Election NewsKannada NewsKarnataka NewsNationalPolitics

ಎನ್ ಡಿ ಎ ಸಭೆ ಮುಕ್ತಾಯ: ನರೇಂದ್ರ ಮೋದಿಯೇ ನಮ್ಮ ನಾಯಕ ಎಂದ ಮಿತ್ರ ಪಕ್ಷಗಳು

ಪ್ರಗತಿವಾಹಿನಿ ಸುದ್ದಿ: ಲೋಕಸಭೆಯ ಫಲಿತಾಂಶದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದ ಹಿನ್ನಲೆ ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟದ ಹಿರಿಯ ನಾಯಕರು ಸರ್ಕಾರ ರಚನೆ ಬಗ್ಗೆ  ಚರ್ಚಿಸಿದ್ದು, ಮೋದಿಯೆ ನಮ್ಮ ನಾಯಕ ಎಂದು ಎಲ್ಲರು ಒಪ್ಪಿಕೊಂಡಿದ್ದಾರೆ. 

ನರೇಂದ್ರ ಮೋದಿ ಅವರೆ ಮೂರನೆ ಅವಧಿಗೆ ಪ್ರಧಾನಿಯಾಗಲಿದ್ದಾರೆ.‌ ಹಾಗೂ ನರೇಂದ್ರ ಮೋದಿ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ಸಮಾಜದ ವಂಚಿತ ವರ್ಗಗಳ ಸೇವೆಗೆ ಮೈತ್ರಿ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುವ ನಿರ್ಣಯವನ್ನು ಎನ್‌ಡಿಎ ನಾಯಕರು ಅಂಗೀಕರಿಸಿದ್ದಾರೆ.‌

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರೂ ಉಪಸ್ಥಿತರಿದ್ದರು.

ಎನ್‌ಡಿಎ ಸಭೆಯನ್ನು ಪ್ರಧಾನಿ ನಿವಾಸದಲ್ಲಿ ನಡೆಸಲಾಯಿತು, ಈ ಸಭೆಯಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದು, ಮೂರನೇ ಬಾರಿಗೆ ಎನ್‌ಡಿಎಗೆ ಈ ಜನಾದೇಶಕ್ಕಾಗಿ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ರಚನೆಯಾಗಲಿದ್ದು, ಶೀಘ್ರದಲ್ಲಿಯೇ ಎಲ್ಲ ಸಂಸದರ ಸಭೆ ನಡೆಯಲಿದೆ ಎಂದು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಹೇಳಿದ್ದಾರೆ.

ಜೂನ್ 7 ರಂದು ಎನ್‌ಡಿಎ ಸಂಸದರೊಂದಿಗಿನ ಸಭೆಯ ನಂತರ ಎನ್‌ಡಿಎ ಮಿತ್ರಪಕ್ಷಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button