*ದಂಡುಮಂಡಳಿ ಸಭೆ ಅರ್ಧಕ್ಕೆ ಬಿಟ್ಟು ಹೊರ ನಡೆದ ಸಂಸದ ಜಗದೀಶ್ ಶೆಟ್ಟರ್ *

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ದಂಡುಮಂಡಳಿ ಇಂದು ನಡೆಸಿದ ಸಾಮಾನ್ಯ ಸಭೆಯಲ್ಲಿ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಇವರು ಭಾಗವಹಿಸಿ, ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕೆ ದಂಡುಮಂಡಳಿ ಪ್ರದೇಶದ ಸುಮಾರು 6045 ಚ.ಮಿ ಕ್ಷೇತ್ರವನ್ನು ಕೃಷಿ ಮರುಕಟ್ಟೆ ಸಮಿತಿಯ ಪರವಾನಗಿ ಪಡೆಯದೆ ನಿಯಮ ಬಾಹಿರವಾಗಿ ಹಂಚಿಕೆ ಮಾಡಿರುವ ವಿಚಾರವಾಗಿ ದಂಡುಮಂಡಳಿಗೆ ಲಕ್ಷಾಂತರ ರೂಪಾಯಿ ನಷ್ಟಕ್ಕೆ ದಾರಿ ಮಾಡಿಕೊಟ್ಟಿರುವ ವಿಷಯ ಪ್ರಸ್ತಾಪಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದಂಡುಮಂಡಳಿ ಪ್ರದೇಶವನ್ನು ಯಾವುದೊ ಒಂದು ಉದ್ದೇಶಕ್ಕಾಗಿ ಹಂಚಿಕೆ ಮಾಡುವ ಪೂರ್ವದಲ್ಲಿ ಬೆಳಗಾವಿ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಠರಾವು ಪಾಸು ಮಾಡಿ, ಟೆಂಡರ್ ಅಹ್ವಾನಿಸಿ, ಟೆಂಡರ್ ಪಡೆದ ವ್ಯಕ್ತಿ ಯಾವ ಉದ್ದೇಶಕ್ಕೆ ಇದನ್ನು ಬಳಸಬಹುದು ಎಂಬುವದನ್ನು ವಿಚಾರಿಸದೆ, ಹಂಚಿಕೆ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿಯಾಗಿದೆ.
ಪ್ರಯುಕ್ತ, ಈ ಕೂಡಲೆ ಠರಾವನ್ನು ರದ್ದು ಪಡಿಸಿ, ಮರು ಅಥವಾ ಹೊಸ ಠರಾವು ಸಭೆಯಲ್ಲಿ ಪ್ರಸ್ತಾಪಿಸುವ ವಿಷಯವಾಗಿ ಅವಲೋಕಿಸುವಂತೆ, ಸಭೆಯ ಅಧ್ಯಕ್ಷರಲ್ಲಿ ಸಂಸದರು ಪ್ರಸ್ತಾಪಿಸಿದಾಗ ನಿಲುವಳಿಯನ್ನು ನಿರಾಕರಿಸಿ, ಅಧ್ಯಕ್ಷರು ಈ ಹಿಂದಿನ ಸಭೆಯ ಠರಾವು ಪರಿಗಣಿಸಲಾಗುವದೆಂದು ಸಭೆಗೆ ತಿಳಿದಾಗ, ಜಗದೀಶ ಶೆಟ್ಟರ ಇವರು ಅಧ್ಯಕ್ಷರ ನೀತಿಯನ್ನು ಖಂಡಿಸಿ, ಸಭೆಯ ಕೊಠಡಿಯಿಂದ ಹೊರ ನಡೆದು ಬಂದಿದ್ದಾರೆ.


