*ಮನೆಯ ಯಜನಮಾನನ ಮುಂದೆ ಅಳಲು ತೋಡಿಕೊಳ್ಳುವುದು ತಪ್ಪಾ? ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರಶ್ನೆ*

ಇದುವೇ ಗುಡ್ ಅಂಡ್ ವೈಬ್ರೆಂಡ್ ಡೆಮಾಕ್ರಸಿ
ಪ್ರಗತಿವಾಹಿನಿ ಸುದ್ದಿ: ನಮ್ಮದು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪ್ರಜಾಸತ್ತಾತ್ಮಕ ಆಡಳಿತ. ಇಲ್ಲಿ ಯಾರೇ ಆಗಲಿ ದನಿ ಎತ್ತಬಹುದು, ಬೇಡಿಕೆ ಮಂಡಿಸಬಹುದು. ಇದು ನರೇಂದ್ರ ಮೋದಿ ರೀತಿಯ ಸರ್ವಾಧಿಕಾರ ಆಡಳಿತ ಅಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ಶಾಸಕರು ಈಗ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರನ್ನು ಕೆಲವು ವಿಷಯದ ಬಗ್ಗೆ ಪ್ರಶ್ನಿಸಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ಬೇಕೆಂದು ಬೇಡಿಕೆ ಮಂಡಿಸಿದ್ದಾರೆ. ಇದರಲ್ಲಿ ತಪ್ಪೇನು? ಎಂದು ತಿಳಿಸಿದ್ದಾರೆ.
ಮನೆಯ ಯಜನಮಾನನ ಮುಂದೆ ಅಳಲು ತೋಡಿಕೊಳ್ಳುವುದು ತಪ್ಪಾ? ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ. ಇದುವೇ ಗುಡ್ ಅಂಡ್ ವೈಬ್ರೆಂಡ್ ಡೆಮಾಕ್ರಸಿ. ಇದು ಅಸಮಾಧಾನ ಅಥವಾ ಆಕ್ರೋಶ ಅಲ್ಲ, ತಮ್ಮ ಬೇಡಿಕೆ ಮಂಡಿಸಿದ್ದು. ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಅಹವಾಲು ಪ್ರಸ್ತುತಪಡಿಸಬಹುದು ಎಂದರು.
ನಮ್ಮ ಸರ್ಕಾರದಲ್ಲಿ ಹಣದ ಕೊರೆತೆ ಇಲ್ಲ. ಬಿಜೆಪಿಯವರು ಸುಮ್ಮನೇ ಬೊಬ್ಬೆ ಹೊಡೆಯುತ್ತಿದ್ದಾರೆ. ಹಣ ಇಲ್ಲಾ ಅಂದ್ರೆ ಇಷ್ಟೊಂದು ಅಭಿವೃದ್ಧಿ ಮಾಡೋಕೆ ಆಗುತ್ತಾ. ನಮ್ಮ ಭಾಗದ ಕಡೆ ಬನ್ನಿ ಅಭಿವೃದ್ಧಿ ಹಣ ಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕರಾದವರಿಗೆ ಹೆಚ್ಚು ಕೆಲಸ ಮಾಡಬೇಕು ಅನಿಸುತ್ತೆ. ಮೊದಲ ಬಾರಿ ಶಾಸಕರಾದವರಿಗೆ ಇನ್ನೂ ಕೆಲಸ ಮಾಡಬೇಕು ಎಂಬ ಹಂಬಲ ಇರುತ್ತದೆ. ನಾನು ಮೊದಲ ಬಾರಿ ಶಾಸಕನಾದಗಲೂ ಇದೇ ಅನಿಸುತ್ತಿತ್ತು. ಶಾಸಕರ ಬೇಡಿಕೆ ಬಗ್ಗೆ ನಮ್ಮ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಗಮನಹರಿಸುತ್ತಾರೆ ಎಂದು ಡಾ. ಪಾಟೀಲ್ ಸ್ಪಷ್ಟಪಡಿಸಿದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಾಂಕಿ ಅಲ್ಲ:
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಸದ್ಯಕ್ಕೆ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹಾಗೊಂದು ವೇಳೆ ಆಯ್ಕೆ ಮಾಡಬೇಕಾದರೆ ಪಕ್ಷದ ಅಧ್ಯಕ್ಷರು ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ.ಪಕ್ಷ ಕೊಡುವ ಜವಾಬ್ದಾರಿ ನಾನು ನಿಭಾಯಿಸುವೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿಲ್ಲ ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.