
ತಗ್ಗಿದ ಮಳೆ; ಕುಗ್ಗಿದ ಜಲಾಶಯಗಳ ಹೊರಹರಿವು; ಕೇಂದ್ರ ಸಚಿವೆ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಳೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಜಲಾಶಯಗಳ ಹೊರಹರಿವು ಕೂಡ ತಗ್ಗಿದೆ. ಇನ್ನೂ 2 ದಿನ ಮಳೆ ಬಾರದಿದ್ದರೆ ಪ್ರವಾಹ ಇಳಿಮುಖವಾಗಬಹುದು.
ಕೊಯ್ನಾ ಜಲಾಶಯಕ್ಕೆ 77,387 ಕ್ಯುಸೆಕ್ ನೀರು ಒಳ ಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಗೆ ಬಿಡಲಾಗುತ್ತಿದೆ. ಕೊಯ್ನಾ ಡ್ಯಾಮ್ ಗೇಟನ್ನು 9 ಅಡಿ ಹೆಚ್ಚಿಸಲಾಗಿದೆ. ಸಧ್ಯಕ್ಕೆ ಕೊಯ್ನಾದಲ್ಲಿ 103.19 ಟಿಎಂಸಿ ನೀರು ಸಂಗ್ರಹವಿದೆ. ಕೊಯ್ನಾನಗರದಲ್ಲಿ 94 ಮಿಮೀ ಮಳೆಯಾಗುತ್ತಿದ್ದು, ಮಹಾಬಲೇಶ್ವರದಲ್ಲಿ 123 ಮಿಮೀ ಮಳೆಯಾಗಿದೆ.
ಮಲಪ್ರಭಾ ಜಲಾಶಯಕ್ಕೆ 54,321 ಕ್ಯುಸೆಕ್ಸ್ ನೀರು ಬರುತ್ತಿದ್ದು, 50,964 ಮಿಮೀ ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 2078.90 ಅಡಿ ನೀರಿದೆ. ಜಲಾಶಯದ ಮಟ್ಟ 2079.50 ಅಡಿ. ಹಿಡಕಲ್ ಜಲಾಶಯದಲ್ಲಿ 2171.40 ಅಡಿ ನೀರಿದ್ದು, ಜಲಾಶಯದ ಎತ್ತರ 21.75 ಅಡಿ. ಇಲ್ಲಿಂದ 90,617 ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 85,003 ಕ್ಯುಸೆಕ್ಸ್ ನೀರು ಬರುತ್ತಿದೆ.
ಆಲಮಟ್ಟು ಜಲಾಶಯದಿಂದ 5,30,000 ಕ್ಯುಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, 5,70,000 ಕ್ಯುಸೆಕ್ಸ್ ನೀರು ಜಲಾಶಯಕ್ಕೆ ಬರುತ್ತಿದೆ. ಜಲಾಸಯದಲ್ಲಿ 123 ಟಿಎಂಸಿ ನೀರಿನ ಸಾಮರ್ಥಯವಿದ್ದು, ಸಧ್ಯಕ್ಕೆ 88.758 ಕ್ಯುಸೆಕ್ಸ್ ಸಂಗ್ರಹವಿದೆ.
ನಿರ್ಮಲಾ ಸೀತಾರಾಮನ್ ಪರಿಶೀಲನೆ
ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗಾವಿಗೆ ಭೇಟಿ ನೀಡಿದ್ದು ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವೆ ನಂತರ ವೈಮಾನಿಕ ಸಮೀಕ್ಷೆ ನಡೆಸಿದರು. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಎಂ.ಬಿ.ಜಿರಲಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.