ಅಪರಾಧಿ ಪವನ್ ಗುಪ್ತಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿದ್ದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿರಸ್ಕರಿಸಿದ್ದು, ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳಿಗೆ ಇದ್ದ ಕೊನೆ ಮಾರ್ಗವೂ ಮುಚ್ಚಿದಂತಾಗಿದೆ.

ಪವನ್ ಗುಪ್ತಾ ಕ್ಷಮಾದಾನ ಅರ್ಜಿ ಸಾಲ್ಲಿಸಿದ್ದ ಹಿನ್ನಲೆಯಲ್ಲಿ ಮಾ. 3ಕ್ಕೆ ನೇಣಿಗೇರಬೇಕಾಗಿದ್ದ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆಯನ್ನು ಮುಂದೂಡಲಾಗಿತ್ತು. ಆದರೀಗ ಪವನ್ ಗುಪ್ತಾ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರಿಂದ ಗಲ್ಲುಶಿಕ್ಷೆ ಹಾದಿ ಸುಗಮವಾಗಿದೆ.

Home add -Advt

ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ನಾಲ್ವರು ಅಪರಾಧಿಗಳು ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು. ಪವನ್​ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಅಲ್ಲದೇ, ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕು ಎಂಬ ಕೋರಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಅಪರಾಧಿಗಳ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳು ಕೊನೆಗೊಂಡಿದ್ದವು. ಆದರೆ, ಪವನ್ ಗುಪ್ತಾ ಕೊನೆಕ್ಷಣದಲ್ಲಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಸಂಜೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಿತ್ತು. ಈಗ ಅಂತಿಮವಾಗಿ ನ್ಯಾಯಾಲಯ ಹೊಸ ಡೆತ್ ವಾರಂಟ್ ಜಾರಿ ಮಾಡಬೇಕಿದ್ದು, ನಿರ್ಭಯಾ ಅತ್ಯಾಚಾರಿಗಳಿಗೆ ಇನ್ನಾದರೂ ಗಲ್ಲುಶಿಕ್ಷೆಯಾಗುತ್ತಾ ಕಾದುನೋಡಬೇಕಿದೆ.

Related Articles

Back to top button