*ನಂದಗಡ ಮಾರ್ಕೆಟಿಂಗ್ ಸೊಸೈಟಿ ಅವ್ಯವಹಾರಗಳ ತನಿಖೆಗಾಗಿ ವಿಚಾರಣಾಧಿಕಾರಿ ನೇಮಕಗೊಳಿಸಿ ಆದೇಶ*

ಪ್ರಗತಿವಾಹಿನಿ ಸುದ್ದಿ: ತಾಲ್ಲೂಕಿನ ನಂದಗಡದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ (ಮಾರ್ಕೆಟಿಂಗ್ ಸೊಸೈಟಿ) ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಬೆಳಗಾವಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ವಿಚಾರಣಾಧಿಕಾರಿಗಳಾಗಿ ನೇಮಕಗೊಳಿಸಿರುವ ಸಹಕಾರ ಸಂಘಗಳ ಉಪ ನಿಬಂಧಕ ರವೀಂದ್ರ ಪಾಟೀಲ ಮೂರು ತಿಂಗಳ ಒಳಗೆ ಈ ಅವ್ಯವಹಾರದ ವಿವರವಾದ ತನಿಖೆಯನ್ನು ನಡೆಸಿ ವರದಿ ಸಲ್ಲಿಸುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರಡಿ ನಂದಗಡ ಮಾರ್ಕೆಟಿಂಗ್ ಸಂಘದ ಲೆಕ್ಕಪರಿಶೋಧನಾ ವರದಿ, ಸಂಘದ ನಿರ್ದೇಶಕರಿಗೆ 172.61 ಲಕ್ಷ ಮುಂಗಡ ವಿತರಣೆ, ಸಂಘದಲ್ಲಿ ಕೈಗೊಳ್ಳಲಾದ ನಗದು ವ್ಯವಹಾರ, ಸಾಲ ವಿತರಣೆಯಲ್ಲಿ ಅವ್ಯವಹಾರ, ಅಡಮಾನ ಸಾಲಗಳಿಗೆ ಬಡ್ಡಿ ಪಡೆಯದಿರುವುದು, ಸೇವಾ ನಿವೃತ್ತಿ ಹೊಂದಿದ್ದ ಸಂಘದ ವ್ಯವಸ್ಥಾಪಕರಿಗೆ ಗೌರವಧನ ನಿರ್ಧರಿಸಿ ಮರು ನೇಮಕಾತಿ ಮಾಡಿಕೊಂಡಿರುವುದು, ಲೋಂಡಾ ಗ್ರಾಮದಲ್ಲಿ ಸಂಘ 24 ಲಕ್ಷ ವ್ಯಯಿಸಿ ನಿರ್ಮಿಸಿದ ಕಟ್ಟಡ ಕಾಮಗಾರಿಯಲ್ಲಿ ಸಹಕಾರ ಇಲಾಖೆಯ ಮಾರ್ಗಸೂಚಿಯ ಪಾಲನೆ, ಸಂಘದ ಶಾಖೆಗಳಲ್ಲಿ ನಿಯಮ ಮೀರಿ ಕೈಶಿಲ್ಕು ನಿರ್ವಹಣೆ, ಸಂಘದಿಂದ ನೀಡಿರುವ 22.42 ಲಕ್ಷ ಮುಂಗಡ ಸೇರಿದಂತೆ ಸಂಘದಲ್ಲಿ ನಡೆದಿದೆ ಎನ್ನಲಾದ ವಿವಿಧ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಬೇಕು. ಈ ಎಲ್ಲ ಅಂಶಗಳ ಬಗ್ಗೆ ಸಮಗ್ರವಾದ ಪರಿಶೀಲನೆ ನಡೆಸಬೇಕು ಮತ್ತು 3 ತಿಂಗಳ ಒಳಗಾಗಿ ಸ್ಪಷ್ಟವಾದ ವರದಿ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಸಂಘದೆ ವಿಚಾರಣಾಧಿಕಾರಿಗೆ ನೀಡಿರುವ ಆದೇಶದಲ್ಲಿ ನಿರ್ದೇಶಿಸಿದ್ದಾರೆ.
ನಂದಗಡ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಕೋಟ್ಯಂತರ ಮೌಲ್ಯದ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕ ವಿಠ್ಠಲ ಹಲಗೇಕರ ಆರೋಪಿಸಿದ್ದರು. ಈ ಅವ್ಯವಹಾರದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಸಂಘದ ಹಾಲಿ ಅಧ್ಯಕ್ಷರಾದ ಬಿಡಿಸಿಸಿ ನಿರ್ದೇಶಕ ಅರವಿಂದ ಪಾಟೀಲ ಮುಂಬರುವ ಅ.19ರಂದು ನಡೆಯಲಿರುವ ಬಿಡಿಸಿಸಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಪೂರ್ವಸಿದ್ಧತೆ ನಡೆಸಿದ್ದು, ಬಿಡಿಸಿಸಿ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಳಾಗಿರುವ ಚನ್ನರಾಜ ಹಟ್ಟಿಹೊಳಿ ಹಾಗೂ ವಿಠ್ಠಲ ಹಲಗೇಕರ ಅವರಿಬ್ಬರೂ ಅರವಿಂದ ಪಾಟೀಲ ಅವರಿಗೆ ಹಿನ್ನಡೆ ಉಂಟು ಮಾಡಬೇಕು ಎಂಬ ಉದ್ದೇಶದಿಂದ ಮಾರ್ಕೆಟಿಂಗ್ ಸೊಸೈಟಿ ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಅವ್ಯವಹಾರಗಳ ತನಿಖೆಗೆ ರಾಜಕೀಯ ಲೇಪ ಅಂಟಿಕೊಂಡಿದ್ದು, ಸಧ್ಯ ಸೊಸೈಟಿಯ ಅವ್ಯವಹಾರಗಳ ತನಿಖೆಗಾಗಿ ಸರ್ಕಾರ ಹೊರಡಿಸಿದ ಆದೇಶ ತಾಲ್ಲೂಕಿನೆಲ್ಲೆಡೆ ಪ್ರಮುಖ ಚರ್ಚೆಯ ವಿಷಯವಾಗಿದೆ. ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಈ ತನಿಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕು ಪಡೆಯಲಿದೆ ಎಂದು ತಾಲ್ಲೂಕಿನ ಸಹಕಾರಿ ಕ್ಷೇತ್ರಗಳ ಧುರೀಣರು ಅಭಿಪ್ರಾಯ ಪಟ್ಟಿದ್ದಾರೆ.