LatestNationalPolitics

*ನಿಂದಿಸಿದ ಯುವಕರನ್ನು ನಾನು ಕ್ಷಮಿಸಿದ್ದೇನೆ: ಅವರನ್ನು ಸರಿ ದಾರಿಗೆ ತಂದು ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ ಎಂದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಲವು ಯುವಕರು ಅವಾಚ್ಯ ಪದಗಳನ್ನು ಬಳಸಿದ್ದರು. ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೇ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ಪ್ರಧಾನಿಯ ಬಗ್ಗೆಯೇ ಯುವಜನತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವಿಷಯವಾಗಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯುವಜನರನ್ನು ಶಿಕ್ಷಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಸರಿಯಾದ ದಾರಿ ತೋರಿಸಬೇಕು ಎಂದು ಹೇಳಿದ್ದಾರೆ.

ಜಂತರ್ ಮಂತರ್‌ನಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರಲ್ಲಿ ಉಂಟಾದ ಆಕ್ರೋಶವನ್ನು ಅರ್ಥೈಸಿಕೊಂಡ ಅವರು, ‘ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ಕಣ್ಣಾರೆ ಕಂಡಿದೆ. ಕೆಲವು ಹಾದಿ ತಪ್ಪಿದ ಯುವಕರು ಅತ್ಯಂತ ಕೀಳು ಮಟ್ಟದ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದರು. ಈ ಪದಗಳು ಯಾವುದೇ ಸುಸಂಸ್ಕೃತ ಸಮಾಜಕ್ಕೆ ಶೋಭೆ ತರುವುದಿಲ್ಲ. ನನ್ನನ್ನು ವೈಯಕ್ತಿಕವಾಗಿ ನಿಂದಿಸಲಾಯಿತು. ಅಷ್ಟೇ ಅಲ್ಲದೆ, ನನ್ನ ಸ್ವರ್ಗಸ್ಥ ತಾಯಿಯನ್ನೂ ಸಹ ನಿಂದನೆಗೆ ಗುರಿಪಡಿಸಲಾಯಿತು. ಅದು ನಿಜಕ್ಕೂ ಒಂದು ಅಸಹ್ಯಕರ ದೃಶ್ಯವಾಗಿತ್ತು. ಆದಾಗ್ಯೂ, ಬಾಲ್ಯದಲ್ಲಿ ತಪ್ಪುಗಳು ಸಹಜ ಮತ್ತು ಆ ತಪ್ಪುಗಳನ್ನು ತಿದ್ದುಕೊಳ್ಳುವ ಅವಕಾಶವನ್ನೂ ಬಾಲ್ಯವೇ ನೀಡುತ್ತದೆ’ ಎಂದಿದ್ದಾರೆ.

ಈ ಯುವಕರು ದಾರಿ ತಪ್ಪಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯವಾಗಿದೆ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯದ ಕಲಾಪಗಳಿಗೆ ಎಳೆಯುವುದು ಮತ್ತು ಸಮಾಜದಲ್ಲಿ ಅವರಿಗೆ ಕಿರುಕುಳ ನೀಡುವುದು, ಇವು ಯಾವುದರಿಂದಲೂ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲುಗಳ ನಡುವೆ ಸಿಕ್ಕಿಬಿದ್ದು ರಕ್ತ ಬರುತ್ತದೆ. ಹಾಗೆಂದು ನಾವು ನಮ್ಮ ಹಲ್ಲುಗಳನ್ನು ಮುರಿದುಕೊಳ್ಳುವುದಿಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಈ ಮಕ್ಕಳೂ ನಮ್ಮವರೇ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ನಮ್ಮ ಕರ್ತವ್ಯ. ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡುವುದು ಕಷ್ಟ. ಆದ್ರೆ, ಇದು ನಾವು ಕೈಗೊಳ್ಳಬೇಕಾದ ಕಾರ್ಯವಾಗಿದೆ. ಆದ್ದರಿಂದ ಬನ್ನಿ, ನಾನು ಈ ಮಕ್ಕಳಿಗೆ ಕರೆ ನೀಡುತ್ತೇನೆ, ದೇಶದ ಒಳಿತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಹೊಸದನ್ನು ಕಲಿಯೋಣ ಮತ್ತು ನಮ್ಮ ತಪ್ಪುಗಳಿಂದಲೂ ಪಾಠ ಕಲಿಯೋಣ. ನಮ್ಮ ಕನಸುಗಳನ್ನು ಬೆನ್ನಟ್ಟಲು ಹೊರಡೋಣ. ದೇಶವು ಮುನ್ನಡೆಯುತ್ತಿದೆ ಮತ್ತು ಮತ್ತಷ್ಟು ಪ್ರಗತಿಗೆ ಸಜ್ಜಾಗಿದೆ. ನೀವು ಸಹ ಮುನ್ನಡೆಯಬೇಕೆಂಬುದು ನನ್ನ ಕನಸಾಗಿದೆ. ನಾನು ನಿಮಗಾಗಿ ಬದುಕುತ್ತಿದ್ದೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನನ್ನನ್ನು ನಾನು ಮುಡುಪಾಗಿಟ್ಟಿದ್ದೇನೆ ಎಂದು ಪ್ರಧಾಅನಿ ಮೋದಿ ತಮ್ಮ ವೀಡಿಯೋದಲ್ಲಿ ತಿಳಿಸಿದ್ದಾರೆ.

ನೋಯ್ಡಾದ 25 ವರ್ಷದ ರುಚಿಕಾ ಸಿಂಗ್ ಎಂಬುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ವಿಡಿಯೋ ಸಂದೇಶ ರವಾನಿಸಿದ್ದಾರೆ.

Home add -Advt

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರುಚಿಕಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಾಜಿಯಾಬಾದ್ ಮೂಲದ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ, ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Related Articles

Back to top button