*ಪ್ರತಿಜ್ಞಾ ಕ್ರಾಂತಿ ಹೋರಾಟಕ್ಕೆ ಕರೆ ನೀಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಸಿಎಂ ಸಿದ್ದರಾಮಯ್ಯನವರು ಪೋಲಿಸ್ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ಹೋರಾಟಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು ಖಂಡಿಸಿ, ಮುಂಬರುವ ದಿನಗಳಲ್ಲಿ ಪ್ರತಿಜ್ಞಾ ಕ್ರಾಂತಿ ಎಂಬ ಹೋರಾಟವನ್ನು ಮಾಡಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮೂಡಲಗಿಯ ಲಕ್ಷ್ಮಿನಗರದ ನೇಗಿಲು ಯೋಗಿ ಫಾರ್ಮ್ ಹೌಸದಲ್ಲಿ ಜರುಗಿದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, ಸಿಎಂ ಅವರು ನಮ್ಮ ಹೋರಾಟಕ್ಕೆ ಅವಮಾನ ಮಾಡಿದ್ದು, ನಮ್ಮ ಮೇಲೆ ಹೋರಾಟ ಮಾಡಿದ ಅಧಿಕಾರಿಗಳನ್ನು ವಜಾ ಮಾಡಿ ಸಿಎಂ ಅವರು ಲಿಂಗಾಯತರ ಬಳಿ ಕ್ಷಮೆ ಕೇಳುವಂತೆ ಬೆಳಗಾವಿಯ ಅಂಬೇಡ್ಕರ್ ಭವನದಲ್ಲಿ ಸತ್ಯಾಗ್ರಹ ಮಾಡಿದರು ಏನು ಪ್ರಯೋಜನವಾಗಿಲ್ಲ. ಆದರಿಂದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಈಗ ವಿಚಾರಣೆ ನಡೆಯುತ್ತಿರುವದಿಂದ ನ್ಯಾಯಾಲಯವು ನಮ್ಮ ಹೋರಾಟದ ಪರವಾಗಿ ಆದೇಶ ಹೊರಡಿಸುವ ನಿರೀಕ್ಷೆಯಿದ್ದು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಸಹ ದೂರನ್ನು ಸಲ್ಲಿಲಾಗಿದೆ. ನಮ್ಮ ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದಕ್ಕಾಗಿ ಪ್ರತಿಜ್ಞಾ ಕ್ರಾಂತಿ ಎಂಬ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.
ಪ್ರತಿಜ್ಞಾ ಕ್ರಾಂತಿ ಹೋರಾಟದ ಉದ್ದೇಶವೇನೆಂದರೆ ನಮ್ಮ ಹೋರಾಟವನ್ನು ಹೇಗೆ ಸರ್ಕಾರ ಹತ್ತಿಕ್ಕಿದರೂ, ಮಾರಣಾಂತಿಕ ಹಲ್ಲೆ ಮಾಡಲು ಯಾರು ಕುಮ್ಮಕು ನೀಡಿದರ ಬಗ್ಗೆ ಎಂಬ ಮಾಹಿತಿಯನ್ನು ಪ್ರತಿಯೊಂದು ಹಳ್ಳಿಗಳಲ್ಲಿರುವ ಪಂಚಮಸಾಲಿ ಸಮಾಜದವರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದ ಅವರು, ಇಷ್ಟು ವರ್ಷಗಳ ಕಾಲ ಶಾಂತಿಯುತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಇನ್ನು ಮುಂದೆ ಕ್ರಾಂತಿಯ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಶೀಘ್ರವಾಗಿ ಯಾವ ವಿಧಾನಸಭಾ ಕ್ಷೇತ್ರದಿಂದ ಪ್ರತಿಜ್ಞಾ ಕ್ರಾಂತಿ ಹೋರಾಟದ ಅಭಿಯಾನವನ್ನು ಪ್ರಾರಂಭಿಸಬೇಕೆಂದು ನಮ್ಮ ಸಮಾಜದ ವಕೀಲರ ಜೊತೆ ಹಾಗೂ ಮುಖಂಡರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ನಮಗೆ ಮೀಸಲಾತಿ ಕೊಡುವುದಿಲ್ಲ ಎಂದು ಅವಮಾನ ಮಾಡಿದ ಸರ್ಕಾರದ ಬಳಿ ಮತ್ತೆ ಅವರ ಬಳಿ ಕೈ ಒಡ್ಡುವ ಪ್ರಯತ್ನಕ್ಕಿಂತ ಜನರ ಬಳಿ ಹೋಗಿ ಜನರ ಮೂಲಕವೇ ನ್ಯಾಯವನ್ನು ಕೇಳಬೇಕು ಮತ್ತು ಮುಂಬರುವ ಸಿಎಂ ಅವರ ಬಳಿ ನ್ಯಾಯ ಕೇಳಬೇಕು ಎಂಬ ಬಗ್ಗೆ ಜನರ ಬಳಿ ಚರ್ಚಿಸಿ ನಮ್ಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಹಲ್ಲೆಗೊಳಗಾದ ಹೋರಾಟಗಾರರ ಮನೆಗಳಿಗೆ ಭೇಟಿ ನೀಡಿ ಅವರಲ್ಲಿ ಮತ್ತಷ್ಟು ಧೈರ್ಯ ತುಂಬುವಂತೆ ಕಾರ್ಯ ಮಾಡಲಾಗುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಆದಂತ ಹಲ್ಲೆಗೊಳಗಾದ ಹೋರಾಟಗಾರರ ಮನೆ ಮನೆಗೆ ಭೇಟಿ ನೀಡಿ ಧೈರ್ಯ ತುಂಬುವಂತ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅರಭಾವಿ ಮತಕ್ಷೇತ್ರದ ಕಾನೂನು ಹೋರಾಟ ಘಟಕದ ಅಧ್ಯಕ್ಷ ಎಸ್ ಬಿ ತುಪ್ಪದ, ಅರಭಾವಿ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ಸಂಗಪ್ಪ ಕೌಜಲಗಿ, ವಕೀಲರಾದ ಬಸವರಾಜ್ ಎಲ್ ಪಾಟೀಲ್, ಹನುಮಂತ್ ಮುಂಡರಗಿನಾಳ, ಎಮ್ ಬಿ ಭಾಗೋಜಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ