*ಸಂಪುಟ ಪುನರ ರಚನೆ ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಮೊದಲಿನಿಂದಲೂ ಸಂಪುಟ ಪುನರ ರಚನೆ ಆಗಬೇಕೆಂಬುವುದು ಚರ್ಚೆಯಲ್ಲಿದೆ. ಆದರೆ ಸಂಪುಟ ಪುನರ ರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗುವ ಅರ್ಹತೆ ಬಹಳಷ್ಟು ಜನರಿಗಿದೆ. ಆದರೆ ಕೇಲವ 34 ಜನಕ್ಕಷ್ಟೇ ಮಂತ್ರಿಯಾಗಲು ಅವಕಾಶ ವಿದೆ. ಇನ್ನು ಯಾರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ನಿರ್ಧಾರ ಹೈಕಮಾಂಡ್ ಮಾಡುತ್ತದೆ. ಈ ಕುರಿತು ನನ್ನನ್ನು ಕೇಳಿದರೆ ನಾನೇನು ಹೇಳಲು ಸಾಧ್ಯವಿಲ್ಲ, ಅಧಿಕಾರವೂ ಇಲ್ಲವೆಂದರು.
30 ತಿಂಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕು ಅಂತಾ ಚರ್ಚೆಯಲ್ಲಿತ್ತು. ಈ ಚರ್ಚೆ ಈಗ ಅಂತಿಮ ಹಂತಕ್ಕೆ ಬಂದಿದೆ. ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದ್ದರೂ ಆಗಿರಬಹುದು. ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಬಹಿರಂಗವಾಗಿ ಸಚಿವ ಸಂಪುಟ ಪುನಾರಚನೆ ಕುರಿತು ಹೇಳಿದ್ದಾರೆ ಎಂದ ಅವರು, ಇನ್ನು ಸಚಿವ ಕೃಷ್ಣಭೈರೇಗೌಡ ಸಚಿವ ಸ್ಥಾನ ತ್ಯಾಗದ ಬಗ್ಗೆ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ಹೇಳಿದರೆ ನಾವು ಕೂಡ ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಎಂಎಲ್ ಸಿ ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಯತಿಂದ್ರ ಅವರು ಸಿಎಂ ಸಿದ್ದರಾಮಯ್ಯ ನಂತರ ನಾನು ಅಹಿಂದ ಸಂಘಟನೆಯನ್ನು ಮುನ್ನಡೆಸುತ್ತೇನೆಂದು ಹೇಳಿದ್ದಾರೆ ಅಷ್ಟೇ, ಅದು ನಿಜವೂ ಇದೆ. ಆದರೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಧ್ಯಮದವರಿಗೆ ತಿಳಿಸಿದರು
 
					 
				 
					 
					 
					 
					
 
					 
					 
					


