Kannada NewsNationalPolitics

*NLCILಗೆ ಹೂಡಿಕೆ ವಿನಾಯಿತಿ; ಕೇಂದ್ರ ಸಚಿವ ಸಂಪುಟ ಅಸ್ತು: ಪ್ರಲ್ಹಾದ ಜೋಶಿ*

₹7,000 ಕೋಟಿ ಹೂಡಿಕೆ, ಜಂಟಿ ಉದ್ಯಮಕ್ಕೆ ಅವಕಾಶ

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ NLCILಗೆ ಹೂಡಿಕೆ ವಿನಾಯಿತಿ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದು, ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಗೆ (CPSE) ಅನ್ವಯವಾಗುವಂತೆ ಸದ್ಯ ಚಾಲ್ತಿಯಲ್ಲಿರುವ ಹೂಡಿಕೆ ಮಾರ್ಗಸೂಚಿಗಳಿಂದ NLC ಇಂಡಿಯಾ ಲಿಮಿಟೆಡ್ (NLCIL)ಗೆ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಸಚಿವ ಸಂಪುಟ ಹೂಡಿಕೆ ವಿನಾಯಿತಿಗೆ ಅನುಮೋದನೆ ನೀಡಿದ್ದರಿಂದಾಗಿ NLCIL ಸ್ವಾಮ್ಯದ ಅಂಗಸಂಸ್ಥೆಯಾದ NLC ಇಂಡಿಯಾ ನವೀಕರಿಸಬಹುದಾದ ಲಿಮಿಟೆಡ್ (NIRL)ನಲ್ಲಿ ₹7,000 ಕೋಟಿ ಹೂಡಿಕೆ ಮಾಡಲು ಮತ್ತು NIRL ನೇರವಾಗಿ ಅಥವಾ ಜಂಟಿ ಉದ್ಯಮಗಳ ರಚನೆ ಮೂಲಕ ವಿವಿಧ ಯೋಜನೆಗಳಲ್ಲಿ ಹೂಡಿಕೆಗೆ ಅವಕಾಶವಾಗಲಿದೆ ಎಂದು ಹೇಳಿದ್ದಾರೆ.

Home add -Advt

2030ರ ವೇಳೆಗೆ 10.11 GW ನವೀಕರಿಸಬಹುದಾದ ಇಂಧನ (RE) ಸಾಮರ್ಥ್ಯ ಅಭಿವೃದ್ಧಿಪಡಿಸುವ ಮತ್ತು 2047ರ ವೇಳೆಗೆ 32 GWಗೆ ವಿಸ್ತರಿಸುವ NLCILನ ಮಹತ್ವಾಕಾಂಕ್ಷೆಯ ಗುರಿಗೆ ಬೆಂಬಲವಾಗಿ ಈ ವಿನಾಯಿತಿ ಘೋಷಿಸಲಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆಯಿದೆ. ಸಮುದಾಯ ಮತ್ತು ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ಸಾಕಾರಗೊಳ್ಳಲಿದೆ ಎಂದಿದ್ದಾರೆ.

“ಪಂಚಾಮೃತ” ಯೋಜನೆ ಗುರಿ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಾವಧಿಯ ಬದ್ಧತೆಗೆ ಅನುಗುಣವಾಗಿ 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸಲು ಭಾರತ ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ವಲಯ ಮಹತ್ತರ ಹೆಜ್ಜೆಯಿರಿಸಿದೆ ಎಂದು ಸಚಿವ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ಮಹತ್ವದ ವಿದ್ಯುತ್ ಸೌಲಭ್ಯ ಮತ್ತು ನವರತ್ನ CPSE ಆಗಿ, NLCIL ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹೂಡಿಕೆಯ ಮೂಲಕ, NLCIL ತನ್ನ ನವೀಕರಿಸಬಹುದಾದ ಇಂಧನ ಬಂಡವಾಳವನ್ನು ಗಣನೀಯವಾಗಿ ವಿಸ್ತರಿಸಲು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಉದ್ದೇಶಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಪ್ರಯತ್ನಿಸುತ್ತದೆ.

ಪ್ರಸ್ತುತದಲ್ಲಿ NLCIL ಒಟ್ಟು 2 GW ಸ್ಥಾಪಿತ ಸಾಮರ್ಥ್ಯದೊಂದಿಗೆ 7 ನವೀಕರಿಸಬಹುದಾದ ಇಂಧನ ಸ್ವತ್ತುಗಳನ್ನು ನಿರ್ವಹಿಸುತ್ತಿದ್ದು, ಈ ಸ್ವತ್ತುಗಳನ್ನು NIRLಗೆ ವರ್ಗಾಯಿಸಲಾಗುತ್ತದೆ. NIRL ಹೊಸ ಯೋಜನೆಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್‌ನಲ್ಲಿ ಭಾಗವಹಿಸುವುದು ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತದೆ ಎಂದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ NLCILಗೆ ಹೂಡಿಕೆ ವಿನಾಯಿತಿ ನೀಡಿದ್ದರಿಂದಾಗಿ ಭವಿಷ್ಯದಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಕಲ್ಲಿದ್ದಲು ಆಮದು ಸಹ ಕಡಿತಗೊಳಿಸುವ ಉದ್ದೇಶವಿದೆ. ದೇಶಾದ್ಯಂತ 24×7 ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆಗೆ ಪ್ರತೀಕವಾಗಿದ್ದು, ಈ ಮೂಲಕ ಹಸಿರು ಇಂಧನ ವಲಯದಲ್ಲಿ ಭಾರತದ ನಾಯಕತ್ವ ಸ್ಥಾನವನ್ನು ಬಲಪಡಿಸಲಿದೆ ಎಂದಿದ್ದಾರೆ.

Related Articles

Back to top button