Belagavi NewsBelgaum NewsKannada NewsKarnataka NewsLatest
ಕೈಕೊಟ್ಟ ಲಿಫ್ಟ್ ನಲ್ಲಿ ಸಂಗಡಿಗರೊಂದಿಗೆ ಅರ್ಧತಾಸು ಕಳೆದ ರಾಹುಲ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಜಿಲ್ಲಾ ಆಸ್ಪತ್ರೆ ಲಿಫ್ಟ್ ಅರ್ಧದಲ್ಲೇ ಕೈಕೊಟ್ಟು ನಿಂತ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ, ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರು 30 ನಿಮಿಷಗಳಿಗೂ ಹೆಚ್ಚು ಕಾಲ ಲಿಫ್ಟ್ ನಲ್ಲೇ ಸಿಲುಕಿಹಾಕಿಕೊಂಡು ಫಜೀತಿಪಡುವಂತಾಯಿತು.
ನಾಗ ಪಂಚಮಿ ನಿಮಿತ್ತ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದರು. ಈ ವೇಳೆ ಮೇಲ್ಮಹಡಿಗೆ ರೋಗಿಗಳಿಗೆ ಮೀಸಲಿಟ್ಟ ಲಿಫ್ಟ್ ಮೂಲಕ ಹೋಗುತ್ತಿದ್ದಾಗ ಲಿಫ್ಟ್ ಅತ್ತ ಮೇಲೂ ಹೋಗದೆ ಕೆಳಗೂ ಬಾರದೆ ಅರ್ಧಕ್ಕೇ ನಿಂತುಬಿಟ್ಟಿತು.
ಈ ವೇಳೆ ಮಹಿಳಾ ಮುಖಂಡರೂ ಸೇರಿದಂತೆ ರಾಹುಲ್ ಜತೆ ಅವರ ಕೆಲ ಸಂಗಡಿಗರಿದ್ದು ಎಲ್ಲರೂ ಕೆಟ್ಟುನಿಂತ ಲಿಫ್ಟ್ ನಲ್ಲೇ ಅರ್ಧ ತಾಸಿಗೂ ಹೆಚ್ಚು ಕಾಲ ಕಳೆಯಬೇಕಾಯಿತು. ವಿಷಯ ತಿಳಿಯುತ್ತಲೇ ಬಿಮ್ಸ್ ಸಿಬ್ಬಂದಿ ಆಗಮಿಸಿ ಲಿಫ್ಟ್ ಬಾಗಿಲು ತೆರೆದು ರಾಹುಲ್ ಜಾರಕಿಹೊಳಿ ಹಾಗೂ ಅವರ ಸಂಗಡಿಗರನ್ನು ಹೊರಕ್ಕೆ ತಂದರು.