
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಪಿಯು ವಿದ್ಯಾರ್ಥಿನಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಲಾವಣ್ಯ ಎಂಬ 17 ವರ್ಷದ ದ್ವಿತೀಯ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದವಳು. ತಂಜಾವೂರಿನ ಸೇಂಟ್ ಮೈಕಲ್ ಗರ್ಲ್ಸ್ ಹೋಂ ಎಂಬ ಹಾಸ್ಟೇಲ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹಾಸ್ಟೇಲ್ ವಾರ್ಡನ್ ಕಿರುಕುಳ ನೀಡುತ್ತಿದ್ದರು. ವಿದ್ಯಾರ್ಥಿನಿಯಿಂದ ಹಾಸ್ಟೇಲ್ ನ ಎಲ್ಲಾ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದರು ಅಲ್ಲದೇ ನಿರಂತರವಾಗಿ ನಿಂದಿಸಿ ಹಿಂಸಿಸುತ್ತಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಹಾಸ್ಟೇಲ್ ನಲ್ಲಿ ನೀಡುತ್ತಿದ್ದ ದೌರ್ಜನ್ಯಕ್ಕೆ ನೊಂದ ವಿದ್ಯಾರ್ಥಿನಿ ಕ್ರಿಮಿನಾಷಕ ಸೇವಿಸಿದ್ದಾಳೆ. ತೀವ್ರ ಹೊಟ್ಟೆನೋವಿನಿಂದ ನರಳುತ್ತಿದ್ದ ಆಕೆಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಆಸ್ಪತ್ರೆಯಲ್ಲಿ ಸಾವಿಗೂ ಮುನ್ನ ವಿದ್ಯಾರ್ಥಿನಿ ತನಗೆ ಹಾಸ್ಟೇಲ್ ನಲ್ಲಿ ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದು, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಹಾಸ್ಟೇಲ್ ವಾರ್ಡನ್ 62 ವರ್ಷದ ಸಕಾಯಮರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಭೀಕರ ಬಾಂಬ್ ಸ್ಫೋಟ; ಮೂವರು ಬಲಿ