್ತ ಸಾಗಬೇಕು ಎಂದರು.

ಹುಬ್ಬಳ್ಳಿ ಪ್ರಜಾವಾಣಿ ಬ್ಯುರೋ ಮುಖ್ಯಸ್ಥೆ ಎಸ್.ರಶ್ಮಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಹೂರಣ ಮತ್ತು ಭಾಷೆ ಬದಲಾಗಿದೆ,ಅದರ ಐಪಿ ನಿಯಂತ್ರಣದಲ್ಲಿದ್ದರೂ ಕೂಡ, ನೋಡುಗರ ವೀಕ್ಷಕರ ಆಸಕ್ತಿಗಳಿಗನುಗುಣವಾಗಿ ಸಲಹೆಗಳನ್ನು ,ಕಂಟೆಂಟ್‌ಗಳನ್ನು ಒದಗಿಸುತ್ತ, ಅವರ ಅಭಿರುಚಿಯನ್ನು ರೂಪಿಸತೊಡಗುತ್ತದೆ.ನೋಡುಗರ ಮನಃಪ್ರವೇಶ ಮಾಡುತ್ತಿವೆ.ಮುದ್ರಣ ಮಾಧ್ಯಮಗಳೂ ಕೂಡ ಒಂದು ಯುಟ್ಯೂಬ್ ಚಾನೆಲ್ ಮಾಡಿ ಸುದ್ದಿ ಸಂಬಂಧಿತ ದೃಶ್ಯಗಳನ್ನು,ಮಾಹಿತಿಯನ್ನು ನಿರೂಪಿಸಲು ಪ್ರಾರಂಭಿಸಿವೆ.ವಿವೇಚನೆಯುತವಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದರು.

ಪತ್ರಕರ್ತ ದ.ಕೊ.ಹಳ್ಳಿ ಚಂದ್ರಶೇಖರ ಮಾತನಾಡಿ ,ಡಿಜಿಟಲ್ ಮಾಧ್ಯಮಗಳ ಸಾಕ್ಷರತೆ,ತಂತ್ರಜ್ಞಾನ ಎಲ್ಲರಿಗೂ ಬೇಕು.ಕಾರ್ಯನಿರತ ಪತ್ರರ್ತರ ಸಂಘವು ಡಿಜಿಟಲ್ ಪತ್ರಿಕೋದ್ಯಮವನ್ನು ಗಂಭೀರವಾಗಿ ನಡೆಸುತ್ತಿರುವ ಪತ್ರಕರ್ತರಿಗೆ ವೇದಿಕೆ,ಅವಕಾಶ ಕಲ್ಪಿಸಬೇಕು. ಅನುಭವಿ ಪತ್ರಕರ್ತರು ಸ್ವತಂತ್ರವಾಗಿ ಡಿಜಿಟಲ್ ಮಾಧ್ಯಮಗಳನ್ನು ನಡೆಸುತ್ತಿದ್ದಾರೆ ಎಂದರು.

ದಟ್ಸ್ ಕನ್ನಡ ಡಾಟ್ ಕಾಮ್ ಸಹ ಸಂಪಾದಕ ಪ್ರಕಾಶ ಹುಲ್ಕೋಡು ಮಾತನಾಡಿ, ನಭಕ್ಕೆ ಉಪಗ್ರಹಗಳು ನೆಗೆದ ನಂತರ 24×7 ಸುದ್ದಿ ವಾಹಿನಿಗಳು,ಮುದ್ರಣ ಮಾಧ್ಯಮ ಶೈಲಿಯ ಮುಂದುವರೆದ ಭಾಗವಾಗಿ ಕಾರ್ಯ ಪ್ರಾರಂಭಿಸಿದವು.ಇಡೀ ಜಗತ್ತಿನಾದ್ಯಂತ ಪ್ರಾದೇಶಿಕ ದೇಶಭಾಷೆಗಳು ಡಿಜಿಟಲ್ ಮಾಧ್ಯಮಗಳ ಮೂಲಕ ತನ್ನ ಅಸ್ತಿತ್ವವನ್ನು ಸ್ಥಾಪಿಸತೊಡಗಿದವು.ಡಿಜಿಟಲ್ ಮಾಧ್ಯಮಗಳು ಭವಿಷ್ಯದ ನಿರ್ಣಾಯಕ ಮಾಧ್ಯಮವಾಗಲಿವೆ.ಭಾಷೆ ಶೈಲಿ,ಅಭಿರುಚಿಯನ್ನು ಟಿವಿ ಹಾಳು ಮಾಡುತ್ತಿದೆ ಎಂಬ ಆರೋಪಗಳ ನಡುವೆಯೇ ಈಗ ಡಿಜಿಟಲ್ ಮಾಧ್ಯಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿವೆ.ಮುದ್ರಣ ,ಟೆಲಿವಿಷನ್ ಮಾಧ್ಯಮಗಳಲ್ಲಿ ಪರಿಪೂರ್ಣತೆ ಕಾಣುತ್ತಿದ್ದೇವೆ.ಕಾಲಾಂತರದಲ್ಲಿ ಅವು ಬೆಳೆದು ಬಂದಿವೆ.ಡಿಜಿಟಲ್ ಮಾಧ್ಯಮಗಳಲ್ಲಿ ಪರಿಣಿತರು ಮಾತ್ರ ಬರುತ್ತಾರೆ ಎಂದೇನಿಲ್ಲ, ಎಲ್ಲ ರೀತಿಯ ಜನರೂ ಅಲ್ಲಿ ಮುಕ್ತವಾಗಿ ಬರುತ್ತಿದ್ದಾರೆ.ವೃತ್ತಿಪರ ತರಬೇತಿಗಳು,ಶಾಸ್ತ್ರೀಯ ಕಲಿಕೆ ಬೇಕು.ಪತ್ರಕರ್ತರ ಸಂಘ ,ಪತ್ರಿಕೋದ್ಯಮ ವಿಭಾಗಗಳು ಇಂತಹ ಪ್ರಯತ್ನಗಳನ್ನು ಮಾಡಬೇಕು ಎಂದರು.

​ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನ, ಡಾ.ಎಂ.ಮಹ್ಮದ್ ​ಭಾಷಾ ಗೂಳ್ಯಂ ಸಹ ಮಾತನಾಡಿದರು. ಶಂಕರ ಕೋಡ್ಲಾ, ಶಿವರಾಯ ದೊಡ್ಡಮನಿ, ಮೊಹಿಯುದ್ದೀನ್ ಪಾಶಾ, ಸಂಜಯ ಚಿಕ್ಕಮಠ ಮತ್ತಿತರರು ವೇದಿಕೆಯಲ್ಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button