Uncategorized

*BMRCL ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಬಿಎಂಆರ್ ಸಿ ಎಲ್ (Bangalore Metro Rail Corporation Limited) ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಮೆಟ್ರೋ ಸಿಬ್ಬಂದಿಯ ನಿರ್ಲಕ್ಷದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದ ಕಾರಣಕ್ಕೆ ಬೈಯ್ಯಪ್ಪನಹಳ್ಳಿ ಪೊಲೀಸರು ಬಿಎಂ ಆರ್ ಸಿ ಎಲ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಉತ್ತರ ನೀಡುವಂತೆ ಮುಖ್ಯ ಭದ್ರತಾ ಅಧಿಕಾರಿಗೆ ನೋಟೀಸ್ ನೀಡಿದ್ದಾರೆ.

ತಿಮ್ಮೇಗೌಡ (67) ಎಂಬುವವರಿಗೆ ಮೆಟ್ರೋದಲ್ಲಿ ಪ್ರಯಾಣಿಸುವಾಗ ಎದೆನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದರೂ ಮೆಟ್ರೋ ಸಿಬ್ಬಂದಿಗಳು, ಅಧಿಕಾರಿಗಳು ಗಮನಿಸಿಲ್ಲ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ತಿಮ್ಮೇಗೌಡ ಮೆಟ್ರೋ ರೈಲು ಹತ್ತಿದ್ದರು. ಕೆಲ ಸಮಯದಲ್ಲೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ರೈಲು ತಲುಪಿದಾಗ ಸಾರ್ವಜನಿಕರು ಅವರನ್ನು ರೈಲಿನಿಂದ ಹೊರ ತಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ.

ವ್ಯಕ್ತಿ ಫ್ಲಾಟ್ ಫಾರ್ಮ್ ಮೇಲೆ ಕುಳಿತು ಒದ್ದಾಡುತ್ತಿದ್ದರೂ ಮೆಟ್ರೋ ಸಿಬ್ಬಂದಿಗಳಾಗಲಿ, ಅಧಿಕಾರಿಗಳಾಗಲಿ ಅವರತ್ತ ಗಮನ ಕೊಟ್ಟಿಲ್ಲ. ಕೆಲ ಹೊತ್ತಿನ ಬಳಿಕ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ತಿಮ್ಮೇಗೌಡ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ತಿಮ್ಮೇಗೌಡ ಸಾವನ್ನಪ್ಪಿದ್ದಾರೆ.

ಈ ಆಘಾತಕಾರಿ ಘಟನೆ ಬೆನ್ನಲ್ಲೇ ಸರವಜನಿಕರು ಮೆಟ್ರೋ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋದಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣ ಹಿನ್ನೆಲೆಯಲ್ಲಿ ಸಿಬ್ಬಂದಿಗಳು, ಅಧಿಕಾರಿಗಳ ನಿರ್ಲಕ್ಷಕ್ಕೆ ಬಿಎಂ ಆರ್ ಸಿಎಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button