*ಸುಪ್ರೀಂಕೋರ್ಟ್ ತೀರ್ಪಿನಿಂದ ನ್ಯಾಯಾಂಗದ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಹೆಚ್ಚಾಗಿದೆ: ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮೊದಲ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ನ ಜಾಮೀನು ರದ್ದುಗೊಳಿಸಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ ನ್ಯಾ. ಪರ್ದಿವಾಲಾ, ನ್ಯಾ.ಆರ್.ಮಹದೇವನ್ ಅವರಿದ್ದ ಪೀಠ ದರ್ಶನ್, ಪವಿತ್ರಾ ಗೌಡ ಸೇರಿದಂತೆ ೭ ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ತಕ್ಷಣ ಏಳು ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಭಾವುಕರಾಗಿ ಈಗ ನ್ಯಾಯಾಲಯದ ಮೇಲೆ ನಂಬಿಗೆ ಬಂತು ಎಂದಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಾಗೂ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ. ಹೈಕೋರ್ಟ್ ದರ್ಶನ್ ಹಾಗೂ ಗ್ಯಾಂಗ್ ಗೆ ಜಾಮೀನು ಮಂಜೂರು ಮಾಡಿದ್ದಾಗ ತುಂಬಾ ಆತಂಕವುಂಟಾಗಿತ್ತು. ಮಗನನ್ನು ಕೊಲೆ ಮಾಡಿರುವ ಆರೋಪಿಗಳುಗೆ ಸುಲಭವಾಗಿ ಜಾಮೀನು ನೀಡಲಾಗಿರುವುದನ್ನು ನೋಡಿ ಆಘಾತವಾಗಿತ್ತು. ಇಂದು ಸುಪ್ರೀಂ ಕೋರ್ತ್ ಆರೋಪಿಗಳ ಜಾಮೀನು ರದ್ದುಗೊಳಿಸಿದೆ. ಈಗ ನ್ಯಾಯ ಸಿಕ್ಕ ವಿಶ್ವಾಸ ಮೂಡಿದೆ ಎಂದರು.
ಗುರುಗಳು, ದೇವರ ಅನುಗ್ರಹದಿಂದ ನ್ಯಾಯ ಸಿಕ್ಕಿದೆ. ಆರೋಪಿಗಳ ಜಾಮೀನು ರದ್ದಾಗಿದ್ದು, ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.