
ಪ್ರಗತಿವಾಹಿನಿ ಸುದ್ದಿ: ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ 35-40 ಪಾಕಿಸ್ತಾನಿ ಸೈನಿಕರು ಬಲಿಯಾಗಿದ್ದಾರೆ ಎಂದು ಭಾರತದ ಮಿಲಿಟರಿ ಕಾರ್ಯಾಚರಣೆ ಮಹಾನಿರ್ದೇಶಕ ಡಿಜಿಎಂಓ ತಿಳಿಸಿದೆ.
ಭಾರತದ ಮಿಲಿಟರಿ ಕಾರ್ಯಾಚರಣೆಗಳ ಲೆಫ್ಟಿನೆಂಟ್ ಜನರಲ್ ರಾಜೀವ್ ಘಯ್, ವಾಯುಪಡೆ ಕಾರ್ಯಾಚರಣೆ ಮಹಾನಿರ್ದೇಶಕ ಎಕೆ ಭಾರ್ತಿ, ವೈಸ್ ಅಡ್ಮಿರಲ್ ಎ.ಎಸ್ ಪ್ರಮೋದ್ ಪಾಲ್ಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ವಿವರಿಸಿದರು.
ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 35-40 ಸೈನಿಕರು ಹತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಭಾರತದ ಐವರು ಸೈನಿಕರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ಕು ದಿನಗಳ ಕಾಲ ನಡೆದ ಆಪರೇಷನ್ ಸಿಂಧೂರ್ ಹಾಗೂ ನಂತರದ ಸಂಘರ್ಷದಲ್ಲಿ ಭಾರತದ ಸೇನೆ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಪ್ರಾಬಲ್ಯ ಮೆರೆದಿದೆ. ಪಾಕಿಸ್ತಾನ ಹಾಗೂ ಪಿಒಕೆಯಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಡಲಾಗಿದೆ. ಪಾಕಿಸ್ತಾನದ 10 ಮಿಲಿಟರಿ ನೆಲೆಗಳಿಗೆ ಹಾನಿಯಾಗಿದೆ.
ಪುಲ್ವಾಮಾ ದಾಳಿ ಸಂಚುಕೋರರ ಹತ್ಯೆ, ಐಸಿ-814 ಹೈಜಾಕ್ ಮಾಡಿದವರ ಹತ್ಯೆ ಮಾಡಲಾಗಿದೆ. ಲಾಹೋರ್ ನಲ್ಲಿ ರಾಡರ್ ಗಳನ್ನು ನಾಶಪಡಿಸಲಾಗಿದೆ. ಭಾರತದ ದಾಳಿ ವೇಳೆಯೂ ಪಾಕಿಸ್ತಾನದ ನಾಗರಿಕ ವಿಮಾನ ಹಾರಾಟ ನಡೆಯುತ್ತಿತ್ತು. ಪಾಕಿಸ್ತಾನದ ಒಂದೇ ಒಂದು ನಾಗರಿಕ ವಿಮಾನಕ್ಕೂ ಹಾನಿ ಮಾಡಿಲ್ಲ ಎಂದು ವಿವರಿಸಿದರು.