Belagavi NewsBelgaum NewsKannada NewsKarnataka News

*ನೈಜ ಸುದ್ದಿಗಳೇ ಸಮಾಜದ ದಿಕ್ಕು‌: ಪತ್ರಕರ್ತರಿಗೆ ಶಾಸಕ ಆಸೀಫ್ ಸೇಠ್ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಮಾತ್ರವಲ್ಲ, ಸಮಾಜದ ಅಂತಃಕರಣವೂ ಹೌದು. ನೈಜತೆ, ವಾಸ್ತವ ಮತ್ತು ಧೈರ್ಯದೊಂದಿಗೆ ಸುದ್ದಿ ಬಿತ್ತರಿಸಿದಾಗಲೇ ಸಮಾಜದ ಎಳಿಗೆ ಸಾಧ್ಯ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.

ನಗರದ ವಾರ್ತಾ ಭವನದಲ್ಲಿ ಸೋಮವಾರ ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘದ ವತಿಯಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ನೀಡುವ ನೈಜ ಸುದ್ದಿಗಳೇ ನಮ್ಮಂತಹ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಕೆಲಸಗಳತ್ತ ತೆಗೆದುಕೊಂಡು ಹೋಗುತ್ತವೆ. ಪತ್ರಕರ್ತರು ಅನೇಕ ಸವಾಲುಗಳ ನಡುವೆಯೂ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಕಾಲಕ್ಕೆ ತಕ್ಕಂತೆ ತಾವು ಕೂಡ ಬದಲಾಗಬೇಕು. ಬರಹಗಳು ಕೇವಲ ಸುದ್ದಿ ಆಗಬಾರದು. ಸಮಾಜದ ಬೆಳವಣಿಗೆಗೆ ದಿಕ್ಕು ತೋರಿಸುವ ಶಕ್ತಿಯಾಗಬೇಕು ಎಂದು ಸೇಠ್ ಹೇಳಿದರು.

ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರು ಸಮಾಜದ ಸತ್ಯವನ್ನು ಜನರ ಮುಂದೆ ತರುವ ಕೆಲಸ ಮಾಡುತ್ತಾರೆ. ಬೆಳಗಾವಿಯ ಪತ್ರಕರ್ತರು ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಹಾರೈಸಿದರು.

Home add -Advt

ಬೆಳಗಾವಿ ಮುದ್ರಣ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಉತ್ತರ ಕರ್ನಾಟಕದ ಸಮಾಜಮುಖಿ ಪತ್ರಿಕೋದ್ಯಮ ಸರಕಾರದ ಕಿವಿಗೆ ತಲುಪಬೇಕಿದೆ. ಮೇಲಾಗಿ ಉತ್ತರ ಕರ್ನಾಟಕದ ಪತ್ರಕರ್ತರ ಬವಣೆಯನ್ನು ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಈ ಭಾಗದ ಜನಪ್ರತಿನಿಧಿಗಳು ಮಾಡಬೇಕು ಎಂದರು.

ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ಬೆಳಗಾವಿ ಪತ್ರಕರ್ತರ ಭವನಕ್ಕೆಬರೊಬ್ಬರಿ 9ಕೋಟಿ 90 ಲಕ್ಷರೂ ನೀಡಿದ್ದಾರೆ, ಇದು ರಾಜ್ಯದಲ್ಲಿಯೇ ಅತೀಹೆಚ್ಚು ಅನುದಾನ ಪಡೆದ ಜಿಲ್ಲೆ. ಹೀಗಾಗಿ ಸಂಘದ ಪರವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಈಗ ಅದರ ಕಾಮಗಾರಿ ಪೂಜೆಗೆ ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸುವ ಕೆಲಸವನ್ನು ಶಾಸಕ ಆಸೀಫ್ ಶೇಠ ಮಾಡಬೇಕು ಎಂದು ಕೋರಿದರು.

ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಸುಗಂಧಿ ಮಾತನಾಡಿ, ಉತ್ತರ ಕರ್ನಾಟಕದ ಪತ್ರಕರ್ತರು ಹಿಂಜರಿಯದೇ ಸರಕಾರಿ ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಕು. ಯುವ ಪತ್ರಕರ್ತರು ಹೆಚ್ಚಾಗಿ ಓದಬೇಕು. ಓದಿನ ಮೂಲಕವೇ ಬರವಣಿಗೆಯ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಗುರುರಾಜ ಜಮಖಂಡಿ, ಅಮಿತ ಉಪಾಧ್ಯೆ, ಸಂತೋಷ ಚಿನಗುಡಿ, ಸಂಜೀವ ಕಾಂಬಳೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರು ಹೃಷಿಕೇಶ್ ದೇಸಾಯಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ್ ಮಾತನಾಡಿದರು. 

ಪ್ರಧಾನ ಕಾರ್ಯದರ್ಶಿ ನೌಶಾದ್ ಬಿಜಾಪುರ, ಸಹ ಕಾರ್ಯದರ್ಶಿ ಸುರೇಶ, ಸಂಜಯ ಸೂರ್ಯವಂಶಿ, ಮಂಜುನಾಥ ಕೊಳಿಗುಡ್ಡ, ಮಲ್ಲಿಕಾರ್ಜುನ ಬಾಳಗೌಡರ, ಅಶೋಕ ಮುದ್ದಣ್ಣವರ, ಸುನೀಲ ಪಾಟೀಲ, ಪ್ರಶಾಂತ ಮಲಗಾಂವಿ, ಸಿದ್ಧನಗೌಡ ಪಾಟೀಲ, ಪ್ರಮೋದ ಗಡ್ಕರ ಉಪಸ್ಥಿತರಿದ್ದರು.

ರವಿ ಉಪ್ಪಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸನ್ಮಾನಿತರ ಪರಿಚಯವನ್ನು ಸಿದ್ದನಗೌಡ ಪಾಟೀಲ ವಾಚಿಸಿದರು, ಕೀರ್ತನಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button