
ಪ್ರಗತಿವಾಹಿನಿ ಸುದ್ದಿ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನವಜೋಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಓಮ್ನಿ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಹಸೆಮಣೆಯೇರಬಿದ್ದ ನವಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರೇಖಾ (20) ಹಾಗೂ ಬಸನಗೌಡ ದ್ಯಾಮಗೌಡ್ರ (25) ಮೃತ ದುರ್ದೈವಿಗಳು. ಕಳೆದ ತಿಂಗಳು ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಭಾರಿ ಮಳೆಯಿಂದಾಗಿ ಮದುವೆ ಮುಂದೂಡಲಾಗಿತ್ತು. ಎರಡೂ ಕುಟುಬಗಳು ಡಿಸೆಂಬರ್ ನಲ್ಲಿ ಮದುವೆ ನಿಗದಿ ಮಾಡಿದ್ದರು. ಆದರೆ ಅಪಘಾತದಲ್ಲಿ ಜೋಡಿ ಸಾವನ್ನಪ್ಪಿದೆ.
ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.