ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವಪೂರ್ಣ: ಇತಿಹಾಸಕಾರ ಶಿವಾನಂದ ಹೆಳವರ

ಪ್ರಗತಿವಾಹಿನಿ ಸುದ್ದಿ, ರಾಯಬಾಗ: ಸದೃಢ, ಸುಸಜ್ಜಿತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವಪೂರ್ಣವಾದುದು ಎಂದು ಇತಿಹಾಸಕಾರ ಶಿವಾನಂದ ಹೆಳವರ ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ಕೋಳಿಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾರೂಗೇರಿಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ‘ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
“ಯುವಕರೆ ರಾಷ್ಟ್ರದ ಶಕ್ತಿ, ಯುವಕರಲ್ಲಿ ದೇಶ ಪ್ರೇಮ, ಸೇವಾ ಮನೋಭಾವನೆ, ಯಾವುದೇ ಫಲಾಪೇಕ್ಷೆ ಇಲ್ಲದೆ ಸಕ್ರಿಯವಾಗಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಷ್ಟ್ರದ ಅಳಿವು, ಉಳಿವು ಕೂಡ ಯುವಕರಲ್ಲಿ ಕೈಯಲ್ಲಿ ಇದೆ, ನಾವೆಲ್ಲರೂ ಒಂದು ಎನ್ನುವ ಭಾವನೆ ಇದ್ದರೆ ಮಾತ್ರ ಈ ದೇಶವನ್ನು ಕಟ್ಟಲು ಸಾಧ್ಯ” ಎಂದರಲ್ಲದೆ, “ಅದರ ಜೊತೆಗೆ ದೇಶದ ಸಂಪನ್ಮೂಲ ರಕ್ಷಣೆ, ನೀರು, ಗಿಡ ಮರ ಬೆಳೆಸುವುದು ಯುವಕರ ಜವಾಬ್ದಾರಿ” ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿ.ಎಂ.ನಾಯ್ಕ ವಹಿಸಿ ಮಾತನಾಡಿ “ಎಲ್ಲ ಸ್ವಯಂ ಸೇವಕರು ಸೇವಾ ಮನೋಭಾವನೆ, ಶಿಸ್ತು, ಸಮಯ ಪಾಲನೆ, ಸತತವಾದ ಅಧ್ಯಯನ ರೂಡಿಸಿಕೊಳ್ಳಬೇಕು” ಎಂದರು.
ವೇದಿಕೆಯ ಮೇಲೆ ಶಿಬಿರದ ಅಧಿಕಾರಿ ಪ್ರೊ.ಬಿ.ಎ. ಕಾಂಬಳೆ, ಬಂಡಾಯ ಯುವ ಸಾಹಿತಿ ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು. ಲಕ್ಕಪ್ಪ ಕಾಂಬಳೆ ಪ್ರಾರ್ಥಿಸಿದರು. ಮನಿತಾ ಮಂಟೂರ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ