*ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ: ಸಾಂಸ್ಕೃತಿಕ ವಾಹಿನಿ ಲೋಕಾರ್ಪಣೆ*

ಪ್ರಗತಿವಾಹಿನಿ ಸುದ್ದಿ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಯುಟ್ಯೂಬ್ ಚಾನೆಲ್ ಲೋಕಾರ್ಪಣೆ ಸಮಾರಂಭ ಬೆಳಗಾವಿಯ ಗುರುಪ್ರಸಾದ ಕಾಲೋನಿಯಲ್ಲಿ ನಡೆಯಿತು.
ಹಿರಿಯ ಸಾಹಿತಿ, ನಿರ್ದೇಶಕ ಶಿರೀಶ್ ಜೋಶಿ ಅವರ ಮನೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರರಾದ ಶ್ರೀಧರ ಕುಲಕರ್ಣಿ ಅವರು ‘ಪರಿಮಳ ಸಾಂಸ್ಕೃತಿಕ ವಾಹಿನಿ’ಯನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ವಹಿಸಿದ್ದರು. ಒಳ್ಳೆಯ ಮಾಧ್ಯಮಗಳಿಗೆ ನೋಡುಗರ ಹಾಗೂ ಓದುಗರ ಕೊರತೆಯಾಗುವುದಿಲ್ಲ. ಹೆಚ್ಚು ಜನರನ್ನು ತಲುಪಬೇಕೆನ್ನುವ ಅಪೇಕ್ಷೆಗಿಂತ ಒಳ್ಳೆಯ ವಿಷಯ ನೀಡಬೇಕೆನ್ನುವ ಉದ್ದೇಶವಿಟ್ಟುಕೊಂಡು ನಡೆಸಿದರೆ ಎಲ್ಲ ಮಾಧ್ಯಮಗಳೂ ಯಶಸ್ವಿಯಾಗುತ್ತವೆ ಎಂದು ಎಂ.ಕೆ.ಹೆಗಡೆ ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಿವಿಲ್ ಇಂಜಿನಿಯರ್ ವಿಲಾಸ್ ಬೆಂಗೇರಿ ಅವರನ್ನು ಸತ್ಕರಿಸಲಾಯಿತು. ಶಿರೀಶ್ ಜೋಶಿ ಅವರು ಪರಿಮಳ ಸಾಂಸ್ಕೃತಿಕ ವಾಹಿನಿಯ ಉದ್ದೇಶವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಶರಣಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಜೋಶಿ, ರಮೇಶ ಮಿರ್ಜಿ, ಎ.ಎಂ. ಜಯಶ್ರೀ, ಶೃದ್ಧಾ ಪಾಟೀಲ, ರಾಜಕುಮಾರ ಕುಂಬಾರ, ಶ್ರೀನಾಥ ಜೋಶಿ, ಶುಭಾ ಜೋಶಿ, ಪಿ.ಜಿ. ಕೆಂಪಣ್ಣವರ್ ಮೊದಲಾದವರು ಇದ್ದರು.