Belagavi NewsBelgaum NewsKannada NewsKarnataka News

*ಜಿಲ್ಲೆಯ ಎಲ್ಲಡೆ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿವನ ಪುತ್ರ ವೀರಶೈವರ ಮೂಲ ಪುರುಷ ಶ್ರೀ ವೀರಭದ್ರೇಶ್ವರ ಜಯಂತಿಯೂ ಜಿಲ್ಲೆಯ ಎಲ್ಲಡೆ ಅದ್ಧೂರಿಯಾಗಿ ಜರುಗಿತು. 

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗೆ ವಿಶೇಷವಾದ ಪೂಜೆ ಸಲ್ಲಿಸಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಶ್ರೀ ವೀರಭದ್ರ ಮಹಾಸ್ವಾಮಿಯೂ ಬಾತ್ರುಪದ ಮೊದಲ ಮಂಗಳವಾರ ಅವತರಿಸಿ ವೀರಶೈವರ ಮೂಲ ಪುರುಷನಾಗಿ ವೀರಶೈವ ತತ್ವಗಳನ್ನು ಬಿತ್ತರಿಸಿದ ಮಹಾಪುರುಷ ಶ್ರೀ ವೀರಭದ್ರ ದೇವರು ಎಂದರು.

ವೀರಶೈವರ 100ಕ್ಕೆ 90ರಷ್ಟು ಮನೆ ದೇವರಾಗಿದ್ದಾನೆ ವೀರಭದ್ರೇಶ್ವರ ದೇವರು. ವೀರಭದ್ರೇಶ್ವರ ಕ್ಷೇತ್ರಗಳು ಬಹಳಷ್ಟು ಪ್ರಖ್ಯಾತಿಯಾಗಿವೆ. ನಮ್ಮ ಜಿಲ್ಲೆಯಲ್ಲಿ ಯಡಿಯೂರು, ಗೊಡಚಿ ಕ್ಷೇತ್ರವು ಲಕ್ಷಾಂತರ ಜನರಿಗೆ ಈ ಕ್ಷೇತ್ರ ಆಶೀರ್ವದಿಸುತ್ತ ಬಂದಿವೆ ಎಂದರು.

ನಗರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ವೀರಭದ್ರೇಶ್ವರ ದೇವರಿಗೆ ರಾಮತೀರ್ಥ ನಗರದಲ್ಲಿರುವ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಮಾಡಲಾಯಿತು.

ಹುಕ್ಕೇರಿ ಹಿರೇಮಠದಲ್ಲಿ ಹುಕ್ಕೇರಿಯ ರಾಚುಟಿಯ ವೀರಭದ್ರೇಶ್ವರ ದೇವಸ್ಥಾನ, ಬಿ.ಕೆ. ಶಿರಹಟ್ಟಿಯ ವೀರಭದ್ರೇಶ್ವರ ದೇವಸ್ಥಾನ, ಯಡಿಯೂರ, ಗೊಡಚಿ , ಎಂ.ಚಂದರಗಿ ಹಿರೇಮಠದ ವೀರಭದ್ರನ ಮೂರ್ತಿಗೆ, ಹಟ್ಟಿಹೊಳಿ ವೀರಭದ್ರೇಶ್ವರ ಮೂರ್ತಿಗೆ ಹೀಗೆ ನಾನಾ ಕಡೆ ಜಿಲ್ಲೆಯಲ್ಲಿ ವೀರಭದ್ರೇಶ್ವರ ಜಯಂತಿ ಉತ್ಸವ ಪೂಜೆ, ಪಾರಾಯಣದೊಂದಿಗೆ ವಿಶೇಷವಾಗಿ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರೇಶ್ವರ ಜಯಂತಿ ಉತ್ಸವದ ರಾಷ್ಟ್ರೀಯ ಅಧ್ಯಕ್ಷ ಬಾಗೋಜಿಕೊಪ್ಪದ ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಅವರು, ವೀರಭದ್ರೇಶ್ವರ ಜಯಂತಿ ಉತ್ಸವ ಇಡೀ ದೇಶವಷ್ಟೇ ಅಲ್ಲ ಹೊರ ದೇಶದಲ್ಲಿಯೂ ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.

ಹುಕ್ಕೇರಿ ಶ್ರೀಗಳಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ ಆಸ್ಟ್ರೇಲಿಯಾ ಸಿಡ್ನಿ ವಾಸಿಗಳಾದ ವೀರಶೈವ ಸಮಾಜದ ವಿಜಯಕುಮಾರ್ ಹಲಗಲಿ ಅವರು ಮಾತನಾಡಿ, ನಾವು ಆಸ್ಟ್ರೇಲಿಯಾದ ಸಿಡ್ನಿಯಲ್ಲಿಯೂ ಕೂಡ ಶ್ರೀಗಳ ಆದೇಶದಂತೆ ಶಿವಗಂಗಾ ಕ್ಷೇತ್ರದ ಡಾ. ಮಲಯಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿದ್ಯದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಿ ಸಂತೃಪ್ತಿ ಪಟ್ಟಿದ್ದೇವೆ ಎಂದರು.

ಯಡಿಯೂರು ಕ್ಷೇತ್ರದ ಪಾಠ ಶಾಲೆಯ ಮಖ್ಯಸ್ಥರಾದ ಶ್ರೀಶೈಲ ಗುರುಜಿ ಮಾತನಾಡಿ, ವೀರಭದ್ರೇಶ್ವರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಮಾಡುವಂತೆ ಹುಕ್ಕೇರಿ, ಬಾಗೋಜಿಕೊಪ್ಪದ ಶ್ರೀಗಳು ಶ್ರೀ ಕ್ಷೇತ್ರದವರೆಗೂ ಬಂದು ಪ್ರಚಾರ ಮಾಡಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ ಎಂದರು‌.

ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ವಿಶೇಷವಾಗಿ ವೀರಭದ್ರೇಶ್ವರ ಜಯಂತಿ ಉತ್ಸವ ಆಚರಿಸುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.

ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ಸಂಪತಕುಮಾರ ಶಾಸ್ತ್ರೀಗಳು ವಿಶೇಷವಾಗಿ ಪೂಜಾ ಕೈಂಕರ್ಯವನ್ನು  ನೆರವೇರಿಸಿದರು.

ಪುರವಂತರಾದ ಮಲ್ಲಯ್ಯ ಮಠಪತಿ, ದಾನಯ್ಯ ಸ್ವಾಮೀಜಿ, ಸಿಂದನೂರಿನ ಪಂಪಯ್ಯನವರು ರಚಿಸಿದ ವಚನಗಳಲ್ಲಿ ಒಡಪುಗಳು, ಈ ಒಡಪುಗಳಿಗೆ ವಿಶೇಷವಾದ ಧ್ವನಿಯನ್ನಿತ್ತು ವೀರಭದ್ರೇಶ್ವರ ಜಯಂತಿಗೆ ಮೆರಗನ್ನು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button