*ಹುಕ್ಕೇರಿಯಲ್ಲಿ ಸೋಲಿಗೆ ಕಾರಣ ಬಹಿರಂಗಪಡಿಸಿದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸೋಲು-ಗೆಲುವು ಬದುಕಿನಲ್ಲಿ ಸಾಮಾನ್ಯ. ಈಗ ಸೋತ ನಮಗೆ ಮುಂದಿನ ಪ್ರಯತ್ನದಿಂದ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಲೋಕೋಪಯೊಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಮ್ಮ ಪ್ರಯತ್ನ ನಾವು ಮಾಡಿದೇವೆ. ಆದರೆ ಬೇರೆ ಬೇರೆ ಕಾರಣಗಳಿಂದ ನಾವು ಸೋತಿದ್ದೇವೆ. ಸೋಲು ಸೋಲೆ. ನಮ್ಮ ಹತ್ತಿರ ಹೇಳಲಿಕ್ಕೆ ಸಾಕಷ್ಟು ಕಾರಣವಿದ್ದರೂ 1 ಮತದಿಂದ ಸೋತರು ಅದು ಸೋಲೆ ಎಂದು ಒಪ್ಪಿಕೊಳ್ಳಬೇಕಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸೋಲಿಗೆ ಪ್ರಮುಖ ಕಾರಣವೆನೆಂದರೆ ಕೆಲವು ಕಡೆ ನಮ್ಮ ಮತಗಳು ತಿರಸ್ಕಾರಗೊಂಡಿವೆ. 9 ಮತ ಹಾಕುವಲ್ಲಿ 10 ಮತ ಹಾಕಿದ್ದಾರೆ. ಕೆಲವು ಕಡೆ 5 ಸಾವಿರ ಹಾಗೂ ಇನ್ನೊಂದು ಕಡೆ 8 ಸಾವಿರ ಮತಗಳು ತಿರಸ್ಕಾರವಾಗಿವೆ. ನಾವು ಅನೇಕ ಜನರಲ್ ಚುನಾವಣೆ ಮಾಡಿದ್ದೇವೆ. ಈಗ ಹುಕ್ಕೇರಿಯಲ್ಲಿ ನಡೆದ ವಿದ್ಯುತ್ ಸಹಕಾರಿ ಚುನಾವಣೆ ನಮಗೆ ಹೊಸದಾಗಿದ್ದು, ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟು ಪ್ರಯತ್ನ ನಮ್ಮ ಕಡೆಯಿಂದ ಮಾಡಿದ್ದೇವೆ. 12 ಸಾವಿರ ಮತಗಳನ್ನು ಪಡೆದಿದ್ದೇವೆ. ನಮ್ಮ ವಿರೋಧಿ ಬಣ 20 ಸಾವಿರ ಮತಗಳನ್ನು ಪಡೆದುಕೊಂಡಿದೆ ಎಂದರು.
ನಾವು ಗುರಿಯಿಟ್ಟ ಹಂತ ತಲುಪಿದ್ದೇವೆ. ಮತದಾರರು ತಪ್ಪು ಮತಗಳು ಹಾಕಿದ್ದರಿಂದ ನಮ್ಮಗೆ ಹಿನ್ನಡೆಯಾಗಿದೆ. ಅಲ್ಲದೇ ನಮ್ಮ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸರಿಯಾದ ರೀತಿ ಮತದಾರರ ಮನ ಮುಟ್ಟಿ ಮನವೊಲಿಸಲು ಸಾಧ್ಯವಾಗದರಿಂದ ಈ ಚುನಾವಣೆಯಲ್ಲಿ ಸೋಲಾಗಿದೆ ಎಂದರು.
ಸೋಲಿನಿಂದ ಗೆಲುವು ಆಗೆ ಆಗುತ್ತಿದೆ: ನಮ್ಮ ವಿರೋಧಿಗಳ ಬಣ 30 ವರ್ಷಗಳಿಂದ ರಾಜಕಾರಣ ಮಾಡಿ 20 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ನಾವು 3 ತಿಂಗಳಲ್ಲಿ ಪ್ರಚಾರ ಮಾಡಿ 12 ಸಾವಿರ ಮತಗಳನ್ನು ಪಡೆದಿದೇವೆ. ನಾವು ಎಷ್ಟು ಗುರಿ ಮುಟ್ಟಬೇಕು ಅಷ್ಟು ಹಂತದ ಗುರಿ ತಲುಪಿದ್ದೇವೆ. ಸೋಲು-ಗೆಲುವು ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸೋಲು ಅನುಭಿಸಿದಾಗ ಕುಗ್ಗಬಾರದು. ಹಾಗೇಯೇ ಹಿಂಜರಿಯಬಾರದು. ಅದೇ ರೀತಿಯಾಗಿ ಸೋಲು ಗೆಲುವಿನ ಮೊದಲು ಮೆಟ್ಟಿಲಗಳೆಂದು ಮುನ್ನಡೆಯಬೇಕು ಎಂದು ಸಚಿವರು ಹೇಳಿದರು.
ಈ ಚುನಾವಣೆ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿಲ್ಲ: ಹುಕ್ಖೇರಿಯಲ್ಲಿ ನಡೆದ ಈ ಚುನಾವಣೆ ಸೋಲು ಅನ್ನಬಹುದು ಅಷ್ಟೇ, ಬಿಟ್ಟರೆ ಇದು ಬೆಳಗಾವಿ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿಲ್ಲ. ನಾವು ನಮ್ಮ ಕಾರ್ಯಕರ್ತರ ರಕ್ಷಣೆಗೋಸ್ಕರ ಪ್ರಚಾರ ಮಾಡಿದ್ದೇವೆ ಅಷ್ಟೇ, ನಮಗೆ ಒಂದಿಷ್ಟು ಜನ ಕೈ ಜೋಡಿಸಬೇಕಾಗಿತ್ತು. ಜೋಡಿಸದ ಕಾರಣ ಚುನಾವಣೆ ಸೋಲಾಗಿದೆ. ಒಟ್ಟಾರೆ ನಮ್ಮ ಮತಗಳನ್ನು ನಾವು ಹಾಕಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅಲ್ಲದೇ ಈ ಚುನಾವಣೆ ಹುಕ್ಕೇರಿಗಷ್ಟೇ ಸೀಮಿತವೆಂದರು.
ಕತ್ತಿಗೆ ಮಾತಿನಲ್ಲಿ ಗುಮ್ಮಿದ ಸಾಹುಕಾರ್: ಚುನಾವಣೆ ಪ್ರಚಾರದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ತಮ್ಮ ತಮ್ಮ ಘನತೆಗೆ ತಕ್ಕ ಹಾಗೇ ಮಾತನಾಡಬೇಕು. ರಮೇಶ ಕತ್ತಿ ಅವರು ಸಹ 1 ಬಾರಿ ಸಂಸದ ಆಗಿದ್ಧಾರೆ. ಜನರ ಮುಂದೆ ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು ಎಂದ ಅವರು, ಯಮಕನಮರಡಿ ಹುಕ್ಕೇರಿಯ ಒಂದು ಭಾಗವಾಗಿದ್ದರಿಂದ ನಾವು ಯಾವಾಗಲೂ ಈ ಭಾಗದಲ್ಲಿ ಗಮನ ಹರಿಸಬೇಕಾಗುತ್ತದೆ ಎಂದರು.
ಈ ವೇಳೆ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್ ಸೇರಿದಂತೆ ಇತರರು ಇದ್ದರು.