Kannada NewsKarnataka News

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಟೀಮ್ ಸಮಾವೇಶ; ಡಬಲ್ ಗಿಫ್ಟ್ ಕೊಡ್ತಾರಾ ಮಾಜಿ ಸಚಿವ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಡಬಲ್ ಗಿಫ್ಟ್ ಕೊಡುವುದಾಗಿ ಇದೀಗ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೂಡ ಹೇಳಿದ್ದಾರೆ.
ಗ್ರಾಮೀಣ ಜಿಲ್ಲಾಧ್ಯಕ್ಷ, ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಸಂಜಯ ಪಾಟೀಲ ಡಬಲ್ ಗಿಫ್ಟ್ ಕೊಡುವುದಾಗಿ ಹೇಳಿದ ಬೆನ್ನಲ್ಲೇ ಇದೀಗ ರಮೇಶ ಜಾರಕಿಹೊಳಿ ಕೂಡ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತ‌ನಾಡಿದರು. ಗ್ರಾಮೀಣ ಕ್ಷೇತ್ರದಲ್ಲಿ ಮತದಾರರಿಗೆ ಗಿಫ್ಟ್ ನೀಡುತ್ತಿರುವ ವಿಚಾರಕ್ಕೆ  ಸಂಬಂಧಿಸಿದಂತೆ ಪ್ರಶ್ನಿಸಿದಾಗ, ಆಗಲಿ ಆಗಲಿ ನಾನು ಈಗ ಗಿಪ್ಟ್ ಕೊಡುವುದಿಲ್ಲ. ಕೊನೆಗೆ ಒಮ್ಮೆ ಕೊಡುವುದಿದೆ. ಎಷ್ಟು ಕೊಡುತ್ತಾರೆ ಅದರ ಡಬಲ್ ಕೊಡುವುದಾಗಿ ಹೇಳಿದ್ದಿದೆ, ನೋಡೋಣ.  ಗಿಫ್ಟ್ ಹಂಚಲಿ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ರಿಯಾಕ್ಟ್ ಮಾಡುತ್ತೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶಕ್ಕೆ ಪ್ಲ್ಯಾನ್ ವಿಚಾರಕ್ಕೆ ಉತ್ತರಿಸಿದ ಅವರು, ಚುನಾವಣೆ ಬಂದಾಗ ಎಲ್ಲಾ ಪಕ್ಷಗಳು ಸಮಾವೇಶ ಮಾಡುವುದು ಸಹಜ. ಅದರಲ್ಲಿ ವಿಶೇಷ ಏನಿಲ್ಲ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತಿರುವುದು ಬಿಜೆಪಿ ಸಮಾವೇಶ ಅಲ್ಲ. ಬಿಜೆಪಿಯಿಂದ ಮಾಡುವಾಗ ಗ್ರಾಮೀಣ ಅಧ್ಯಕ್ಷರ ನೇತೃತ್ವದಲ್ಲಿ ಮಾಡುತ್ತೇವೆ. ನಾಳೆ ಆಗುತ್ತಿರುವ  ಸಮಾವೇಶ ನಮ್ಮ ಟೀಮ್ ಮಾಡ್ತಿದೆ, ಪಕ್ಷಾತೀತವಾಗಿ ನಡೆದಿದೆ ಎಂದರು.

ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮಂತ್ರಿ ಮಾಡತ್ತಾರೋ  ಇಲ್ಲವೋ ಸಿಎಂ ಅವರಿಗೆ, ವರಿಷ್ಠರಿಗೆ ಬಿಟ್ಟ ವಿಷಯ. ವರಿಷ್ಠರು ಏನು ಆದೇಶ ಕೊಡುತ್ತಾರೋ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲಾ ಬಿಜೆಪಿಯಲ್ಲೇ ಉಳಿಯುತ್ತೇನೆ. 2023ಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ವರಿಷ್ಠರು ಹೇಳಿದ ಕಡೆ ಕೆಲಸ ಮಾಡಿ ಬಿಜೆಪಿಗೆ ಪಕ್ಷ ಪೂರ್ಣ ಬಹುಮತ ತರಲು ಪ್ರಯತ್ನ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಮಂತ್ರಿಯಾದರೆ ಸಕ್ಕರೆ ಕಾರ್ಖಾನೆಯಲ್ಲಿ ಮಾಡಿದ ಅವ್ಯವಹಾರ ಬಯಲು ಮಾಡುತ್ತೇವೆ  ಎಂಬ ಡಿಕೆಶಿ ಹೇಳಿಕೆ  ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ಮೋಸ್ಟ್ ವೆಲ್ ಕಮ್, ಇದನ್ನ ಸ್ವಾಗತ ಮಾಡುತ್ತೇನೆ. ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು, ಮಾಡಲಿ. ವಿರೋಧಿಗಳು ಮಾಡೋರೆ, ನಾವೇನೂ ಮಾಡಬೇಕು ಮಾಡುತ್ತೇವೆ. ಕಾನೂನು ಬದ್ಧವಾಗಿ ಸಕ್ಕರೆ ಕಾರ್ಖಾನೆಯನ್ನು ನನ್ನ ಮಗ ನಡೆಸುತ್ತಾನೆ. ಕಳೆದ ಆರು ವರ್ಷದಿಂದ ಕಾರ್ಖಾನೆಗೆ ನಾನು ಕಾಲಿಟ್ಟಿಲ್ಲ. ಆ ಫ್ಯಾಕ್ಟರಿ ವ್ಯವಹಾರ ನನ್ನ ಮಗ ನೋಡುತ್ತಾನೆ. ಅವನು ಅದಕ್ಕೆ ಉತ್ತರ ಕೊಡ್ತಾನೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಬಿ.ಕೆ. ಹರಿಪ್ರಸಾದ್ 17 ಜನ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿ.ಕೆ. ಹರಿಪ್ರಸಾದ್  ತಪ್ಪಿ ಮಾತನಾಡಿರಬೇಕು.
ಅಂತಹ ಮಾತಾಡುವ ಮನುಷ್ಯ ಅಲ್ಲ. ಏನೋ ತಪ್ಪಿ ಮಾತಾಡಿರಬೇಕು. ನಾನು ಪೂರ್ಣ ನೋಡಿಲ್ಲ, ನಮ್ಮ ಮಿತ್ರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.

 ಇಂತಹ ನೂರು ಸಿಡಿ ಮಾಡಲಿ

 17 ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲಿ ಬಿಡಿ, ಸಿಡಿಗಳನ್ನ ಇಟ್ಟುಕೊಂಡು ಕೂರಬಾರದು. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಿ. ಇಂತಹ ನೂರು ಸಿಡಿ ಬರಲಿ, ಎಲ್ಲಾ ಶಾಸಕರು ಫೈಟ್ ಮಾಡಲು ರೆಡಿ ಇದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಜನರಿಗೆ ರಾಜ್ಯದ ಜನ ಸರಿಯಾಗಿ ಉತ್ತರ ಕೊಡುತ್ತಾರೆ ಎಂದರು.
ಬಿಟ್ಟು ಹೋದ ಶಾಸಕರು ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಉಳಿದವರ ಬಗ್ಗೆ ಗೊತ್ತಿಲ್ಲ.
ನನಗೆ ಗೊತ್ತಿರುವ ಹಾಗೆ ಯಾರೂ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಪರಿಸ್ಥಿತಿ ಏನಿದೆ? ಇಡೀ ಕರ್ನಾಟಕದಲ್ಲಿ ಮಾತ್ರ ಉಸಿರಾಡುತ್ತಿದೆ. ನಮ್ಮ ವರಿಷ್ಠರು ನಾಳೆ ದಿಲ್ಲಿಯಿಂದ ಬಂದು ಕುಳಿತರೆ ಗಾಳಿಪಟ ಆಗುತ್ತೆ. ಅದಕ್ಕೆ ಭವಿಷ್ಯ ಇಲ್ಲ. ಬಿಜೆಪಿಯನ್ನು ಇನ್ನೂ ಇಪ್ಪತ್ತು ವರ್ಷ ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿಯಿಂದ ರಾಜ್ಯಕ್ಕೆ, ದೇಶಕ್ಕೆ ಹಿತ ಆಗುತ್ತದೆ ಎಂದರು.
ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರು ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಪ್ರಭಾವ ಬೀರಿದ್ದಾರೆ. ಕರ್ನಾಟಕಕ್ಕೆ ಬರುವುದರಿಂದ ಬಿಜೆಪಿಗೆ ಅನುಕೂಲ ಆಗಲಿದೆ. ಮೋದಿ ರಾಜ್ಯಕ್ಕೆ ಎಷ್ಟು ಸಾರಿ ಬರುತ್ತಾರೋ ಅಷ್ಟು ಒಳ್ಳೆಯದು ಎಂದರು.
https://pragati.taskdun.com/d-k-shivakumarpressmeetbagalakote/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button