*ಸವದತ್ತಿ ಯಲ್ಲಮ್ಮನಿಗೆ ಬಂದ ಕಾಣಿಕೆ ಎಷ್ಟು ಗೊತ್ತೆ?*

ಪ್ರಗತಿವಾಹಿನಿ ಸುದ್ದಿ, ಉಗರಗೋಳ. ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಎರಡು ದಿನ ನಡೆದ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು, ₹1.04 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಇದರಲ್ಲಿ ₹5.22 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣ, ₹1.27 ಲಕ್ಷ ಮೌಲ್ಯದ 1,276 ಗ್ರಾಂ ಬೆಳ್ಳಿ ಆಭರಣ, ₹98.23 ಲಕ್ಷ ನಗದು ಸೇರಿದೆ ಎಂದು ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದರು.
ಸಪ್ತಗುಡ್ಡ, ಸಪ್ತ ಕೊಳ್ಳಗಳ ನಡುವೆ ನೆಲೆ ನಿಂತ ಯಲ್ಲಮ್ಮನ ಸನ್ನಿಧಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ದೇವಸ್ಥಾನದ ಹುಂಡಿಯಲ್ಲಿ ನಗದು ಮಾತ್ರವಲ್ಲದೆ, ಚಿನ್ನಾಭರಣ, ಬೆಳ್ಳಿ ಆಭರಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ. ಹೀಗೆ ಭಕ್ತರು ಹುಂಡಿಯಲ್ಲಿ ಹಾಕಿದ ಕಾಣಿಕೆಗಳ ಎಣಿಕೆ ಮಾಡಲಾಯಿತು.
ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿಗಳು, ದೇವಸ್ಥಾನ ಅಧಿಕಾರಿಗಳು, ಬೆಳಗಾವಿ ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ ಕಚೇರಿ, ಸವದತ್ತಿಯ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಸವದತ್ತಿ ಪೊಲೀಸರ ಸಮ್ಮುಖದಲ್ಲಿ ಹುಂಡಿಗಳನ್ನು ಒಡೆಯಲಾಯಿತು.
ಧಾರ್ಮಿಕ ದತ್ತಿ ಇಲಾಖೆಯ ಬೆಳಗಾವಿ ಅಧಿಕಾರಿ ಬಾಳೇಶ ಅಬ್ಬಾಯಿ, ಎಂ.ಪಿ.ಧ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್.ಸವದತ್ತಿ, ಎನ್.ಎಂ.ಮುದಿಗೌಡರ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾನಾಕ್ಷಿ, ಮಹಾಂತೇಶ ಕೋಡಳ್ಳಿ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಅನಿಲ ತೇರದಾಳ, ಜಗದೀಶ ರೇವಣ್ಣವರ, ಎಎಸ್ಐ ಬಿ.ಆರ್.ಸಣ್ಣಮಾಳಗೆ, ಆನಂದ ಗೊರವನಕೊಳ್ಳ, ಡಿ.ಡಿ.ನಾಗನಗೌಡರ್ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.