
ಪ್ರಗತಿವಾಹಿನಿ ಸುದ್ದಿ: ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ರಜತ ಮಹೋತ್ಸವದ ಸಂಭ್ರಮದ ಆಚರಣೆ ಹಿನ್ನೆಲೆಯಲ್ಲಿ ಏಪ್ರಿಲ್ 11 ರಿಂದ 16ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಅದರ ಅಂಗವಾಗಿ ಶ್ರೀ ಚಕ್ರಪ್ರತಿಷ್ಠಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
“ಗಾಯಂತಮ್ ತ್ರಾಯತೆ ಯಸ್ಮಾತ್ ಇತಿ ಗಾಯತ್ರಿ” ಎಂಬಂತೆ ಸರ್ವರ ಧೀ ಶಕ್ತಿಯನ್ನು ಪ್ರಚೋದಿಸಿ, ಉಚ್ಚಾರ ಮಾತ್ರದಿಂದ ಸಂಕಷ್ಟವನ್ನು ಹರಣ ಮಾಡುವ ಶಕ್ತಿಯೇ ಗಾಯತ್ರಿ. ಇಂತಹ ಗಾಯತ್ರಿ ಮಾತೆಯನ್ನು ಆರಾಧಿಸುವ ಕೆಲವೇ ಸ್ಥಳಗಳಲ್ಲಿ ಗಾಯತ್ರಿ ತಪೋಭೂಮಿಯೂ ಒಂದು.
ದತ್ತಾತ್ರೇಯ ಸ್ವರೂಪರೂ, ಪರಮ ಪೂಜ್ಯರೂ ಆದ ಶ್ರೀ ಕೃಷ್ಣೇಂದ್ರ ಗುರುಗಳ ಪ್ರತಿರೂಪವಾದ ವಲ್ಲಭ ಚೈತನ್ಯರು (ಬಾಲಕೃಷ್ಣಾನಂದ ಸರಸ್ವತಿ) ತಪ:ಶಕ್ತಿಯಿಂದ ಹಾಗೂ ಪರಿಶ್ರಮದಿಂದ ಮಾಘ,ಶುದ್ಧ,ತ್ರಯೋದಶಿ 2000ನೇ ಇಸವಿಯಲ್ಲಿ ಮಾತಾ ಗಾಯತ್ರೀ, ಶ್ರೀ ಗಣಪತಿ,ಶ್ರೀ ಸ್ಕಂದ ಹಾಗೂ ಅನ್ನಪೂರ್ಣೇಶ್ವರಿಯನ್ನು ಗಾಯತ್ರೀ ತಪೋಭೂಮಿಯಲ್ಲಿ ಪ್ರತಿಷ್ಠಾಪಿಸಿ ಸರ್ವರನ್ನು ಆಧ್ಯಾತ್ಮಿಕದತ್ತ ಒಯ್ದರು.

ಪ್ರತಿನಿತ್ಯ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತಲ್ಲದೆ,2018ರಲ್ಲಿ 24ನೇ ಕೋಟಿ ಗಾಯತ್ರೀ ಮಹಾಯಜ್ಞವು ಅಭೂತಪೂರ್ವವಾಗಿ ಸಂಪನ್ನಗೊಂಡಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಪ್ರತಿನಿತ್ಯ ಅನ್ನದಾನ ಸೇವೆ, ಭಕ್ತರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ,ಪ್ರಾಥಮಿಕ ಶಾಲೆ ಹಾಗೂ ಗೋ ಶಾಲೆ ಸ್ಥಾಪಿಸಿ ಈ ಸ್ಥಳವು ಪುಣ್ಯಕ್ಷೇತ್ರವಾಗಿದೆ. ಪ್ರಸ್ತುತ ಶ್ರೀ ಗಾಯತ್ರೀ ಮೂರ್ತಿಯ ಪ್ರತಿಷ್ಠಾಪನೆಯ ರಜತ ಮಹೋತ್ಸವದ ಸುಸಂದರ್ಭದಲ್ಲಿ ಶ್ರೀ ಚಕ್ರಪ್ರತಿಷ್ಠಾಪನೆ, ಶ್ರೀ ದಕ್ಷಿಣಾ ಮೂರ್ತಿ, ನವಗ್ರಹಗಳ ಪ್ರತಿಷ್ಠಾಪನೆ, ಧರ್ಮಧ್ವಜ ಪ್ರತಿಷ್ಠಾಪನೆಯನ್ನು ಶ್ರೀ ಶ್ರೀ ಶ್ರೀ ವಿದು ಶೇಖರ ಭಾರತಿ ಮಹಾ ಸಂಸ್ಥಾನ ಶ್ರೀ ಶೃಂಗೇರಿ ಗುರುಗಳ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಲಾಗುತ್ತಿದೆ.
ರಾಜ್ಯದಲ್ಲಿ ಕೆಲವೇ ಸ್ಥಳಗಳಲ್ಲಿ ಅಂದರೆ ಶೃಂಗೇರಿ, ಕೊಲ್ಲೂರು, ಹೊರನಾಡು ಇತ್ಯಾದಿ ವಿಶೇಷ ಸ್ಥಳಗಳಲ್ಲಿ ಮಾತ್ರ ಪ್ರತಿಷ್ಠಾಪಿಸಲಾದ ಶ್ರೀ ಚಕ್ರವನ್ನು ಈ ಪುಣ್ಯಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಹಾಗೆ ಎಲ್ಲರ ಸಂಕಷ್ಟಗಳನ್ನು ನಿವಾರಿಸುವ ಮನೋಕಾಮನೆಯನ್ನು ಪೂರೈಸುವ ನವಗ್ರಹಗಳನ್ನು ಕೂಡ ಇಲ್ಲೇ ಪ್ರತಿಷ್ಠಾಪಿಸಲಾಗುತ್ತಿದೆ. ಶ್ರೀ ಆದಿ ಶಂಕರರು ಭಾರತ ದೇಶದಲ್ಲಿ ಸನಾತನ ಧರ್ಮ ಹಾಗೂ ಧರ್ಮ ಜಾಗೃತೆ ಸಲುವಾಗಿ ನಾಲ್ಕು ಪೀಠಗಳನ್ನು ಪ್ರತಿಷ್ಠಾಪಿಸಿದರು. ಅದರ ಸವಿ ನೆನಪಿಗಾಗಿ ಶ್ರೀ ವೇದಮಾತ ಗಾಯತ್ರೀ ತಪೋಭೂಮಿಯಲ್ಲಿ ಧರ್ಮ ಧ್ವಜ ಸಹಿತ ನಾಲ್ಕು ವೇದಗಳ ಪಂಚಲೋಹಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಶ್ರೀ ಗಾಯತ್ರಿ ತಪೋಮಿಯನ್ನು ಆಗಮ ಶಾಸ್ತ್ರದ ಪ್ರಕಾರ ಪ್ರತಿಷ್ಠಾಪನೆ ಮಾಡಲಾಗಿದೆ.ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ಈ ಗಾಯತ್ರಿ ತಪೋಭೂಮಿಯು ಜನಮಾನಸದಲ್ಲಿ ರಾರಾಜಿಸುತ್ತಿದ್ದು ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದು ಸರ್ವ ಜನರನ್ನು ಪುನೀತರನ್ನಾಗಿಸುವುದರಲ್ಲಿ ಸಂಶಯವಿಲ್ಲ.