
ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಬಲಿಪಡೆದ ಬೆನ್ನಲ್ಲೇ ಭಾರತೀಯ ಸೇನೆ ಇಂದು ಬೆಳಗಿನ ಜಾವ ಪಾಕಿಸ್ತಾನ ಉಗ್ರರ ವಿರುದ್ಧ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಉಭಯ ದೇಶಗಳ ನಡುವೆ ಯುದ್ಧದ ಸ್ಥಿತಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಯುದ್ಧದ ಸಿದ್ಧತೆ ನಡೆಸಿದ್ದು, ಸಮರಾಭ್ಯಾಸ, ತಾಲೀಮು ನಡೆಸುವ ಮೂಲಕ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತದಾದ್ಯಂತ ಇಂದು ಯುದ್ಧದ ತಾಲೀಮು ನಡೆಸುವ ಮೂಲಕ ಯುದ್ಧದ ಸಂದರ್ಭದಲ್ಲಿ ಅಣುಕು ಪ್ರದರ್ಶನ ನಡೆಸಲಾಯಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸೇನೆ, ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕರು ಮೊದಲಾದವರು ಮಾಕ್ ಡ್ರಿಲ್ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು.
ಯುದ್ಧದ ಸಂದರ್ಭದಲ್ಲಿ ಏನೆಲ್ಲ ಪರಿಸ್ಥಿತಿ ಎದುರಾಗಬಹುದು? ಜನರು ಯಾವ ರೀತಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು? ಕಟ್ಟಡದ ಒಳಗೆ ಸಿಲುಕಿದವರನ್ನು, ಎತ್ತರದ ಕಟ್ಟಡದಲ್ಲಿದ್ದವರನ್ನು, ನೀರಿನಲ್ಲಿ ಸಿಲುಕಿಕೊಂಡವರನ್ನು ಹೇಗೆ ರಕ್ಷಣೆ ಮಾಡಬೇಕು? ರಕ್ಷಣಾ ತಂಡ ಹೇಗೆ ಕಾರ್ಯಾಚರಣೆ ನಡೆಸಲಿದೆ? ತಕ್ಷಣ ಜನರು ಹೇಗೆ ಅಲರ್ಟ್ ಆಗಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಅಣುಕು ಪ್ರದೇಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಮೂಲಕ ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ ಎಂಬ ಸಂದೇಶ ರವಾನಿಸಲಾಯಿತು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 3:58ರಿಂದ 4ಗಂಟೆವರೆಗೆ 2 ನಿಮಿಷಗಳ ಕಾಲ ಯುದ್ಧದ ಸೈರನ್ ಮೊಳಗಿತು. ಈ ಮೂಲಕ ಯುದ್ಧದ ತಾಲೀಮು ನಡೆಸಲಾಯಿತು. ಬಳಿಕ ಅಣುಕು ಪ್ರದೇಶನದ ಮುಲಕ ಯುದ್ಧದ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬೆಂಗಳೂರಿನ 35 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
ದೆಹಲಿ, ಮುಂಬೈ, ಮಹಾರಾಷ್ಟ್ರ, ಹೈದರಾಬಾದ್, ಬೆಂಗಳೂರು, ಕಾರವಾರ, ಶಿವಮೊಗ್ಗ, ಜೈಪುರ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಲ್ಲಿ ಆಪರೇಷನ್ ಅಭ್ಯಾಸ್ ಹೆಸರಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.