Kannada News

ಸ್ನೇಹ ಪವಿತ್ರತೆಯ ಸೂಚಕ ರಾಖಿ

ಸ್ನೇಹ ಪವಿತ್ರತೆಯ ಸೂಚಕ ರಾಖಿ

 

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚತುರ್ಥಿ, ನಾಗಪಂಚಮಿ, ಶ್ರಾವಣ-ಸೋಮವಾರ, ಶ್ರಾವಣ-ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ, ಹೀಗೆ ಪ್ರತಿದಿನವೂ ಹಬ್ಬ. ಈ ಎಲ್ಲ ಹಬ್ಬಗಳಲ್ಲಿ “ನೂಲಹುಣ್ಣಿಮೆ” ಅಥವಾ ‘ರಕ್ಷಾಬಂಧನ’ ಒಂದು ಪ್ರಮುಖ ಹಬ್ಬ.

ಈ ಹಬ್ಬವು ಹಿಂದೂ, ಜೈನ, ಸಿಖ್ ಧರ್ಮದವರು ಭಾರತ, ಮಾರಿಷಿಯಸ್, ನೇಪಾಳ, ಪಾಕಿಸ್ತಾನ್‌ದ ಕೆಲವು ಪ್ರದೇಶಗಳಲ್ಲಿ ಮತ್ತು ವಿಶ್ವದಾದ್ಯಂತ ಭಾರತೀಯರು ತಾವಿರುವ ಸ್ಥಳಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದ ಕರಾವಳಿಯಲ್ಲಿ ಈ ದಿನ “ಕೊಳಿ” ಸಮಾಜದವರು ಸಾಗರಕ್ಕೆ ತೆಂಗಿನಕಾಯಿ ಅರ್ಪಿಸಿ, ಪೂಜೆಯನ್ನು ಮಾಡಿ ಮೀನುಗಾರಿಕೆಯನ್ನು ಮತ್ತೆ ಪ್ರಾರಂಭಿಸುತ್ತಾರೆ.

ಅಲ್ಲಿ ನೂಲಹುಣ್ಣಿಮೆಯನ್ನು “ನಾರಳಿಪೂರ್ಣಿಮಾ” ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ ’ಜನೆವು ಪೂರ್ಣಿಮಾ’ ಎಂದು ಹೇಳುತ್ತಾರೆ. ಈ ದಿನ ಹಳೆಯ ಜನಿವಾರವನ್ನು ಬದಲಿಸಿ ಹೊಸ ಜನಿವಾರ ಧರಿಸುತ್ತಾರೆ. ರಕ್ಷಾಬಂಧನ ಹಬ್ಬವು ಕೇವಲ ಸಹೋದರ-ಸಹೋದರಿಯರಿಗಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬ ಸ್ತ್ರೀ-ಪುರುಷರ ನಡುವೆ ಇರುವ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ ಮತ್ತು ಕರ್ತವ್ಯದ ಪ್ರತೀಕವಾಗಿದೆ.

ರಜಪೂತ ರಾಣಿಯರು ತಮ್ಮ ನೆರೆಯ ರಾಜ್ಯದ ರಾಜನಿಗೆ ರಾಖಿಯನ್ನು ಸಹೋದರತ್ವದ ಭಾವನೆಯಿಂದ ಕಳುಹಿಸುತಿದ್ದರು. ಈ ಹಬ್ಬವು ಪುರಾತನ ಕಾಲದಿಂದ ನಡೆದು ಬಂದಿದ್ದು ಪ್ರೀತಿ, ಸ್ನೇಹ, ಪವಿತ್ರತೆ, ಸಾಮರಸ್ಯದ ಸಂಕೇತವಾಗಿದೆ. ರಾಖಿಯು ಸಾಧಾರಣ ನೂಲಿನಿಂದ, ದಾರದಿಂದ ಮಾಡಲಾಗುತ್ತದೆ. ಇಂದಿನ ದಿನಗಳಲ್ಲಿ ಬೆಳ್ಳಿ, ಬಂಗಾರದ ಬ್ರಾಸ್‌ಲೆಟ್, ರಿಸ್ಟ್ ವಾಚ್‌ಗಳನ್ನು ರಾಖಿಯ ಬದಲಾಗಿ ಬಳಸಲಾಗುತ್ತದೆ.

ರಕ್ಷಾಬಂಧನದ ಹಬ್ಬದಂದು ಬೆಳಗ್ಗೆ ಸಹೋದರಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸಹೋದರನಿಗೆ ಆರತಿ ಬೆಳಗಿಸಿ, ಹಣೆಯಲ್ಲಿ ತಿಲಕವನ್ನಿಟ್ಟು ರಕ್ಷಾಬಂಧನ ಕಟ್ಟುವ ಪದ್ಧತಿ ಇದೆ. ಸಿಹಿ ತಿಂದ ನಂತರ ಸಹೋದರನು ಆಶಿರ್ವಾದ ಮಾಡಿ, ಬಟ್ಟೆ, ಅಭರಣಗಳು ಮುಂತಾದಗಳನ್ನು ಸ್ನೇಹ ರೂಪದಲ್ಲಿ ಕಾಣಿಕೆ ನೀಡುತ್ತಾನೆ.
ನಮ್ಮ ಪುರಾಣ ಮತ್ತು ಇತಿಹಾಸದಲ್ಲಿ ರಕ್ಷಾಬಂಧನದ ಪುರಾವೆಗಳು ಇವೆ.

ಇಂದ್ರ ದೇವ :

ದೇವತೆ ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದ ಸಮುಯದಲ್ಲಿ ಇಂದ್ರನಿಗೆ ದೈತ್ಯ ಬಲಿ ಸೋಲಿಸುತ್ತಾನೆ. ಅವನ ಪತ್ನಿ ಸಾಚಿ ವಿಷ್ಣು ಕೊಟ್ಟಿರುವ ನೂಲಿನ ಕಂಕಣವನ್ನು ಸಲಹೆಯಂತೆ ಇಂದ್ರನ ಕೈಗೆ ಕಟ್ಟಿ ವಿಜಯಶಾಲಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಾಳೆ. ಇಂದ್ರನು ಯದ್ಧದಲ್ಲಿ ವಿಜಯಶಾಲಿಯಾಗಿ ಮತ್ತೆ ಅಮರಾವತಿಯ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಆ ಕಾಲದಲ್ಲಿ ಯುದ್ಧಕ್ಕೆ ಹೋಗುವಾಗ ನಾರಿಯರು ಸೈನಿಕರಿಗೆ ಕಂಕಣ ಕಟ್ಟುವ ಪದ್ಧತಿ ಇತ್ತು. ಹಾಗಾಗಿ ರಕ್ಷಣೆಯು ಸಹೋದರ-ಸಹೋದರಿಯರಿಗೆ ಮಾತ್ರವಲ್ಲ, ವಿಶ್ವದ ನರ ನಾರಿಯರಿಗೂ ಬೇಕಾಗಿದೆ.

 ಬಲಿ ಚಕ್ರವರ್ತಿ ಮತ್ತು ಲಕ್ಷ್ಮೀ :

ವಿಷ್ಣು ಬಲಿ ಚಕ್ರವರ್ತಿಯ ಮೇಲೆ ವಿಜಯ ಪಡೆದು ಮೂರು ಲೋಕಗಳ ಮಾಲೀಕನಾಗುತ್ತಾನೆ. ಬಲಿ ಚಕ್ರವರ್ತಿಯು ವಿಷ್ಣುವಿಗೆ ತನ್ನ ಅರಮನೆಯಲ್ಲಿ ಇರಲು ವಿನಂತಿಸುತ್ತಾನೆ. ಆದರೆ ಲಕ್ಷ್ಮಿಗೆ ಬಲಿ ಚಕ್ರವರ್ತಿಯ ಸ್ನೇಹ ಮತ್ತು ಅರಮನೆಯಲ್ಲಿ ಇರುವುದು ಇಷ್ಟವಾಗುವುದಿಲ್ಲ. ಅವಳು ಬಲಿ ಚಕ್ರವರ್ತಿಗೆ ರಾಖಿಯನ್ನು ಕಟ್ಟಿ ಸಹೋದರನನ್ನಾಗಿ ಮಾಡಿಕೊಳ್ಳುತ್ತಾಳೆ. ವಿಷ್ಣು ಮತ್ತು ತಾನು ವೈಕುಂಠಕ್ಕೆ ಮರಳಿ ಹೋಗಬೇಕೆಂದು ಬಲಿ ಚಕ್ರವರ್ತಿಗೆ ವಿನಂತಿಸುತ್ತಾಳೆ. ಬಲಿ ಚಕ್ರವರ್ತಿಯು ಲಕ್ಷ್ಮಿಯನ್ನು ಸಹೋದರಿ ಎಂದು ಒಪ್ಪಿಕೊಂಡು, ವಿನಂತಿಯನ್ನು ಮಾನ್ಯ ಮಾಡುತ್ತಾನೆ.

ಸಂತೋಷಿ ಮಾತೆ :

ಗಣೇಶನಿಗೆ ಎರಡು ಮಕ್ಕಳು ’ಶುಭ’ ಮತ್ತು ’ಲಾಭ’. ರಕ್ಷಾಬಂಧನದ ದಿನ ಗಣೇಶನ ಸಹೋದರಿಯು ಬಂದು ಅವನಿಗೆ ರಾಖಿ ಕಟ್ಟುತ್ತಾಳೆ. ಎರಡು ಮಕ್ಕಳಿಗೆ ಅದನ್ನು ನೋಡಿ ತಮಗೆ ಸಹೋದರಿ ಇಲ್ಲವೆಂದು ತುಂಬಾ ಬೇಸರವಾಗುತ್ತದೆ. ಆಗ ತಂದೆಯ ಹತ್ತಿರ ಹೋಗಿ ತಮಗೆ ಸಹೋದರಿ ಬೇಕೆಂದು ಹಠ ಮಾಡುತ್ತಾರೆ. ಕೊನೆಗೆ ನಾರದಮುನಿ ಬಂದು ಗಣೇಶನಿಗೆ ವಿನಂತಿ ಮಾಡಿ, ಅವರಿಗೆ ತಂಗಿ ಕೊಡು, ಅದರಿಂದ ನಿನಗೆ ಮತ್ತು ಮಕ್ಕಳಿಗೆ ಶುಭವಾಗುವುದು ಎಂದು ಹೇಳುತ್ತಾರೆ. ಗಣೇಶನಿಗೆ ತನ್ನ ಪತ್ನಿಗಳಾದ ರಿದ್ಧಿ ಮತ್ತು ಸಿದ್ಧಿಯಿಂದ ಮಂತ್ರಾಗ್ನಿ ಮೂಲಕ ಕನ್ಯಾರತ್ನ ಪ್ರಾಪ್ತವಾಗುತ್ತದೆ. ಅವಳ ಹೆಸರೇ ಸಂತೋಷಿ ಮಾತೆ. ತದ ನಂತರ ಶುಭ, ಲಾಭರಿಗೆ ತಂಗಿ ಸಂತೋಷಿ ಮಾತೆಯು ರಾಖಿ ಕಟ್ಟಿ ಅವರಿಂದ ರಕ್ಷಣೆ ಪಡೆಯುತ್ತಾಳೆ.

ಕೃಷ್ಣ ಮತ್ತು ದ್ರೌಪದಿ :

ಕೃಷ್ಣನ ಕೈಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಆಗ ಕೃಷ್ಣ ಅವಳಿಗೆ ಸಮಯ ಬಂದಾಗ ಈ ಉಪಕಾರವನ್ನು ತೀರಿಸುತ್ತೇನೆ ಎಂದು ವಾಗ್ದಾನ ನೀಡಿ ಅವಳನ್ನು ತಂಗಿ ಎಂದು ಒಪ್ಪಿಕೊಳ್ಳುತ್ತಾನೆ. ದುಶ್ಯಾಸನ ವಸ್ತ್ರಾಹರಣ ಮಾಡುವಾಗ ಕೃಷ್ಣ ಅವಳಿಗೆ ಸೀರೆಗಳನ್ನು ನೀಡುತ್ತಾನೆ. ಮಹಾಭಾರತದಲ್ಲಿ ದ್ರೌಪದಿ ಕೃಷ್ಣನಿಗೆ ರಾಖಿ ಕಟ್ಟಿದರೆ, ಕುಂತಿ ತನ್ನ ಮೊಮ್ಮಗ ಅಭಿಮನ್ಯುವಿಗೆ ಯುದ್ಧಕ್ಕೆ ಹೋಗುವಾಗ ಕಂಕಣ ಕಟ್ಟುತ್ತಾಳೆ.

ಯಮ ಮತ್ತು ಯಮುನಾ :

ಮೃತ್ಯು ದೇವತೆ ಯಮ ತನ್ನ ಸಹೋದರಿ ಯಮುನಾಳನ್ನು ೧೨ ವರ್ಷಗಳಿಂದ ನೋಡಿರುವುದಿಲ್ಲ. ಅವಳು ಇದರಿಂದ ತುಂಬಾ ದು:ಖಿಯಾಗಿರುತ್ತಾಳೆ. ಗಂಗೆಗೆ ಈ ವಿಷಯವನ್ನು ತಿಳಿಸಿ ಅಣ್ಣನಿಗೆ ತನ್ನನ್ನು ಭೇಟಿ ಮಾಡಲು ತಿಳಿಸು ಎಂದು ಹೇಳುತ್ತಾಳೆ. ಗಂಗಾನದಿ ಯಮನಿಗೆ ಈ ವಿಷಯ ತಿಳಿಸುತ್ತಾಳೆ. ಆಗ ಯಮನು ಯಮುನಾಳನ್ನು ಭೇಟಿ ಮಾಡುತ್ತಾನೆ. ಅವಳಿಗೆ ತನ್ನ ಅಣ್ಣನನ್ನು ಕಂಡು ತುಂಬಾ ಸಂತೋಷವಾಗುತ್ತದೆ. ಯಮನು ಯಮುನಾಳು ಮಾಡಿದ ಮಿಷ್ಟಾನ್ನ ಭೋಜನವನ್ನು ಸವಿದು ಖುಷಿಯಿಂದ ವರವನ್ನು ಕೇಳು ಎಂದು ಹೇಳುತ್ತಾನೆ. ಅವಳು ಯಾವುದೇ ಬೇರೆ ವರವನ್ನು ಕೇಳದೇ ಪುನ: ಬಾರಿ-ಬಾರಿಗೂ ಭೇಟಿಮಾಡಲು ಮಾತ್ರ ಹೇಳುತ್ತಾಳೆ. ಯಮನು ಇದನ್ನು ಒಪ್ಪಿಕೊಂಡು ಅಮರಳಾಗುವ ವರದಾನ ಕೊಡುತ್ತಾನೆ.


ಇತಿಹಾಸದ ಪುಟಗಳಲ್ಲಿ ರಾಖಿ:

ರಾಜ ಅಲೆಕ್ಸಾಂಡರ್ ಮತ್ತು ರಾಜ ಪುರುಷರು:

ಅಲೆಕ್ಸಾಂಡರ್ ಭಾರತದ ಮೇಲೆ ಕ್ರಿ.ಪೂ. ೩೨೬ ರಲ್ಲಿ ದಾಳಿ ಮಾಡಿದಾಗ ಅವನ ಪತ್ನಿ ರುಕ್ಸಾನ(ರೊಶನಕ್) ರಾಜ ಪೊರಸ್‌ನಿಗೆ ಪವಿತ್ರ ಕಂಕಣ ಕಳುಹಿಸಿ ತನ್ನ ಪತಿಯ ಮೇಲೆ ಯುದ್ಧಭೂಮಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಬಾರದು ಎಂದು ಪ್ರಾರ್ಥಿಸುತ್ತಾಳೆ. ರಾಜ ಪೊರಸ್‌ನು ಧಾರ್ಮಿಕ ಸಂಪ್ರದಾಯದಂತೆ ರಾಖಿಯನ್ನು ಸ್ವೀಕರಿಸಿ ಕಟ್ಟಿಕೊಳ್ಳುತ್ತಾನೆ. ರಣರಂಗದಲ್ಲಿ ಕೊನೆಯ ಬಾಣ ಬಿಡುವಾಗ ತನ್ನ ಕೈಯಲ್ಲಿ ಇರುವ ರಾಖಿಯನ್ನು ನೋಡಿ ದಾಳಿ ಮಾಡದೇ ಸುಮ್ಮನಿರುತ್ತಾನೆ.

ರಾಣಿ ಕರ್ಣಾವತಿ ಮತ್ತು ಹುಮಾಯೂನ್ :

ಚಿತ್ತೋರ್‌ನ ರಾಣಿ ಕರ್ಣಾವತಿ, ಗುಜರಾತ್‌ನ ಬಹದ್ದೂರ್ ಶಾಹ್‌ನ ವಿರುದ್ಧ ತಾನು ಒಂಟಿಯಾಗಿ ದಾಳಿಮಾಡಲು ಸಾಧ್ಯವಿಲ್ಲವೆಂದು ಯೋಚಿಸಿ ಹುಮಾಯೂನನಿಗೆ ರಾಖಿ ಕಳುಹಿಸಿ ಯುದ್ಧದಲ್ಲಿ ಸಹಾಯ ಮಾಡಲು ಪ್ರಾರ್ಥಿಸುತ್ತಾಳೆ. ಆದರೆ ಹುಮಾಯೂನನು ತಡವಾಗಿ ಬಂದಿದ್ದರಿಂದ ರಾಣಿ ಯುದ್ಧದಲ್ಲಿ ಸೋಲುತ್ತಾಳೆ.
ರಾಷ್ಟ್ರಕವಿ ರವಿಂದ್ರನಾಥ ಟಾಗೋರರು ರಾಖಿಯು ಹಿಂದೂ-ಮುಸ್ಲಿಂ ಜನಾಂಗದಲ್ಲಿ ಪ್ರೀತಿ, ಬಂಧುತ್ವದ ಸಂಕೇತ ಎಂದು ಹೇಳಿದ್ದಾರೆ. ಅವರು ಬಂಗಾಳದ ವಿಭಜನೆಯ ಸಮಯದಲ್ಲಿ ರಕ್ಷಾಬಂಧನದ ಕಾರ್ಯಕ್ರಮಗಳನ್ನು ಆಯೊಜಿಸಿದ್ದರು. ಹಿಂದೂ-ಮುಸ್ಲಿಂಮರು ಏಕತೆಯನ್ನು ಕಾಪಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಲಿ ಎಂಬುದು ಅವರ ಪ್ರಯತ್ನವಾಗಿತ್ತು. ಆದರೆ ಕೊನೆಗೂ ಬಂಗಾಳವು ವಿಭಜನೆಯಾಯಿತು.

ಭಾರತಿಯರು ನಾವು ವಿದೇಶಿಯರ ಅನುಕರಣೆಯಿಂದ ನಮ್ಮ ನಿಜವಾದ ಸಂಸ್ಸೃತಿಯನ್ನು ಮರೆತು ಸ್ನೇಹ ಅತ್ಮೀಯತೆಯಿಂದ ದೂರ ಹೊಗುತ್ತಿದ್ದೆವೆ. ವಿಕಾರಿ ಪ್ರವೃತ್ತಿಯಿಂದ ಅನೇಕ ನಾರಿಯರು ಇವತ್ತು ಅತ್ಯಾಚಾರ ಅನ್ಯಾಯಕ್ಕೆ ಬಲಿ ಆಗುತ್ತಿದ್ದಾರೆ. ಆಧುನಿಕತೆಯ ವೇಷದಲ್ಲಿ ಸಮಾಜವು ಅಧೋಗತಿಗೆ ಹೋಗುತ್ತಿದೆ. ಪವಿತ್ರತೆಯ ಧಾರಣೆಯಿಂದ ಈ ಪರಿಸ್ಥ್ಭಿತಿಯನ್ನು ಬದಲಾಯಿಸಬಹುದು.

ಇಂದಿನ ಯುವ ಪಿಳಿಗೆ ‘ಪ್ರೇಮಿಗಳ ದಿನ’ ಕ್ಕೆ ಮಹತ್ವವನ್ನು ನಿಡುತ್ತಿದೆ ಹೊರತು, ಸಹೋದರತ್ವದ ಪವಿತ್ರ ಭಾವನೆಯನ್ನು ಬೆಳೆಸುವ ಸ್ನೇಹದ ಸೂಚಕವಾದ ರಾಖಿಗೆ ಬೆಲೆ ಇಲ್ಲದಂತಾಗಿದೆ. ಪುರುಷರು ನಾರಿಯರನ್ನು ನೋಡುವ ದೃಷ್ಡಿಯಲ್ಲಿ ಪರಿರ್ವತನೆ ಆಗಬೇಕು. ಅವರನ್ನು ಸಬಲೆಯ ರೂಪದಲ್ಲಿ, ದೇವಿಯ ರೂಪಗಳಾದ ಶಕ್ತಿ, ಮಹಾಕಾಳಿ, ದುರ್ಗಾ ಮುಂತಾದ ರೂಪಗಳಲ್ಲಿ ಕಾಣಬೇಕು. ‘ಯತ್ರ ನಾರಿಸ್ಯ ಪೂಜ್ಯಂತೆ ರಮಂತೆ ತತ್ರ ದೇವತ:’ ಎಂದು ಹೇಳಿಕೆಯನ್ನು ಸಾಕಾರ ಗೊಳಿಸಬೇಕು.

ಮಾನವರೆಲ್ಲರೂ ನಾನಾ ಪ್ರಕಾರದ ರಕ್ಷಣೆಯನ್ನು ಬಯಸುತ್ತಾರೆ. ೧) ತನುವಿನ ರಕ್ಷಣೆ, ೨) ಮನಸ್ಸಿನ ರಕ್ಷಣೆ, ೩) ಧನದ ರಕ್ಷಣೆ, ೪) ಧರ್ಮ-ಪವಿತ್ರತೆ ಅಥವಾ ಸತಿತ್ವದ ರಕ್ಷಣೆ, ೫) ಆಪತ್ತುಗಳು ಹಾಗೂ ಸಂಕಟಗಳಿಂದ ರಕ್ಷಣೆ, ೬) ಕಾಲ ಅಥವಾ ಮೃತ್ಯುವಿನ ಪಾಶದಿಂದ ರಕ್ಷಣೆ- ಇವು ಮುಖ್ಯವಾದವು. ಇದರಲ್ಲಿ ತನುವಿನ ರಕ್ಷಣೆಯನ್ನು ಮೃತ್ಯುವು ಸನ್ನಿಹಿತವಾದಾಗ ನಿಗದಿಯಾಗಿರುವ ಮೃತ್ಯುವಿನಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.

ಮನಸ್ಸಿನ ರಕ್ಷಣೆಯನ್ನು ಮಾಯೆಯ ಬಂಧನಗಳಿಂದ ಅಥವಾ ತಾಮಸಿಕ ವಿಕಾರಗಳಿಂದ ಮುಕ್ತರಾಗಲು ದೇವರ ಸನ್ನಿದಿಗೆ ಹೋಗಬೇಕಾಗುತ್ತದೆ. ಆದ್ದರಿಂದಲೇ ವಿಷಯ-ವಿಕಾರಗಳನ್ನು ನಾಶಮಾಡು, ಪಾಪವನ್ನು ಹರಿಸು ಎಂದು ಪತಿತಪಾವನ, ಪಾಪಕಟೇಶ್ವರನಾದ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತಾರೆ. ಧರ್ಮದ-ಪವಿತ್ರತೆ ಹಾಗೂ ಸತಿತ್ವದ ರಕ್ಷಣೆಯನ್ನು ಸರ್ವಸಮರ್ಥನಾದ ಭಗವಂತನೊಬ್ಬನೇ ಮಾಡಲು ಸಾಧ್ಯವಿದೆ.

ಇದಕ್ಕೆ ದ್ರೌಪದಿಯ ದೃಷ್ಟಾಂತವಿದೆ. ಕಾಲ ಅಥವಾ ಯಮನ ಪಾಶದಿಂದ ಪಾರು ಮಾಡುವವನೂ ಸಹ ಕಾಲರಕಾಲ ಮಹಾಕಾಲ ಮಹಾಕಾಲೇಶ್ವರನೇ ಆಗಿದ್ದಾನೆ. ಈಶ್ವರನು ಯಾರನ್ನು ರಕ್ಷಣೆ ಮಾಡುತ್ತಾನೆಯೋ ಅವರಿಗೆ ಇಡೀ ಪ್ರಪಂಚವೇ ವೈರಿಯಾದರೂ ಅವರ ಕೂದಲನ್ನೂ ಅಲುಗಾಡಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಅಂದರೆ ಎಂತಹ ಸಮಸ್ಯೆಗಳೇ ಬರಲಿ, ಯಾರೇ ವಿರೋಧಿಸಲಿ ಅಂತಹ ಸಮಯದಲ್ಲಿ ಸ್ವತ: ಭಗವಂತನೇ ಅವರ ರಕ್ಷಕನಾಗಿರುತ್ತಾನೆ.

ರಾಖಿಯ ನಿಜ ಅರ್ಥ

ಇದಕ್ಕೆ ಭಕ್ತ ಮಾರ್ಕಂಡೇಯನ ದೃಷ್ಟಾಂತವಿದೆ. ಸಾಂಸಾರಿಕ ಆಪತ್ತುಗಳು ಆಥವಾ ಲೌಕಿಕ ಸಂಕಟಗಳಿಂದಲೂ ರಕ್ಷಣೆಯನ್ನು ಈಶ್ವರನ ಹೊರತು ಅನ್ಯರೂ ಯಾರೂ ಮಾಡಲು ಸಾಧ್ಯವಿಲ್ಲ. ಆದ್ದರಿಂದಲೇ ಅವನಿಗೆ ದು:ಖಹರ-ಸುಖಕರ, ವಿಘ್ನವಿನಾಶಕನೆಂದು ಕರೆಯುತ್ತಾರೆ.
ರೆಶಮೆ ನುಲಿನ ಅಥವಾ ದಾರದಿಂದ ಮಾಡಿರುವ ರಾಖಿಯು ಖರೆದಿಸುಲು ಅಲ್ಪ ಹಣ ಸಾಕು ಆದರೆ ಅದರೆ ನಿಜವಾದ ಮೌಲ್ಯ ಮತ್ರು ಮಹತ್ವ ಅಪಾರವಾಗಿದೆ. ರಾಖಿಯ ಹಬ್ಬವು ಪೂಣ್ಯಪ್ರದಾಯಿ ಪರ್ವ ಅಥವಾ ವಿಷತೋಡಕ ಪರ್ವವೆಂದು ಕರೆಯುತ್ತಾರೆ. ವಿಷಯವಿಕಾರವನ್ನು ತ್ಯಜಿಸಿ ನಾವುಗಳು ಪವಿತ್ರ ಆತ್ಮರಾಗಬೇಕೆಂದು ರಾಖಿಯ ನಿಜರ್ಥವಾಗಿದೆ.

ಸಕಲ-ಜೀವರಾಶಿಗಳಿಗೆ ಲೇಸನ್ನು ಬಯಸುವ, ಸಬ್‌ಕಾ ಮಾಲೀಕ್ ಏಕ್ ಆಗಿರುವ, ಸರ್ವರ ರಕ್ಷಕನಾದ ಭಗವಂತನ ಜೊತೆಗೆ ಬೆಸೆಯುವ ಸಂಬಂಧದ ಬಂಧನವೇ ’ರಕ್ಷಾಬಂಧನ’. ಅವನನ್ನು ತಿಳಿದು, ಅವನನ್ನೇ ನೆನೆಯುತ್ತಾ, ನಾವೆಲ್ಲರೂ ಅವನ ಮಕ್ಕಳು ಎಂದು ತಿಳಿದು ನಡೆದಾಗ ‘ವಸುಧೈವ ಕುಟುಂಬಕಮ್’ ಎಂಬ ಮಹಾಮಂತ್ರದ ಆಚರಣೆಯು ಸಾಧ್ಯವಾಗುವುದು. ನಾವೆಲ್ಲರೂ ಭಗವಂತನ ಮಕ್ಕಳು ಸಹೋದರ ಸಹೋದರಿಯರು, ನಮ್ಮ ಪವಿತ್ರ ಸ್ನೇಹದ ಸೂಚಕವೇ ’ರಾಖಿ’.

ಈ ಹಬ್ಬದಲ್ಲಿ ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಮಸ್ತಕದಲ್ಲಿ ತಿಲಕವನ್ನಿಟ್ಟು ಬಾಯಿಯನ್ನು ಸಿಹಿ ಮಾಡುತ್ತಾಳೆ. ಇದರ ಪ್ರತಿಯಾಗಿ ಸಹೋದರನು ಕಾಣಿಕೆಯನ್ನು ನೀಡುತ್ತಾನೆ. ಮಸ್ತಕದಲ್ಲಿ ಇಡುವ ತಿಲಕ ಆತ್ಮಜ್ಯೋತಿಯ ಪ್ರತೀಕ, ಬಾಯಿ ಸಿಹಿ ಮಾಡುವುದೆಂದರೆ ಮಧುರವಾದ ನುಡಿಗಳನ್ನು ನುಡಿಯುವುದು, ರಾಖಿಯಲ್ಲಿ ಇರುವ ದಾರವು ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ.

ಹಾಗಾದರೆ ಬನ್ನಿ ನಾವೆಲ್ಲರೂ ಭಗವಂತನ ಶ್ರೀರಕ್ಷೆಯಲ್ಲಿ ಬಂಧಿತರಾಗಿ ಇತರ ಅನೇಕ ಬಂಧನಗಳನ್ನು ಸ್ನೇಹದ ಸಂಬಂಧದಲ್ಲಿ ಪರಿವರ್ತಿಸಿಕೊಂಡು, ಜಾತಿ, ಮತ, ಧರ್ಮ, ಭಾಷಾ-ಭೇದಗಳನ್ನು ಮರೆತು, ಸಹೋದರತ್ವದ ಭಾವನೆಯಿಂದ ಜೀವನದಲ್ಲಿ ಸುಖ-ಶಾಂತಿಯನ್ನು ಪಡೆಯೋಣ. ಪ್ರಕೃತಿ ವಿಕೊಪದ ಈ ಕಾಲದಲ್ಲಿ ಪರಮಪ್ರಿಯ ಪರಮಾತ್ಮ ನಮಗೆ ರಕ್ಷಣೆ ನೀಡಿ ಸಂಕಷ್ಟಗಳಿಂದ ಪಾರಮಾಡಲಿ.

 -ವಿಶ್ವಾಸ್ ಸೋಹೋನಿ.
ಮೀಡಿಯಾ ವಿಂಗ್, ಬ್ರಹ್ಮಾಕುಮಾರೀಸ್.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button