ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ತಗುಲಿದ್ದ ವ್ಯಕ್ತಿ ಡಿಸ್ಚಾರ್ಜ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ದಿನದಿಂದಾ ದಿನಾಕ್ಕೆ ಹೆಚ್ಚುತ್ತಿದ್ದು, ಕಳೆದ ಒಂದೇ ದಿನ ಕೊರೊನಾ ಪಾಸಿಟಿವ್ ಸಂಖ್ಯೆ 42ಕ್ಕೆ ಏರಿಕೆ ಆಗಿದೆ. ಈ ನಡುವೆ ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಮೊದಲು ಕೊರೊನಾ ಸೋಂಕು ಪತ್ತೆಯಾಗಿದ್ದ ವ್ಯಕ್ತಿ ಪೇಶಂಟ್ ನಂ.52 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜ್ಯೂಬಿಲಿಯಂಟ್ ಕಾರ್ಖಾನೆಯ ಹಲವು ನೌಕರರಿಗೆ ಈತನಿಂದ ಸೋಂಕು ಹರಡಿತ್ತು. ಈತನನ್ನು ಮೈಸೂರಿನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅಧಿಕೃತ ಮಾಹಿತಿ ಮಾಡಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೇಸ್ ನಂ.52 ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾನೆ. ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾನೆ.

ನನಗೆ 10 ದಿನಗಳ ಹಿಂದೆ ಜ್ವರ ಇತ್ತು. ಮೊದಲು ಸ್ಥಳೀಯ ಕ್ಲಿನಿಕ್‍ಗೆ ತೋರಿಸಿದ್ದೆ. ಮಾರ್ಚ್ 21ರಂದು ನಾನು ಗೋಪಾಲಗೌಡ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರ ಮಾರ್ಚ್ 25ರಂದು ಕೆ.ಆರ್.ಆಸ್ಪತ್ರೆಗೆ ಕರೆತಂದರು. ನನಗೆ ಎಲ್ಲ ರೀತಿಯ ಪರೀಕ್ಷೆ ಮಾಡಿದರು. ಮಾರ್ಚ್ 30ರಂದು ನನ್ನನ್ನ ಕೋವಿಡ್-19 ಆಸ್ಪತ್ರೆಗೆ ಕಳುಹಿಸಿದರು. 14 ದಿನಗಳ ಕಾಲ ಚಿಕಿತ್ಸೆ ನೀಡಿ ನನ್ನನ್ನು ಗುಣಮುಖರನ್ನಾಗಿ ಮಾಡಿದ್ದಾರೆ. ಸೋಂಕು ಪೀಡಿತರನ್ನು ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಎಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿ. ಆದರೆ ನಾನು ಮಾತ್ರ ಈಗಲೇ ಮನೆಗೆ ಹೋಗಲ್ಲ, ನಾನು ಕ್ವಾರಂಟೈನ್‍ಗೆ ಒಳಗಾಗಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಈ ನಡುವೆ ಮೈಸೂರಿನಲ್ಲಿ ಮತ್ತೆ ಐವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಕೇವಲ ಮೈಸೂರಿನಲ್ಲಿಯೇ ಸೋಂಕಿತರ ಸಂಖ್ಯೆ 42ಕ್ಕೆ ಏರಿದೆ. 8 ವರ್ಷದ ಬಾಲಕನಿಗೂ ಸೋಂಕು ತಗುಲಿದೆ. ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳಿಗೂ ಸೋಂಕು ದೃಢವಾಗಿದ್ದು, ಸೋಂಕಿತರ ಪುತ್ರ ಹಾಗೂ ಪತ್ನಿಗೂ ಸೋಂಕು ಹರಡಿದೆ. ಹೀಗಾಗಿ ಜ್ಯೂಬಿಲಿಯೆಂಟ್ ಕಾರ್ಖಾನೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button