*ಜನರು ವೈದ್ಯರಲ್ಲಿ ದೇವರ ಸ್ವರೂಪ ಕಾಣುತ್ತಾರೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್* *ಸೆಂಟ್ರಾಕೇರ್ ಆಸ್ಪತ್ರೆ ಉದ್ಘಾಟನೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಿಂದೆಲ್ಲ ವೈದ್ಯರ ಸಂಖ್ಯೆಯೂ ಕಡಿಮೆ ಇತ್ತು, ರೋಗಗಳ ಸಂಖ್ಯೆಯೂ ಕಡಿಮೆ ಇತ್ತು. ಆದರ ಇತ್ತೀಚಿನ ದಿನಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ, ಹಾಗೆಯೇ ರೋಗಗಳ ಸಂಖ್ಯೆಯೂ ಬೆಳೆಯುತ್ತಿದೆ. ಆಸ್ಪತ್ರೆಗೆ ಬಂದ ರೋಗಿ ಆದಷ್ಟು ಬೇಗ ಮನೆಗೆ ಮರಳಬೇಕೆಂದು ಬಯಸುತ್ತಾನೆ. ಜನರು ವೈದ್ಯರಲ್ಲಿ ದೇವರ ಸ್ವರೂಪ ಕಾಣುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಭಾನುವಾರ ಬೆಳಗಾವಿಯ ಶಗುನ್ ಗಾರ್ಡನ್ ನಲ್ಲಿ ನಡೆದ ಸೆಂಟ್ರಾಕೇರ್ ಆಸ್ಪತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿಯ ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕೆನ್ನುವ ಮಹದಾಸೆಯಿಂದ ಡಾ.ನೀತಾ ದೇಶಪಾಂಡೆ ಮತ್ತು ತಂಡದವರು ನೂತನ ಆಸ್ಪತ್ರೆ ಆರಂಭಿಸಿದ್ದಾರೆ. ಇದರಿಂದ ಅವರಿಗೂ, ಬೆಳಗಾವಿಯ ಜನರಿಗೂ ಒಳ್ಳೆಯದಾಗಲಿ. ರೋಗ ಬರುವುದನ್ನು ತಡೆಯುವುದಕ್ಕೇ ಮೊದಲ ಆದ್ಯತೆ ಎನ್ನುವ ಸೆಂಟ್ರಾಕೇರ್ ಆಸ್ಪತ್ರೆಯ ಧ್ಯೇಯ ಉತ್ತಮವಾಗಿದೆ. ಜನರು ಇದರ ಸದುಪಯೋಗಪಡಿಸಿಕೊಂಡು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಚಿವರು ಹೇಳಿದರು.

ನಾನಾ ಪಾಟೇಕರ್ ಮತ್ತು ಸಂಭಾಜಿ ಭಿಡೆ ಗುರೂಜಿ ನಿಸ್ವಾರ್ಥದಿಂದ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಡಾ.ಪ್ರಭಾಕರ ಕೋರೆ ಬೆಳಗಾವಿಯ ಹೆಸರು ಜಾಗತಿಕ ನಕ್ಷೆಯಲ್ಲಿ ಮೂಡುವಂತೆ ಮಾಡಿದ್ದಾರೆ. ಅವರೆಲ್ಲ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.

ಖ್ಯಾತ ನಟ ನಾನಾ ಪಾಟೇಕರ್, ಶಿವಪ್ರತಿಷ್ಠಾನ್ ಹಿಂದುಸ್ತಾನ್ ಸಂಸ್ಥಾಪಕ ಸಂಭಾಜಿ ಭಿಡೆ ಗುರೂಜಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಆಸೀಫ್ ಸೇಠ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ನೀತಾ ದೇಶಪಾಂಡೆ, ಡಾ.ಅಮೃತಾ ರಾಠೆ, ರೋಹಿತ್ ದೇಶಪಾಂಡೆ, ದೀಪಕ್ ಕರಂಜಿಕರ್ ಮೊದಲಾದವರು ಇದ್ದರು.