Belagavi NewsBelgaum NewsKannada NewsKarnataka NewsLatest

*ಮಾಧ್ಯಮಗಳಿಗೆ ಹೆದರಬೇಕಿಲ್ಲ, ಆದರೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು: ಪ್ರೊ.ವಿದ್ಯಾಶಂಕರ* *ಪತ್ರಿಕಾ ದಿನಾಚರಣೆ; ಹಿರಿಯ ಪತ್ರಕರ್ತರಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಾಧ್ಯಮಗಳಿಗೆ ಯಾ​ರೂ ಹೆದರಿ ಕೆಲಸ ಮಾಡಬೇಕಿಲ್ಲ, ಆದರೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು. ಸಮಾಜಕ್ಕೆ ಮಾಧ್ಯಮ ಬೇಕೇ ಬೇಕು. ಮಾಧ್ಯಮದವರೆಂದರೆ ಸಮಾಜದ ಒಳಿತಿಗಾಗಿ ಕೆಲಸ ಮಾಡುವವರು. ಒಳ್ಳೆಯ ಕೆಲಸಕ್ಕೆ ಜೊತೆಯಾಗಿ ನಿಲ್ಲುತ್ತಾರೆ. ಸಮಾಜದಲ್ಲಿನ ಬೇರೆ ಕ್ಷೇತ್ರಗಳಂತೆ ಮಾಧ್ಯಮದಲ್ಲಿ ಸಹ ದೋಷಗಳಿರಬಹುದು. ಆದರೆ ಜನರಿಗೆ ಬೇಕಾದದ್ದನ್ನು ತಲುಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿವೆ ಎಂದರು.

ಮಾಧ್ಯಮಗಳಿಗೂ ಸಿಎಸ್ ಆರ್ ಫಂಡ್ ನೀಡುವ ಕೆಲಸ ಆಗಬೇಕು. ಅಂದಾಗ ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯ. ಮಾಧ್ಯಮದಂತಹ ಶಕ್ತಿ ಯಾವುದಕ್ಕೂ ಇಲ್ಲ. ಒಳ್ಳೆಯವರನ್ನು ಎತ್ತರಕ್ಕೇರಿಸುವ, ಕೆಟ್ಟವರನ್ನು ಕೆಳಗೆ ಇಳಿಸುವ ಶಕ್ತಿ ಮಾಧ್ಯಮಕ್ಕಿದೆ ಎಂದು ಅವರು ಹೇಳಿದರು.

ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ, ಮಾಧ್ಯಮಗಳ ವರದಿಯಿಂದಾಗಿ ಸರಕಾರ ಬೀಳುವುದನ್ನು, ಮಂತ್ರಿಗಳು ರಾಜಿನಾಮೆ ನೀಡಿರುವುದನ್ನು ನೋಡಿದ್ದೇನೆ. ಆದರೆ ವರದಿಯಿಂದ ಯಾವ ರೀತಿ ಪರಿಣಾಮವಾಗುತ್ತದೆ ಎಂದು ಪತ್ರಕರ್ತರು ಯೋಚಿಸಬೇಕು. ಒಳ ಸುಳಿಯನ್ನು ತಿಳಿದು ಬರೆಯಬೇಕು. ಮಾಧ್ಯಮಗಳ ಮೇಲೆ ಬಹಳ ಜವಾಬ್ದಾರಿ ಇದೆ ಎಂದರು.

Home add -Advt

ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಸುದ್ದಿಗಳು ಈಗ ಭಿತ್ತರವಾಗುತ್ತಿದ್ದು, ಮೊಬೈಲ್’ನಲ್ಲಿಯೂ ಪ್ರಸಾರವಾಗುತ್ತಿವೆ. ವೃತ್ತಿ ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ಪತ್ರಕರ್ತರು ಕೆಲಸಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.

ಶಾಸಕ ಆಸೀಫ್ (ರಾಜು) ಸೇಠ್ ಅವರು ಮಾತನಾಡಿ, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಮಾಧ್ಯಮಗಳು ಈ ಮೂವರು ಸೇರಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ ಮಾತನಾಡಿ, ಸುದ್ಧಿಗಳಲ್ಲಿ ನೈಜತೆಯನ್ನು ಕಾಪಾಡುವುದು ಅತ್ಯಂತ ಮಹತ್ವ. ಮೂರನೆಯ ಕಣ್ಣಿನಿಂದ ನೋಡಿ ಸತ್ಯಾಸತ್ಯತೆ ಪರಿಶೀಲಿಸಿ, ಸಮಾಜಕ್ಕೆ ಬೇಕಾದ ಸಂದೇಶಗಳನ್ನು ನೀಡಬೇಕು. ಘಟನೆಯ ನೈಜತೆಯನ್ನು ಬಿಟ್ಟು ವಿರೂಪವಾಗಿ ಸುದ್ದಿಗಳನ್ನು ಭಿತ್ತರಿಸಬಾರದು. ಸೋಷಿಯಲ್ ಮೀಡಿಯಾ ಜರ್ನಲಿಸಂನಿಂದ ಉಂಟಾಗುವ ಕೆಡಕು ಪರಿಣಾಮಗಳನ್ನು ತಡೆಯಲು ಕೆಲವು ಬಾರಿ ಅಂಕುಶ ಬೇಕಾಗುತ್ತದೆ ಎಂದರು.

ನಗರ ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೋರಸೆ ಮಾತನಾಡಿ, ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಭೋರ್ಸೆ ಮಾತನಾಡಿ, ಸಾಮಾಜಿಕ ಮಾಧ್ಯಮಗಳಿಗಿಂತ ಇತರ ಮಾಧ್ಯಮಗಳ ಮೇಲೆ ನಂಬಿಕೆ ಹೆಚ್ಚಾಗಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಹಣ ಕೊಟ್ಟರೆ ಸುದ್ದಿ ಮೇಲೆ ಬರುತ್ತದೆ. ಬೇರೆ ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರುತ್ತದೆ ಎಂದರು.

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ (ರಿ) ಅಧ್ಯಕ್ಷರಾದ ಮಂಜುನಾಥ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಪತ್ರಕರ್ತರ ಸಂಜೀವಿನಿ ವಿಮಾ ಯೋಜನೆ ಜಾರಿಗೆ ತಂದಿರುವುದು ಸಂತಸದ ವಿಷಯ. ಜಿಲ್ಲಾಡಳಿತದಿಂದ ಪತಿಕಾ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗಿದ್ದು, 10 ಕೋಟಿ ರೂಪಾಯಿ ಅನುದಾನ ಮಂಜೂರು ಸಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ 10% ನಿವೇಶನಗಳನ್ನು ಮೀಸಲಿಡಬೇಕು. ಇದರಿಂದ ಸಮಾಜದ ಒಳಿತಿಗೆ ಹಗಲಿರುಳು ಶ್ರಮಿಸುವ ಪತ್ರಕರ್ತರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಾಯವಾಗಲಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ: 

ಈ ವೇಳೆ ಉಪಸ್ಥಿತ ಗಣ್ಯರಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಮುದ್ರಣ ಮಾಧ್ಯಮ ಹಾಗೂ ಎಲೆಕ್ರ್ಟಾನಿಕ ಮಾಧ್ಯಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಂ.ಕೆ.ಹೆಗಡೆ, ನೌಷಾದ ಬಿದಾಪುರ, ರಾಜು ಗವಳಿ, ವಿಲಾಸ ಜೋಶಿ, ಮೆಹಬೂಬ ಮಕಾಂದಾರ, ಚಂದ್ರು ಶ್ರೀರಾಮುಡು, ಸುಭಾನಿ ಮುಲ್ಲಾ, ಲೋಹಿತ ಶಿರೋಳ, ರಮೇಶ ಹಿರೇಮಠ, ರವಿರಾಜ ಮಬ್ರುಮಕರ್, ರವಿ ಬೋವಿ,, ನಾಗರಾಜ ಎಚ್ ವಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದೇ ರೀತಿಯಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ (ರಿ) ವತಿಯಿಂದ ಆಯೋಜಿಸಲಾದ ಕ್ರಿಕೆಟ್, ಚೆಸ್, ಕ್ಯಾರಮ್ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮಾಜಿ ಶಾಸಕ ಸಂಜಯ ಪಾಟೀಲ, ಡಿಸಿಪಿ ರೋಹನ್ ಜಗದೀಶ್, ಎಸಿಎಫ್ ಗಳಾದ ಸುನೀತಾ ನಿಂಬರಗಿ, ನಾಗರಾಜ, ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಉಪಾಧ್ಯಕ್ಷ ಚಂದ್ರು ಶ್ರೀರಾಮುಡು ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ (ರಿ) ಪದಾಧಿಕಾರಿಗಳಾದ ಮೈಲಾರಿ ಪಟಾತ, ಅಡಿವೆಪ್ಪ ಪಾಟೀಲ, ಸಂತೋಷ ಶ್ರೀರಾಮುಡು, ಪ್ರಹ್ಲಾದ ಪೂಜೇರಿ ಮುಂತಾದವರು ಉಪಸ್ಥಿತರಿದ್ದರು. ಅನಿಲ ಕಾಜಗಾರ ಸ್ವಾಗತಿಸಿದರು. ಸಹದೇವ ಮಾನೆ ಪ್ರಾಸ್ತಾವಿಕ ಮಾತನಾಡಿದರು. ಸಿದ್ದನಾಗೌಡ ಪಾಟೀಲ, ಸುನೀತಾ ದೇಸಾಯಿ ನಿರೂಪಿಸಿದರು.

Related Articles

Back to top button