Kannada NewsKarnataka NewsLatest
ಕುಗ್ರಾಮದಲ್ಲಿ ಅತ್ಯಾಧುನಿಕ ಸೇತುವೆ ಲೋಕಾರ್ಪಣೆಗೊಳಿಸಿದ ಶಾಸಕಿ ಅಂಜಲಿ ನಿಂಬಾಳಕರ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ -ಕಾಡಂಚಿನ ಜನರ ಸುರಕ್ಷತೆ ಮತ್ತು ಕಾಡಂಚಿನಲ್ಲಿ ಸೇತುವೆ ನಿರ್ಮಾಣದ ಕುರಿತು ಡಾ ಅಂಜಲಿಯವರು ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದ ಅಭಿವೃದ್ಧಿ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.

ಖಾನಾಪುರ ತಾಲೂಕಿನಲ್ಲಿ ಇನ್ನೂ ಐದು ಇದೆ ರೀತಿಯ ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ಮೊದಲಿದ್ದ ಸ್ಥಿತಿಯಲ್ಲಿ ವೃದ್ಧರು, ಶಾಲಾ ಮಕ್ಕಳು, ಮತ್ತು ವಾಹನಗಳು ಸಂಚರಿಸಲು ತುಂಬಾ ಪರದಾಡುವ ಸ್ಥಿತಿ ಇತ್ತು. ಕಟ್ಟಿಗೆ, ಹಗ್ಗ ಬಳಸಿ ತಾತ್ಪೂರ್ತಿಕವಾಗಿ ಜನರೇ ತಯಾರಿಸಿಕೊಳ್ಳುತ್ತ ಬಂದ ಸೇತುವೆ ಮೇಲೆ ಸಂಚರಿಸುವುದು ಹಗ್ಗದ ಮೇಲೆ ಸಂಚರಿಸುವ ಡೊಂಬರಾಟದಂತಿತ್ತು.
ಪ್ರವಾಹದ ಹೊಡೆತಕ್ಕೆ ಸಿಕ್ಕು ಸೇತುವೆ ಮುರಿದು ಹೋಗಿ ಈ ಗ್ರಾಮವು ಅನ್ಯ ಗ್ರಾಮಗಳ ಹಾಗೂ ತಾಲೂಕಿನ ಸಂಪರ್ಕ ಕಳೆದುಕೊಂಡು ಅನಾಥವಾಗುತ್ತಿತ್ತು. ಅನೇಕ ಮಾಧ್ಯಮದ ಟಿವಿಗಳು, ಪತ್ರಿಕೆಗಳು ಹಲವಾರು ಸಲ ದಶಕಗಳಿಂದ ವರದಿ ಮಾಡುತ್ತ ಬಂದಿದ್ದರೂ ಸುರಕ್ಷಿತ ಹೊಸ ಸೇತುವೆ ನಿರ್ಮಾಣವಾಗಿರಲಿಲ್ಲ.
ಗ್ರಾಮದ ಜನರ ಮತ್ತು ಶಾಲಾ ಮಕ್ಕಳ ಕಷ್ಟಕ್ಕೆ ಸ್ಪಂದಿಸಿ ಸುರಕ್ಷಿತ ನವೀನ ತಂತ್ರಜ್ಞಾನದ ಸೇತುವೆ ನಿರ್ಮಿಸಿದ್ದಾರೆ. ಇದರಿಂದ ಮುದುಕರು, ವಿದ್ಯಾರ್ಥಿಗಳು, ಮಹಿಳೆಯರು , ಅಶಕ್ತರು, ರೋಗಿಗಳು ಜೀವನದ ಮುಖ್ಯವಾಹಿನಿಗೆ ಬರಲು ಸುಗಮ ಸಾಧನ ಈ ಸೇತುವೆ ದಾರಿ ಮಾಡಿಕೊಟ್ಟಿದೆ.