LatestPolitics

*ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗ: ಶೀಘ್ರದಲ್ಲೇ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದೆ*

ಮೋದಿ ಸಾಧನೆ ಶೂನ್ಯ ಎಂದವರಿಗೆ ವಿಶ್ವ ಬ್ಯಾಂಕ್‌ ಉತ್ತರ ನೀಡಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಪ್ರಗತಿವಾಹಿನಿ ಸುದ್ದಿ: ರಾಜಕೀಯ ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗ. 11 ವರ್ಷದಲ್ಲಿ ಬಡತನವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಬಡತನ ನಿರ್ಮೂಲನೆಗೆ ಮೋದಿ ಸರ್ಕಾರ ಪಣ ತೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ 11 ವರ್ಷದ ಸಾಧನೆಗಳನ್ನು ಅಂಕಿ ಅಂಶ ಸಹಿತ ತೆರೆದಿಟ್ಟ ಸಚಿವರು, ʼವಿಕಾಸವೇ ನಮ್ಮ ಮಂತ್ರ, ಶಾಂತಿ-ಸುವ್ಯವಸ್ಥೆಯೇ ನಮ್ಮ ಧ್ಯೇಯʼವಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಭಾರತ ಸದ್ಯ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ದೇಶವಾಗಿದ್ದು, ಇಷ್ಟರಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಲ್ಲಿ ಭಾರತ ಬಡತನ ರೇಖೆಯನ್ನು ಅಳಿಸಿ ಹಾಕುವತ್ತ ಮಹತ್ತರ ಹೆಜ್ಜೆಯಿರಿಸಿದೆ. 2011-12ರಲ್ಲಿ ಶೇ.27.1 ರಷ್ಟಿದ್ದ ಬಡತನ ಪ್ರಮಾಣ ಇದೀಗ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.5.3ಕ್ಕೆ ಇಳಿದಿದೆ. 26 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರ ಬಂದಿದ್ದಾರೆ. ಆರ್ಥಿಕತೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ಖುದ್ದು ವಿಶ್ವ ಬ್ಯಾಂಕ್‌ ವರದಿಯೇ ಹೇಳಿದೆ. ʼಮೋದಿ ಸಾಧನೆ ಶೂನ್ಯ ಎನ್ನುವವರಿಗೆ ವಿಶ್ವ ಬ್ಯಾಂಕೇ ತಕ್ಕ ಉತ್ತರ ಕೊಟ್ಟಿದೆʼ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು ಜೋಶಿ.

Home add -Advt

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ, ಅಭಿವೃದ್ಧಿ ಸಾಧನೆಗೆ ವಿಶ್ವ ಬ್ಯಾಂಕೇ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ಬಹುಶ: ವಿರೋಧ ಪಕ್ಷದವರು ಆರೋಪ ಮಾಡಲಾರರು ಎಂದು ಭಾವಿಸಿದ್ದೇನೆ. ಇನ್ನಾದರೂ ಪ್ರಧಾನಿ ಬಗ್ಗೆ ವೃಥಾ ಆರೋಪ ನಿಲ್ಲಿಸಲಿ. ಯಾರ ಅವಧಿಯಲ್ಲಿ ಏನೇನು ಸಾಧನೆಯಾಗಿದೆ ಎಂಬುದನ್ನು ಅರಿತುಕೊಳ್ಳಲಿ. ಮೋದಿ ಅವರನ್ನು ಮತ್ತು ಮೋದಿ ಸರ್ಕಾರವನ್ನು ಜನರೇ ಹೀರೋ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರಿಗೆ ಚಾಟಿ ಬೀಸಿದರು.

ಸಾಮಾಜಿಕ ನ್ಯಾಯದಲ್ಲೂ ಕೇಂದ್ರ ಮುಂದು:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದಲ್ಲೂ ಮುಂದಿದೆ. ತಾವೇ ಸಾಮಾಜಿಕ ಹರಿಕಾರರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದವರು ಸಂಪುಟದಲ್ಲಿ ಶೇ.20ರಷ್ಟು ಸ್ಥಾನಮಾನ ಸಹ ಹಿಂದುಳಿದವರಿಗೆ ಕೊಟ್ಟ ಉದಾಹರಣೆಯಿಲ್ಲ. ಆದರೆ, ಮೋದಿ ಸರ್ಕಾರ ಮಂತ್ರಿ ಮಂಡಳದಲ್ಲಿ ಶೇ.60ರಷ್ಟು ಎಸ್ಸಿ, ಎಸ್ಟಿಯವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯವನ್ನು ಮೆರೆದಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೆಮ್ಮೆಯಿಂದ ಹೇಳಿದರು.

₹25000 ಕೋಟಿ ರಕ್ಷಣಾ ಸಾಮಗ್ರಿ ರಫ್ತು:
ಭಾರತ ಹತ್ತು ವರ್ಷದ ಹಿಂದೆ ಆಮದು ಮೇಲೆ ಅವಲಂಬಿತವಾಗಿತ್ತು. ಆದರೆ ಇಂದು ರಫ್ತು ವಲಯದಲ್ಲಿ ವಿಶ್ವ ಪ್ರಸಿದ್ಧವಾಗಿದೆ. ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ ಅಳವಡಿಸಿಕೊಂಡ ಪ್ರತಿಫಲವಾಗಿ 5000 ವಸ್ತು-ಉತ್ಪನ್ನಗಳನ್ನು ರಿಸರ್ವ್‌ ಮಾಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ₹25000 ಕೋಟಿ ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿದೆ ಭಾರತ ಎಂದು ವಿವರಿಸಿದರು.

ಕೋವಿಡ್‌ ಎದುರಿಸಿ ನಿಂತ ರಾಷ್ಟ್ರ:
ಕೋವಿಡ್‌ ಸಂಕಷ್ಟ ಎದುರಿಸಿಯೂ ಭಾರತ ತಲೆ ಎತ್ತಿ ನಿಂತಿದೆ. ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಆರೋಪಗಳನ್ನೆಲ್ಲ ಬದಿಗೊತ್ತಿ ಜನರ ರಕ್ಷಣೆಗೆ ಒತ್ತು ಕೊಟ್ಟಿದ್ದೇವೆ. 2.5 ಕೋಟಿ ಜನಸಂಖ್ಯೆ ಇದ್ದ ದೇಶವೊಂದರಲ್ಲೇ ಕೋವಿಡ್‌ ಲಸಿಕೆ ನೀಡಲಾಗಿಲ್ಲ. ಆದರೆ, 140 ಕೋಟಿ ಜನಸಂಖ್ಯೆಗೆ ವ್ಯಾಕ್ಸಿನ್‌ ಕೊಟ್ಟ ಏಕೈಕ ದೇಶ ಭಾರತವಾಗಿದೆ. ಅಲ್ಲದೇ, ವಿದೇಶಗಳಿಗೂ ವ್ಯಾಕ್ಸಿನ್‌ ಪೂರೈಸಿದೆ ಎಂದು ಹೇಳಿದರು.

50.22 ಕೋಟಿ ಜನ್‌ಧನ್‌ ಖಾತೆ:
ಡಿಜಿಟಲ್‌ ವ್ಯವಸ್ಥೆ ಕೈಗೊಂಡಾಗ ಮೋದಿ ಅವರಿಗೆ ಹಾಸ್ಯ ಮಾಡಿದ್ದರು. ಆದರೆ ಇಂದು ಶೇ.83ರಷ್ಟು ಯುಪಿಐ ಖಾತೆಗಳಿವೆ. 50.22 ಕೋಟಿ ಜನಧನ್‌ ಖಾತೆ ತೆರೆದು ₹50 ಲಕ್ಷ ಕೋಟಿಗೂ ಅಧಿಕ ಬ್ಯಾಂಕ್‌ ವಹಿವಾಟು ನಡೆಸಿದೆ. 2024ರಲ್ಲೇ ₹24 ಲಕ್ಷ ಕೋಟಿ ವಹಿವಾಟು ಆಗಿದೆ. ಶೇ.80ಕ್ಕಿಂತ ಹೆಚ್ಚು ಜನರು ಬ್ಯಾಂಕಿಂಗ್‌ನಿಂದ ಹೊರಗಿದ್ದರು. ಈಗ ಶೇ.60ರಷ್ಟು ಜನಧನ್‌ ಖಾತೆಗಳೇ ಇವೆ. ಆಧಾರ್‌ ಲಿಂಕ್‌, ಮೊಬೈಲ್‌ ಲಿಂಕ್‌ ಮಾಡಿದ್ದರ ಫಲವಾಗಿ ಫಲಾನುಭವಿಗಳಿಗೆ ನೇರ ಡಿಬಿಟಿ ಮೂಲಕ ₹44 ಲಕ್ಷ ಕೋಟಿ ಹಣ ವರ್ಗಾವಣೆ ಆಗತ್ತಿದೆ. ಇದರ ಪರಿಣಾಮ ₹3.5 ಲಕ್ಷ ಕೋಟಿ ಉಳಿತಾಯವಾಗಿದೆ. ಸೋರಿಕೆ ನಿಂತಿದೆ. ಕೇವಲ ₹50000, ₹1 ಲಕ್ಷಕ್ಕೆ ಇದ್ದ ಆದಾಯ ತೆರಿಗೆ ಮಿತಿಯನ್ನು ₹12 ಲಕ್ಷದವರೆಗೆ ʼ0ʼ ಮಾಡಿದ್ದರಿಂದ ಕೋಟ್ಯಂತರ ಜನಕ್ಕೆ ಪ್ರಯೋಜನವಾಗಿದೆ. 2014ರಲ್ಲಿ 3.3 ಕೋಟಿ ಜನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುತ್ತಿದ್ದರೆ ಇಂದು 8 ಕೋಟಿ ಜನ ಸಲ್ಲಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ ವೇಗದಲ್ಲಿದೆ.

ಕೇವಲ ₹9ಗೆ ಡಾಟಾ ಕನೆಕ್ಷನ್‌:
ದೇಶದಲ್ಲಿ 6.93 ಲಕ್ಷ ಸಾವಿರ ಕಿ.ಮೀ. ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಿದ್ದರಿಂದ ಶೇ.97ರಷ್ಟು ಇಂಟರ್‌ನೆಟ್‌ ವೆಚ್ಚ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಇಂದು ಕೇವಲ ₹9ಗೆ ಡಾಟಾ ಕನೆಕ್ಷನ್‌ ಕೊಡುತ್ತಿದ್ದೇವೆ. ಡಾಲರ್‌ ಲೆಕ್ಕದಲ್ಲಿ 0.09 ಡಾಲರ್‌ ಇದೆ. ಬೇರೆ ರಾಷ್ಟ್ರಗಳಲ್ಲಿ ಇದರ ದುಪ್ಪಟ್ಟಿದೆ. 2014ರಲ್ಲಿ 25 ಕೋಟಿ ಇದ್ದ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಈಗ 97 ಕೋಟಿ ತಲುಪಿದೆ. ಶೇ.286ರಷ್ಟು ಇಂಟರ್‌ನೆಟ್‌ ಸಂಪರ್ಕ ಹೆಚ್ಚಿದೆ.

81 ಕೋಟ ಜನಕ್ಕೆ ಆಹಾರ ಭದ್ರತೆ:
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ನೀರಾವರಿ, ಗರೀಬ್‌ ಕಲ್ಯಾಣ, ಕೃಷಿ ಯೋಜನೆಗಳಿಗೆ ಹೆಚ್ಚಿನ ಬೆಂಬಲ ನೀಡಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ದೇಶದ 81 ಕೋಟಿ ಜನಕ್ಕೆ ಆಹಾರ ಭದ್ರತೆ ಒದಗಿಸುತ್ತಿದೆ. ಕಳೆದ 65-70 ವರ್ಷಗಳ ಇತಿಹಾದಲ್ಲಿ ₹70 ರಿಂದ 80 ಸಾವಿರ ಕೋಟಿ ಸಾಲ ಮನ್ನಾ ಆಗಿರಬಹುದು. ಆದರೆ, ನಾವು ಕಳೆದ 6 ವರ್ಷದಲ್ಲಿ ₹3.70 ಲಕ್ಷ ಕೋಟಿ ಹಣವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಿದ್ದೇವೆ.

ಕೃಷಿ ಮೂಲಸೌಕರ್ಯಕ್ಕೆ ₹1 ಲಕ್ಷ ಕೋಟಿ: ದೇಶದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಮೋದಿ ಸರ್ಕಾರ ಕೃಷಿ ಮೂಲ ಸೌಕರ್ಯಕ್ಕೆ ಬಜೆಟ್‌ ಅಲ್ಲಿ ₹1 ಲಕ್ಷ ಕೋಟಿ ಮೀಸಲಿಟ್ಟಿದೆ. 7.71 ಲಕ್ಷ ಕೋಟಿ ರೈತರಿಗೆ ₹10 ಲಕ್ಷ ಕೋಟಿ ಸಾಲ ಕೊಟ್ಟಿದ್ದೇವೆ. 11 ಕೋಟಿ ರೈತರಿಗೆ ಪಿಎಂ ಕಿಸಾನ್‌ ನೆರವು ನೀಡಲಾಗುತ್ತಿದೆ. ಕಿಸಾನ್‌ ಕ್ರೆಡಿಟ್‌ ಸಾಲ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಿದೆ. ಪಿಎಂ ಫಸಲ್‌ ಬಿಮಾ ₹32,440 ಕೋಟಿ ತುಂಬಿದ್ದರೆ, ₹1.75 ಲಕ್ಷ ಸಾವಿರ ಕೋಟಿ ಮರುಪಾವತಿ ಮಾಡಿದ್ದೇವೆ. ದೇಶದ 24 ಕೋಟಿ ರೈತರು ಇದರ ಪ್ರಯೋಜನ ಪಡೆದಿದ್ದು, ಶೇ.71ರಷ್ಟು ಎಸ್ಸಿ, ಎಸ್ಟಿ, ಒಬಿಸಿ ವರ್ಗದ ರೈತರಿಗೆ ಸಂದಿದೆ.

ದೇಶದಲ್ಲಿ 2014ರ ವೇಳೆಗೆ ಒಟ್ಟಾರೆ ಗ್ಯಾಸ್‌ ಸಂಪರ್ಕ ಕೇವಲ 8 ಲಕ್ಷ ಕೋಟಿ ಇತ್ತು. ಆದರೆ, ಮೋದಿ ಅವರು ಜಾರಿಗೆ ತಂದ ಉಜ್ವಲ ಯೋಜನೆಯಡಿ ಒಂದರಲ್ಲೇ ಈಗ 10.50 ಕೋಟಿ ಜನಕ್ಕೆ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದೇವೆ. ಶೇ.17ರಷ್ಟು ಅರಣ್ಯೀಕರಣ ವೃದ್ಧಿಸಿದೆ. ʼಏಕ್‌ ಪೇಡ್‌ ಮಾ ಕೇ ನಾಮ್‌ʼ ಹೆಸರಲ್ಲಿ 142 ಕೋಟಿ ಗಿಡ ನೆಟ್ಟಿದ್ದೇವೆ. ಹುಲಿಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ. ರಾಷ್ಟ್ರದಲ್ಲಿ ಈಗ ಒಟು 3682 ಹುಲಿಗಳಿವೆ.

₹7 ಲಕ್ಷ ಕೋಟಿ ರಕ್ಷಣಾ ಬಜೆಟ್‌:
ಭಾರತದ ರಕ್ಷಣಾ ಬಜೆಟ್‌ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೇವಲ ₹2ಲಕ್ಷ ಕೋಟಿ ಇತ್ತು. ಆದರೆ, ಮೋದಿ ಅವರ ಆಡಳಿತದಲ್ಲಿ ₹7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಭಾರತೀಯ ರಕ್ಷಣಾ ಪಡೆಯಲ್ಲಿ ಅತಿ ಹೆಚ್ಚು ಮಹಿಳಾ ಪೈಲೆಟ್ಸ್‌ ಇರುವ ನಂ.1 ರಾಷ್ಟ್ರವಾಗಿದೆ. ಭಾರತವೀಗ 5000 ರಕ್ಷಣಾ ಉಪಕರಣಗಳ ಉತ್ಪಾದನೆ ಮಾಡುತ್ತಿದೆ. ದೇಶದ ಗಡಿಯಲ್ಲಿ 2014ರವರೆಗೆ 3600 ಕಿಮೀ ರಸ್ತೆ ಅಭಿವೃದ್ಧಿ ಆಗಿತ್ತು. ಅದೀಗ 14875 ಕಿ.ಮೀ. ಆಗಿದೆ. ಪರಿಣಾಮ ಜಮ್ಮು-ಕಾಶ್ಮೀರದಲ್ಲೂ ಅಭಿವೃದ್ಧಿ, ಪ್ರವಾಸೋದ್ಯಮ ಅತ್ಯುತ್ತಮವಾಗಿ ಬೆಳೆದಿದೆ.

23 ನಗರಗಳಿಗೆ ಮೆಟ್ರೋ ರೈಲು:
ಸ್ವಾತಂತ್ರ್ಯಾ ನಂತರ 1950ರಿಂದ 2014ರವರೆಗಿನ 64 ವರ್ಷದಲ್ಲಿ 21,000 ಕಿ.ಮೀ. ಇದ್ದ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಈಗ 11 ವರ್ಷದ ಮೋದಿ ಆಡಳಿತದ 43 ಸಾವಿರ ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣವಾಗಿದೆ. 5 ನಗರಗಳಿಗೆ ಸೀಮಿತವಾಗಿದ್ದ
ಮೆಟ್ರೋ ರೈಲು ಸಂಚಾರದ ನಗರಗಳು ಈಗ 23ಕ್ಕೇರಿವೆ. ಮೆಟ್ರೋ ಮಾರ್ಗ ಸಹ ವಿಸ್ತರಣೆ ಕಂಡಿದೆ. 248ರಿಂದ 1013 ಕಿ.ಮೀ. ಆಗಿದೆ. ದೇಶಾದ್ಯಂತ 136 ಒಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ.

ಯುಪಿಎ ಸರ್ಕಾರ ಕರ್ನಾಟಕಕ್ಕೆ ₹800 ಕೋಟಿ ನೀಡಿದ್ದೇ ಅತ್ಯಧಿಕವಾಗಿತ್ತು. ಆದರೆ, ಮೋದಿ ಸರ್ಕಾರ ಒಂದೇ ವರ್ಷದಲ್ಲಿ ₹8000 ಕೋಟಿ ಕೊಟ್ಟಿದೆ. ಪ್ರತಿ ವರ್ಷವೂ ಏಳೆಂಟು ಸಾವಿರ ಕೋಟಿ ಅನುದಾನ ಕಲ್ಪಿಸುತ್ತಿದೆ.

1.46 ಲಕ್ಷ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ: 2014ರಲ್ಲಿ 91,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಅದೀಗ 2025ರಲ್ಲಿ 1.46 ಲಕ್ಷ ಸಾವಿರ ಕಿ.ಮೀ. ವಿಸ್ತಾರವಾಗಿದೆ. ಪ್ರತಿನಿತ್ಯ 34 ಕಿ.ಮೀ.ನಂತೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆದಿದೆ. 11 ವರ್ಷದಲ್ಲಿ 4 ಲಕ್ಷ ಕಿಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ಶೇ.99ರಷ್ಟು ಸಾಧನೆ ತೋರಿದೆ. ಈ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿಗೆ ಶೇ.570ರಷ್ಟು ಬಜೆಟ್‌ ಹೆಚ್ಚಳವಾಗಿದೆ. ₹2.78 ಸಾವಿರ ಕೋಟಿ ತಲುಪಿದೆ. ದೇಶದ ಜಲ ಮಾರ್ಗವೂ ಹೆಚ್ಚಿದೆ. 11 ಇದ್ದದ್ದು ಈಗ 111 ಆಗಿದೆ. ಹೀಗೆ ದೇಶದ ಲಾಜಿಸ್ಟಿಕ್‌ ವ್ಯವಸ್ಥೆಯನ್ನು ಮೋದಿ ಸರ್ಕಾರ ಬಲಪಡಿಸುತ್ತಿದೆ. ಪಿಎಂ ಗತಿ ಶಕ್ತಿಯನ್ನು ಬೇರೆ ದೇಶಗಳೂ ಬಂದು ಅಧ್ಯಯನ ಮಾಡುತ್ತಿದ್ದಾರೆ.

1 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳು:
ಒಂದು ದಶಕದ ಹಿಂದೆ ದೇಶದಲ್ಲಿ ಕೇವಲ 120 ಸ್ಟಾರ್ಟ್ಅಪ್‌ಗಳಿದ್ದವು. ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳಿವೆ. ಮೋದಿ ಸರ್ಕಾರ 68 ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿದೆ. ಇದರಲ್ಲಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಿಟ್ಟಿದೆ. ಅಲ್ಲದೇ, ಮುದ್ರಾ ಯೋಜನೆಯಲ್ಲಿ ಸಹ ಶೇ.70 ರಷ್ಟು ಜನ ಎಸ್ಸಿ ಎಸ್ಟಿ, ಒಬಿಸಿಯವರಿದ್ದಾರೆ.

460 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ:
ದೇಶದಲ್ಲಿ 60 ವರ್ಷದಲ್ಲಿ 240 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಈಗದು ಹತ್ತೇ ವರ್ಷದಲ್ಲಿ 460 ಗಿಗಾವ್ಯಾಟ್‌ ಉತ್ಪಾದನೆಗೆ ಏರಿದೆ. 2014ರಲ್ಲಿ 18100 ಹಳ್ಳಿಗಳಲ್ಲಿ ವಿದ್ಯುತ್ತೇ ಇರಲಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಹಳ್ಳಿಗೂ ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಒದಗಿಸಿದೆ. ಎಲ್ಲಾ ಮನೆಗಳಲ್ಲೂ ವಿದ್ಯುತ್‌ ಬೆಳಕಿದೆ.

75000 ವೈದ್ಯಕೀಯ ಸೀಟು:
ಸಾಮಾನ್ಯ ಕುಟುಂಬದ ಅಭ್ಯರ್ಥಿಗಳು ವೈದ್ಯಕೀಯ ಸೀಟ್‌ ಪಡೆಯುವುದೇ ಕಷ್ಟವಾಗಿತ್ತು. ಇಂದು ಕೇಂದ್ರ ಸರ್ಕಾರ ನೀಟ್‌ ಮೂಲಕ ಕಡುಬಡವರಿಗೂ ಆದ್ಯತೆ ನೀಡಿದೆ. 4 ವರ್ಷದಲ್ಲಿ 75000 ವೈದ್ಯ ಸೀಟ್‌ ಹೆಚ್ಚಿಸಿದ್ದೇವೆ. ಇದರಿಂದ ಸಾಮಾನ್ಯರೂ ವೈದ್ಯರಾಗುವ ಕನಸು ಈಡೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಪಿಜಿ ಸೀಟ್‌ ಅನ್ನು 80000ಕ್ಕೆ ಹೆಚ್ಚಿಸಿದ್ದೇವೆ. ಇನ್ನು, ಪಿಎಂಶ್ರೀ ಯೋಜನೆಯಲ್ಲಿ 16800 ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ.

ಉಡಾನ್‌ ಯೋಜನೆಯಲ್ಲಿ 1.5 ಕೋಟಿ ಜನ ಲಾಭ ಪಡೆಯುತ್ತಿದ್ದಾರೆ. ಜನರ ವಿಮಾನ ಪ್ರಯಾಣದ ಕನಸು ನನಸಾಗಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ಈಗ 74ರಿಂದ 160ಕ್ಕೆ ಏರಿದೆ.

ʼಆಯುಷ್ಮಾನ್‌ ಭಾರತ್‌ʼದಲ್ಲಿ ₹1.3 ಲಕ್ಷ ಕೋಟಿ ಉಳಿತಾಯವಾಗಿದೆ. 9 ಕೋಟಿ ಜನಕ್ಕೆ ಚಿಕಿತ್ಸೆ ಕೊಟ್ಟಿದ್ದೇವೆ. ದೇಶದಲ್ಲಿ 16000ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿದ್ದು, ಇದರಿಂದ ₹38000 ಕೋಟಿ ಉಳಿತಾಯವಾಗಿದೆ. ಆದರೆ, ಕಾಂಗ್ರೆಸ್ಸಿಗರಿಗೆ ʼಪ್ರಧಾನಿʼ ಪದವೇ ಅಲರ್ಜಿ ಇರಬೇಕು. ಹಾಗಾಗಿ ರಾಜ್ಯದಲ್ಲಿ ಪಿಎಂ ಜನೌಷಧಿ ಕೇಂದ್ರ ಬಂದ್‌ ಮಾಡಿದ್ದಾರೆ. ಆದರೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಔಷಧಿಗಳೂ ಲಭ್ಯವಾಗುತ್ತಿಲ್ಲ ಎಂದು ಸಚಿವ ಜೋಶಿ ಆಕ್ಷೇಪಿಸಿದರು.

ಆರ್ಟಿಕಲ್‌ 370 ತೆಗೆದ ಮೇಲೆ ಅಭಿವೃದ್ಧಿ ಹೊಳೆ:

ಜಮ್ಮು-ಕಾಶ್ಮೀರದಲ್ಲಿ, ಮೋದಿ ಅವರು 10 ಬಾರಿ ಅಧಿಕಾರಕ್ಕೆ ಬಂದರೂ ಆರ್ಟಿಕಲ್‌ 370 ತೆಗೆಯಲಾಗುವುದಿಲ್ಲ ಎಂದಿದ್ದರು. ಆದರೆ, 2ನೇ ಅವಧಿಯಲ್ಲೇ ಅದನ್ನು ಕಿತ್ತೆಸೆದರು. ಆರ್ಟಿಕಲ್‌ 370 ತೆಗೆದ ಮೇಲೆ ಅಲ್ಲಿ ಅಭಿವೃದ್ಧಿಯ ಹೊಳೆಯೇ ಹರಿದಿದೆ. ಅಲ್ಲಿನ ನಿವಾಸಿಗಳು ಸುಖೀ ಜೀವನ ನಡೆಸುತ್ತಿದ್ದಾರೆ.

ದೇಶ ರಕ್ಷಣೆಗೆ ʼಆಪರೇಷನ್‌ ಸಿಂಧೂರʼ ಉತ್ತಮ ಉದಾಹರಣೆ:
ಮೊದಲು ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. ಈಗ ಆ ಸ್ಥಿತಿಯಿಲ್ಲ. ಪ್ರಧಾನಿ ಮೋದಿ ಸರ್ಕಾರ ದೇಶ ರಕ್ಷಣೆಗೆ ಬದ್ಧವಾಗಿದೆ. ಇದಕ್ಕೆ ʼಆಪರೇಷನ್‌ ಸಿಂಧೂರ್‌ʼ ಉತ್ತಮ ಉದಾಹರಣೆ ಆಗಿದೆ. ಗಡಿ ಪ್ರದೇಶದಲ್ಲಿ ಸಹ ಉಗ್ರರ ಹುಟ್ಟಡಗಿಸುತ್ತಿದ್ದೇವೆ. ʼಪಶುಪತಿ-ತಿರುಪತಿʼ ಟೆರಿರಿಸಂ ರೆಡ್‌ ಕಾರಿಡಾರ್‌ ಆಗಿತ್ತು. ಆದರೆ ಇಂದು ಶೇ.70ರಷ್ಟು ಭಯೋತ್ಪಾದನೆ ನಿಗ್ರಹವಾಗಿದೆ. 2026ರ ವೇಳೆಗೆ ನಕ್ಸಲಿಸಂ ಅನ್ನೂ ಸಂಪೂರ್ಣ ತೊಡೆದು ಹಾಕುತ್ತೇವೆ. CDS ರಚನೆ, ರಕ್ಷಣಾ ಪಡೆಗಳಲ್ಲಿನ ಸಮನ್ವಯತೆಯಿಂದ ಇಂದು ʼಆಪರೇಷನ್‌ ಸಿಂಧೂರ್‌ʼ ಯಶಸ್ವಿಯಾಗಿದೆ. ಪಾಕಿಸ್ತಾನದ 11 ವಾಯು ನೆಲೆಗಳಲ್ಲಿ 10ಕ್ಕೆ ಹಾನಿಯಾದ ಬಗ್ಗೆ ಪಾಕಿಸ್ತಾನವೇ ಹೇಳಿದೆ.

Related Articles

Back to top button