LatestPragativahini Special

ಗಜಮುಖನೇ ಗಣಪತಿಯೇ ನಿನಗೆ ವಂದನೆ…

ವಿಶ್ವಾಸ ಸೋಹೋನಿ

ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ ಗಣಗಳ-ಸಮೂಹಗಳ ಅಧಿಪತಿ; ವಿಶ್ವದ ಎಲ್ಲ ಮಾನವ ಸಮಾಜದ ಒಡೆಯ; ಸರ್ವಗುಣಗಳಧಾರಿ, ಸರ್ವವಿದ್ಯಾ-ಪಾರಂಗತ. ಸುಮುಖನೆಂದರೆ ಸುಂದರವಾದ ಮುಖವನ್ನು ಹೊಂದಿರುವವನು; ಉಮಾಪುತ್ರನೆಂದರೆ ಪಾರ್ವತಿ ಮಗ; ಹರಸುತನೆಂದರೆ ಶಿವನ ಮಗ; ಶೂರ್ಪಕರ್ಣನೆಂದರೆ ದೊಡ್ಡ ಕಿವಿಗಳನ್ನು ಹೊಂದಿರುವವನು; ವಕ್ರತುಂಡನೆಂದರೆ ಬಾಗಿದ ಸೊಂಡಿಲನ್ನು ಹೊಂದಿರುವವನು; ಗುಹಾಗ್ರಜನೆಂದರೆ ಭಾರವಾದ ಧ್ವನಿಯನ್ನು ಹೊಂದಿರುವವನು; ಏಕದಂತನೆಂದರೆ ಒಂದು ದಂತವನ್ನು ಹೊಂದಿರುವವನು; ಹೇರಂಭನೆಂದರೆ ತಾಯಿಯಿಂದ ಪ್ರೀತಿಸಲ್ಪಟ್ಟವನು; ಚತುರ್ಹೋತ್ರನೆಂದರೆ ನಾಲ್ಕು ಕೈಗಳನ್ನು ಹೊಂದಿರುವವನು; ಸರ್ವೇಶ್ವರನೆಂದರೆ ಬ್ರಹ್ಮಾಂಡದ ಅಧಿಪತಿ; ವಿಕಟನೆಂದರೆ ಶಕ್ತಿಶಾಲಿ; ಹೇಮತುಂಡನೆಂದರೆ ಹಿಮಾಲಯದಲ್ಲಿ ಉಳಿದುಕೊಂಡವನು; ವಿನಾಯಕನೆಂದರೆ ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುವವನು; ಕಪಿಲನೆಂದರೆ ಚಿನ್ನದ ಬಣ್ಣದಲ್ಲಿರುವವನು; ವಟವನೆಂದರೆ ಬಾಲಚಂದ್ರನ ಚಿಹ್ನೆಯನ್ನು ಹೊಂದಿರುವವನು; ಸುರಾಗ್ರಜನೆಂದರೆ ಸ್ವರ್ಗದ ಅಧಿಪತಿ; ಸಿದ್ಧಿವಿನಾಯಕನೆಂದರೆ ಯಶಸ್ಸಿನ ಶ್ರೇಷ್ಠತೆಯನ್ನು ಹೊಂದಿರುವವನು. ಗಣಪತಿಯು ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದು ಕರೆಯುತ್ತಾರೆ; ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರನೆಂದು ಕರೆಯುತ್ತಾರೆ. ದು:ಖವನ್ನು ಹರಣ ಮಾಡಿ ಸುಖವನ್ನು ಕೊಡುವುದರಿಂದ ದು:ಖಹರ-ಸುಖಕರನೆಂದು ಹೇಳಲಾಗುತ್ತದೆ. ಲಂಬೋದರನೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮಿಸುವವನು ಎಂದರ್ಥ. ಮೂಷಕವಾಹನನೆಂಬುದು ಮನಸ್ಸು-ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖದ ಪ್ರತೀಕಾರ್ಥ ಬಲಶಾಲಿ ಆಗಿರುವುದಾಗಿದೆ. ಮೋದಕಪ್ರಿಯನೆಂದರೆ ಸ್ನೇಹ ಮತ್ತು ಮಧುರತೆಯ ಗುಣವನ್ನು ಹೊಂದಿರುವವನು ಎಂದರ್ಥ. ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕಗಳಾಗಿವೆ.
ಗಣಪತಿಗೆ ೧೧, ೨೧, ೩೨, ೧೦, ೧೦೦೮ ನಾಮಗಳಿವೆ. ಗಣೇಶ ಪುರಾಣ, ಮುದ್ಗಲ್ ಪುರಾಣ, ಗಣಪತಿ ಅಥರ್ವಶೀರ್ಸ, ಶಿವಪುರಾಣ ಇನ್ನೂ ಮುಂತಾದ ಶಾಸ್ತ್ರಗಳಲ್ಲಿ ಅವನ ಮಹಿಮೆಯನ್ನು ಉಲ್ಲೇಖಿಸಲಾಗಿದೆ.
ಗಣೇಶನ ಅಷ್ಟವಿನಾಯಕ ಮಂದಿರಗಳು ಸುಪ್ರಸಿದ್ಧವಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಷ್ಟವಿನಾಯಕ ದರ್ಶನಯಾತ್ರೆ ಮಾಡುತ್ತಾರೆ. ಮುಖ್ಯವಾಗಿ ಇದರಲ್ಲಿ ಅನೇಕ ಸ್ಥಳಗಳಲ್ಲಿ ಉದ್ಭವ ಮೂರ್ತಿಗಳಿವೆ. ಮೋರೆಗಾವ್‌ನಲ್ಲಿ ಮೇರೆಶ್ವರ, ಥೇಯುರ್‌ದಲ್ಲಿ ಚಿಂತಾಮಣಿ, ಸಿದ್ಧಟೇಕದ ಸಿದ್ಧಿವಿನಾಯಕ, ರಾಂಜಣಗಾವ್‌ದ ಮಹಾಗಣಪತಿ, ಓಝರ್‌ನಲ್ಲಿ ವಿಘ್ನೇಶ್ವರ, ಲೆಣ್ಯಾದ್ರ್ರಿಯ ಗಿರಿಜಾತ್ಮಜ, ಮಹಾಡದ ವರದ ವಿನಾಯಕ ಮತ್ತು ಪಾಲಿಯ ಬಲ್ಲಾಳೇಶ್ವರ. ಈ ರೀತಿ ಪೂನಾ ಜಿಲ್ಲೆಯಲ್ಲಿ ಐದು, ರೈಗಡ್ ಜಿಲ್ಲೆಯಲ್ಲಿ ಎರಡು ಮತ್ತು ಅಹಮದ್‌ನಗರ ಜಿಲ್ಲೆಯಲ್ಲಿ ಒಂದು ತೀರ್ಥಸ್ಥಾನ ಇದೆ.
ಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿ, ಬಣ್ಣವನ್ನು ಹಚ್ಚಿ ಶೃಂಗಾರ ಮಾಡಿ ಪೂಜೆ ಮಾಡುವರು. ಕೆಲವು ದಿನಗಳ ನಂತರ ಗಣಪನ ವಿರ್ಸಜನೆ ಮಾಡುವರು. ಇದರ ನಿಜವಾದ ಅರ್ಥ ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರಾಗಿದೆ. ನಮ್ಮನ್ನು ನಾವು ಆತ್ಮರೆಂದು, ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು ದಿವ್ಯಗುಣಗಳ ಶೃಂಗಾರ ಮಾಡಿಕೊಂಡಾಗ ಪೂಜೆಗೆ ಯೋಗ್ಯರಾಗುತ್ತೇವೆ. ದೇಹಾಭಿಮಾನದ ಮೂಲವಾಗಿರುವ ಪಂಚವಿಕಾರಗಳ ತ್ಯಾಗದಿಂದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಬ್ರಹ್ಮಚಾರಿ ವಿನಾಯಕನಿಗೆ ಇಬ್ಬರು ಪತ್ನಿಯರು – ಸಿದ್ಧಿ ಮತ್ತು ಬುದ್ಧಿ ಎಂದು ತೋರಿಸಲಾಗುತ್ತದೆ. ಇದರ ಅರ್ಥ ಪ್ರವೃತ್ತಿ ಮಾರ್ಗದಲ್ಲಿದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.
ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿದಾತ ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆಯನ್ನು ಮಾಡುವ ವಾಡಿಕೆ ಇದೆ. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮeನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದವಲ್ಲ, ಅದು ಗುಣವಾಚಕ ಶಬ್ದವಾಗಿದೆ. ಆತ್ಮವು ಶರೀರ ಬಿಟ್ಟು ಹೋದ ಮೇಲೆ ದೇಹವು ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯಂತೆ ನಾಲ್ಕು ದಿನಗಳ ಬಾಳಾಗಿದೆ.
ಆದ್ದರಿಂದ ಅನೇಕ ಸಮಸ್ಯೆಗಳು, ಬೆಲೆ ಏರಿಕೆ, ಪ್ರಾಕೃತಿಕ ವಿಕೋಪಗಳ ಸಂಕಷ್ಟದ ಸಮಯದಲ್ಲಿ ಗಣೇಶನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸಮೀಪದ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಹೋಗಿ ನಿರಾಕಾರ ಪರಮಾತ್ಮನು ತಿಳಿಸುವ ಸತ್ಯ eನದ ಆಧಾರದಿಂದ ಹಬ್ಬದ ಮಹತ್ವವನ್ನು ಅರಿತುಕೊಳ್ಳೋಣ.
ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ!
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ!!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button