Latest

ಸಿಗಂದೂರು ದೇವಾಲಯದಲ್ಲಿ ಗುಂಪು ಘರ್ಷಣೆ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಿಗಂದೂರು ದೇವಾಲಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರ ಬೆಂಗಲಿಗರಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಶೀತಲ ಸಮರ ಘರ್ಷಣೆಗೆ ತಿರುಗಿದೆ. ಈ ವೇಳೆ ದೇವಾಲಯದ ಆಡಳಿತ ಕಚೇರಿಯ ಪೀಠೋಪಕರಣಗಳು ಧ್ವಂಸಗೊಂಡಿವೆ.

ನವರಾತ್ರಿಗೂ ಮುನ್ನ ದೇವಾಲಯದಲ್ಲಿ ನಡೆಯಬೇಕಿದ್ದ ಚಂಡಿಕಾ ಹೋಮಕ್ಕೆ ರಾಮಪ್ಪ ಅವರು ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಕುಟುಂಬ ಸಮೇತ ದೇವಾಲಯದ ಗರ್ಭಗುಡಿ ಮುಂದೆ ಮೌನ ಪ್ರತಿಭಟನೆ ಆರಂಭಿಸಿದ್ದರು. ಈ ವೇಳೆ ಶೇಷಗಿರಿ ಭಟ್ ಅನಗತ್ಯ ಗೊಂದಲವುಂಟುಮಾಡುತ್ತಿದ್ದಾರೆ ಎಂದು ರಾಮಪ್ಪ ಬೆಂಬಲಿಗರು ಅರ್ಚಕರಿಗೆ ಮೌನವೃತ ಬಿಟ್ಟು ಹೊರಬರುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಪ್ರಧಾನ ಅರ್ಚಕರ ಬೆಂಬಲಿಗರು, ರಾಮಪ್ಪ ಬೆಂಬಲಿಗರು ಹಾಗೂ ಭಕ್ತರ ನಡುವೆ ಸಂಘರ್ಷ ನಡೆದಿದೆ. ನೂಕಾಟ ತಳ್ಳಾಟ ನಡೆದು ಗಲಾಟೆ ನಡೆದಿದೆ.

ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಸಮಾಧಾನ ಪಡಿಸಿದ್ದಾರೆ. ಸಧ್ಯ ದೇವಾಲಯದ ಸುತ್ತಲೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

Home add -Advt

Related Articles

Back to top button