Belagavi NewsBelgaum NewsKannada NewsKarnataka NewsLatest

*ಸ್ಮೃತಿ ಭವನ ನಿರ್ಮಾಣದ ಮೂಲಕ ಮತ್ತೆ ಕನ್ನಡಿಗರನ್ನು ಕೆಣಕಲು ಮುಂದಾದ ಎಂಇಎಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರ ಸರಕಾರದ ಅನುದಾನ ಪಡೆದು ಬೆಳಗಾವಿಯಲ್ಲಿ ಎಮ್ ಈ ಎಸ್ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ತನ್ಮೂಲಕ ಕರ್ನಾಟಕ ಸರಕಾರ ಹಾಗೂ ಕನ್ನಡಿಗರನ್ನು ಕೆಣಕಲು ಮುಂದಾಗಿದೆ.

 ಬೆಳಗಾವಿ ಬಳಿಯ ಹಿಂಡಲಗಾದಲ್ಲಿ “ಸ್ಮೃತಿ ಭವನ” ನಿರ್ಮಾಣಕ್ಕಾಗಿ ಎಮ್.ಇ.ಎಸ್.ಮುಖಂಡರು ಮಾರ್ಚ್ 31 ರಂದು ಭೂಮಿ ಪೂಜೆ ನೆರವೇರಿಸಿದ್ದಾರೆ. 1986 ರ ಜೂನ್ ಒಂದರಂದು ಮಹಾರಾಷ್ಟ್ರದ ಧುರೀಣ ಶರದ ಪವಾರ ಅವರು ಬೆಳಗಾವಿಯಲ್ಲಿ ಆರಂಭಿಸಿದ “ಸೀಮಾ ಲಢಾಯಿ” ( ಗಡಿ ಚಳವಳಿ) ಕಾಲಕ್ಕೆ ಭಾರೀ ಹಿಂಸಾಚಾರ ನಡೆಯಿತು.

ಮಹಾರಾಷ್ಟ್ರದಿಂದ ಬೆಳಗಾವಿಗೆ ನುಗ್ಗಿದ ಅಲ್ಲಿಯ ನಾಯಕರ ಬೆಂಬಲಿಗರು ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು. ಹಿಂಡಲಗಾ ಪಂಪಿಂಗ್ ಸ್ಟೇಶನ್ ಸುಡಲು ಮುಂದಾದಾಗ ಕರ್ನಾಟಕ ಪೋಲೀಸರು ಗೋಳಿಬಾರ್ ಮಾಡಿದರು. ಇದರಲ್ಲಿ 9 ಹಿಂಸಾಚಾರಿಗಳು ಸಾವನ್ನಪ್ಪಿದರು. ಇವರನ್ನು ಹುತಾತ್ಮರೆಂದು ಬಿಂಬಿಸುತ್ತಿರುವ ಎಮ್.ಇ.ಎಸ್. ಪ್ರತಿವರ್ಷ ಜೂನ್ ಒಂದರಂದು ಹುತಾತ್ಮ ದಿನವನ್ನು ಆಚರಿಸುತ್ತದೆ.

ಗೋಳಿಬಾರ್ ನಲ್ಲಿ ಸತ್ತವರನ್ನು ವೈಭವಿಕರಿಸಲು ಹಾಗೂ ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಎಮ್.ಇ.ಎಸ್. ನಾಯಕರು ಒಂದು ಭವನವನ್ನೇ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರಕಾರ ಈ ಭವನಕ್ಕೆ ಹಣಕಾಸು ನೆರವು ನೀಡಲಿದೆ. ಈ ಭವನದಲ್ಲಿ ಕರ್ನಾಟಕ ಸರಕಾರದ ವಿರುದ್ಧ ಹಾಗೂ ಪೋಲೀಸರ ವಿರುದ್ಧ ಮರಾಠಿಗರನ್ನು ಪ್ರಚೋದಿಸುವ ಛಾಯಾಚಿತ್ರಗಳ ಪ್ರದರ್ಶನ, ಸಾಕ್ಷ್ಯ ಚಿತ್ರಗಳ ಪ್ರದರ್ಶನ ನಡೆಯಲಿವೆ. ಇದು ಕರ್ನಾಟಕ ಸರಕಾರ,ಕನ್ನಡಿಗರ ಹಿತಕ್ಕೆ ಭಾರೀ ಹೊಡೆತ ಬೀಳಲಿದೆ.

Home add -Advt

ಈ ಭವನ ನಿರ್ಮಾಣಕ್ಕಾಗಿ ಖಾಸಗಿಯವರೊಬ್ಬರು ಜಮೀನು ನೀಡಿದ್ದಾರೆ. ಆದರೆ ನಮ್ಮ ಜಿಲ್ಲಾಡಳಿತ ಭವನ ನಿರ್ಮಾಣ ಜಾಗೆಯನ್ನು ಎನ್.ಎ. ಅನುಮತಿ ನೀಡಬೇಕಾಗುತ್ತದೆ. ಇದನ್ನು ಕೂಡಲೇ ತಡೆಹಿಡಿಯುವದು ಅವಶ್ಯಕತೆಯಿದೆ. ಕರ್ನಾಟಕ ಸರಕಾರದ ವಿರುದ್ಧ ಬಂಡೆದ್ದು ಹಿಂಸಾಚಾರ, ದಂಗೆ ನಡೆಸಿ ಗೋಳಿಬಾರ್ ನಲ್ಲಿ ಸತ್ತವರನ್ನು ವಿಜೃಂಭಿಸುವ ಯತ್ನವನ್ನು ಬೆಳಗಾವಿ ಜಿಲ್ಲಾಡಳಿತ ತಡೆಯಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

” ಸ್ಮೃತಿ ಭವನ” ನಿರ್ಮಾಣವನ್ನು ವಿರೋಧಿಸಿ ಶೀಘ್ರವೇ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಪಂಚಾಯತಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮನವಿ ಸಲ್ಲಿಸಲಿದೆ ಎಂದೂ ಅಶೋಕ ಚಂದರಗಿ ತಿಳಿಸಿದ್ದಾರೆ.

Related Articles

Back to top button