Latest

ಸ್ವಾವಲಂಬಿ ಭಾರತ ಯೋಜನೆಯಿಂದ ಮುಂಚೂಣಿ ದೇಶಗಳ ಸಾಲಿಗೆ ಭಾರತ: ಸದಾನಂದ ಗೌಡ

ಪ್ರಗತಿವಾಹಿನಿ ಸುದ್ದಿ;  ನವದೆಹಲಿ: ಜಾಗತಿಕ ಮಹಾಮಾರಿ ಕೊರೊನಾ ನೀಡಿದ ಸವಾಲನ್ನು ವರವಾಗಿ ಪರಿವರ್ತಿಸಲು ಪ್ರಧಾನಿ ಶ್ರೀ ನರೇಂದ್ರ ಮೊಧಿ ನೇತೃತ್ವದ ಭಾರತ ಸರ್ಕಾರವು ದೂರದೃಷ್ಟಿಯ ಯೋಜನೆಗಳೊಂದಿಗೆ ಹೆಜ್ಜೆಹಾಕುತ್ತಿದೆ. ಮೋದಿಯವರು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಯ “ಸ್ವಾವಲಂಬಿ ಭಾರತ” ಯೋಜನೆಯು ಮುಂಬರುವ ದಿನಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯ – ಹೀಗೆ ಸಮಾಜದ ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಕೊಂಡು “ಸ್ವಾವಲಂಬಿ ಭಾರತ” ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಕೊರೊನಾ ಮಹಾಮಾರಿ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಟ್ಟಿದೆ. ಉದಾಹರಣೆಗೆ ಕರೋನಾ ಆರಂಭಕ್ಕೆ ಮುನ್ನ ಭಾರತವು ಸೋಂಕು ನಿರೋಧಕ ಪಿಪಿಇ ಕಿಟ್ಟುಗಳನ್ನು  ತಯಾರಿಸುತ್ತಿರಲಿಲ್ಲ. ಆದರೆ ಈಗ ಸ್ವದೇಶಿ ಉದ್ಯಮಗಳು ಪ್ರತಿದಿನ ೨ ಲಕ್ಷಕ್ಕೂ ಅಧಿಕ ಪಿಪಿಇ ಕಿಟ್ಟುಗಳನ್ನು ತಯಾರಿಸುತ್ತಿದ್ದಾರೆ. ಈ ಸಾಮರ್ಥ್ಯ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ.ಔಷಧ ವಲಯದಲ್ಲಿ ಭಾರತವು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ವಿವಿಧ ನಮೂನೆಯ ಔಷಧಗಳನ್ನು ರಫ್ತು ಮಾಡುತ್ತದೆ. ಆದರೆ ಔಷಧಗಳಿಗೆ ಬೇಕಾಗುವ ಎಪಿಐ ಮುಂತಾದ ಬಹಳಷ್ಟು ಮೂಲ ರಾಸಾಯನಿಕ ವಸ್ತುಗಳಿಗಾಗಿ ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ವಸ್ತುಗಳ ಪರಾವಲಂಬನೆಯನ್ನು ಸಂಪೂರ್ಣ ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸದಾನಂದ ಗೌಡ ಹೇಳಿದರು.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೃಷಿ ನಂತರ ಅತಿಹೆಚ್ಚು ಉದ್ಯೋಗಾವಕಾಶವನ್ನ ನೀಡುವ ವಲಯವಾಗಿದೆ. ಹಾಗಾಗಿ ‘ಸ್ವಾವಲಂಬಿ ಭಾರತ’ ಯೊಜನೆ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸುಲಭ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅಕ್ಟೋಬರ್ 31ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇಎಂಐ ತುಂಬಬೇಕಾಗಿಲ್ಲ. ಎರಡನೇ ವರ್ಷದಿಂದ ಸಾಲಮರುಪಾವತಿ ಆರಂಭವಾಗುತ್ತದೆ. ಸಾಲತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ. ಇನ್ನು ಸಾಲ ತೀರಿಸಲಾಗದೆ ಅನುತ್ಪಾದಕಗೊಂಡಿರುವ ಸುಮಾರು 2 ಲಕ್ಷ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಕೆಗಳ ಪುನಶ್ಚೇತನಕ್ಕಾಗಿ ಕೇಂದ್ರವು 20 ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಿದೆ. ಹಾಗೆಯೇ ಸಣ್ಣ ಕೈಗಾರಿಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಆರಂಭಿಕ ನಿಧಿಯೊಂದಿಗೆ 50 ಸಾವಿರ ಕೋಟಿ ರೂಪಾಯಿ ‘ಫಂಡ್ ಆಫ್ ಫಂಡ್’ ಸ್ಥಾಪಿಸಿದೆ. ಈ ಎಲ್ಲ ಕ್ರಮಗಳು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ಹೊಸ ಶಕೆಯನ್ನ ಆರಂಭಿಸಲಿವೆ ಎಂದು ತಿಳಿಸಿದರು.

ಕೈಗಾರಿಗಳು ಅಗತ್ಯ ಭೂಮಿ ಪಡೆಯುವಲ್ಲಿದ್ದ ಕಾನೂತಾತ್ಮಕ ಅಡಚಣೆಗಳನ್ನು ತೊಡೆದುಹಾಕಲಾಗಿದೆ. ಇನ್ನಷ್ಟು ಆಡಳಿತಾತ್ಮಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಸ್ವದೇಶಿ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು ಉದ್ಯೋಗಾವಕಾಶ ಸಹಜವಾಗಿಯೇ ಹೆಚ್ಚಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

21ನೇ ಶತಮಾನವು ಭಾರತಕ್ಕೆ ಸೇರಿದ್ದು. ಜಾಗತಿಕ ಸರಬರಾಜು ವ್ಯವಸ್ಥೆಯ ಪ್ರಮುಖ ಭಾಗವಾಗೋಣ ಎಂಬ ಪ್ರಧಾನಿಯವರ ಕರೆಯನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನೇ ಖರೀದಿಸೋಣ. ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ. ಇನ್ನುಮುಂದೆ 200 ಕೋಟಿ ರೂಪಾಯಿ ಮೌಲ್ಯದವರೆಗಿನ ಕೆಲಸ, ಸೇವೆ, ಸರಕು ‌ಸರಂಜಾಮುಗಳಿಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದಿಲ್ಲ. ಸ್ವದೇ‌ಶಿ ಕಂಪನಿಗಳು, ಗುತ್ತಿಗೆದಾರರು, ಸರಬರಾಜುದಾರರನ್ನು ಉತ್ತೇಜಿಸಲು ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಗುಡಿಕೈಗಾರಿಕೆ, ಸ್ಥಳೀಯ ಉತ್ಪನ್ನಗಳ ಪ್ಯಾಕೆಜಿಂಗ್‌, ಬ್ರಾಂಡಿಂಗ್‌ ಮತ್ತು ರಫ್ತು ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಘೋಷಿಸಲಾಗಿದೆ. ಜನ ಇದರ ಉಪಯೋಗ ಪಡೆಯಬೇಕು. ಮುಂಬರುವ ದಿನಗಳಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮಾರುಕಟ್ಟೆ ಪಡೆಯುವಂತಾಗಬೇಕು. “ಮೇಕ್‌ ಇನ್‌ ಇಂಡಿಯಾ” ವಸ್ತುಗಳು ವಿಶ್ವಾದ್ಯಂತ ರಾರಾಜಿಸಬೇಕು ಎಂದು ಅವರು ಹೇಳಿದರು.

ರೈತರಿಗೆ ಈಗಾಗಲೇ ಮೂರು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸುಲಭಸಾಲ ಸೌಲಭ್ಯವನ್ನು ಘೋಷಿಸಲಾಗಿದ್ದು ಇಂದು ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಲಭ್ಯಗಳಿಗಾಗಿ ನೆರವು ಪ್ರಕಟಿಸಲಾಗಿದೆ. ಸಂಸ್ಕರಣಾ ಘಟಕಗಳು, ಶೀತಲ ಸ್ಟೋರೇಜ್‌ ಕೇಂದ್ರಗಳು, ಗೋದಾಮುಗಳು, ಶೀತಲ ವ್ಯವಸ್ಥೆಯುಳ್ಳ ಸಾಗಣೆ ವ್ಯವಸ್ಥೆ, ಸಾಗಣೆ, ಸುಲಭ ಮಾರುಕಟ್ಟೆ ವ್ಯವಸ್ಥೆ – ಇವೇ ಮುಂತಾದ ಸೌಲಭ್ಯಗಳು ಇದರಲ್ಲಿ ಸೇರಿವೆ. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಹಾಗೂ ಉತ್ತಮ ಮೌಲ್ಯ (ಬೆಲೆ) ಪಡೆಯಲು ಅನುಕೂಲವಾಗಲಿದೆ. ನಮ್ಮ ರಾಜ್ಯದ ರಾಗಿಯೂ ಅಂತಾರಾಷ್ಟ್ರೀಯ ಬ್ರಾಂಡಿಂಗ್‌ ಒಂದಿಗೆ ವಿಶ್ವಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಪಶುಸಂಗೋಪನೆ, ಹಾಲು ಸಂಗ್ರಹಣೆ ಮತ್ತು ಸಂಸ್ಕರಣೆ, ಡೇರಿ ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಲು 23 ಸಾವರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಘೋಷಿಸಲಾಗಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button