
ಸಂಚಾರಿ ಪೊಲೀಸರ ಎಡವಟ್ಟಿಗೆ ಮಗು ಸಾವು ಪ್ರಕರಣ
ಪ್ರಗತಿವಾಹಿನಿ ಸುದ್ದಿ: ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಬೈಕ್ ನಿಂದ ಬಿದ್ದು ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರ ವರ್ತನೆಗೆ ಗೃಹ ಸಚಿವ ಪರಮೇಶ್ವರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ವರ್ತನೆ ತಲೆತಗ್ಗಿಸುವಂತದ್ದು, ಘಟನೆಯಲಿ ಪೊಲೀಸರು ಮಾನವೀಯತೆ, ಸ್ವಂತಿಕೆಯನ್ನೂ ಪ್ರದರ್ಶಿಸಿಲ್ಲ. ಈ ರೀತಿ ವರ್ತನೆ ಸರಿಯಲ್ಲ ಎಂದು ಗರಂ ಆದರು.
ಇಂತಹ ಘಟನೆ ಮರುಕಳಿಸದಂತೆ ನಾವೂ ಕ್ರಮ ಕೈಗೊಳ್ಳುತ್ತೇವೆ. ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ನಿಟ್ಟಿನಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ಪೊಲೀಸರು ಅವೈಜ್ಞಾನಿಕವಾಗಿ ಸವಾರರನ್ನು ತಡೆಯುವುದನ್ನು ನಿಲ್ಲಿಸಿ. ಮಂಡ್ಯದಲ್ಲಿ ಆದ ಘಟನೆ ಮತ್ತೆ ಆಗದಂತೆ ನೋಡಿಕೊಳ್ಳಿ. ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತುಕೊಂಡಿರುತ್ತಾರೆ. ಬಳಿಕ ದಿಢೀರ್ ಎಂದು ಬಂದು ವಾಹನ ತಡೆಯುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಪೊಲೀಸರು ಅನುಸರಿಸಬೇಕು ಎಂದು ಸೂಚನೆ ನೀಡಿದರು.
ಮಂಡ್ಯದಲ್ಲಿ ಆದ ಘಟನೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಪೊಲೀಸರ ವರ್ತನೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.