Karnataka NewsLatest

*ಧರ್ಮ ಕಾರ್ಯಗಳ ಮೂಲಕ ಶೃಂಗೇರಿ ಮಠ ಮುಂಚೂಣಿಯಲ್ಲಿದೆ: ಡಿಸಿಎಂ ಡಿ. ಕೆ. ಶಿವಕುಮಾರ್*

ಶೃಂಗೇರಿ ಜಗದ್ಗುರುಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷ: ಅರಮನೆ ಮೈದಾನದಲ್ಲಿ “ನಮಃ ಶಿವಾಯ” ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ: “ಕರ್ನಾಟಕದಾದ್ಯಂತ ಧರ್ಮ ಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮಠಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಶ್ಲಾಘಿಸಿದ್ದಾರೆ.

ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ತುಂಬಿರುವ ನಿಮಿತ್ತ ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ “ನಮಃ ಶಿವಾಯ” ಕಾರ್ಯಕ್ರಮದಲ್ಲಿ ಡಿಸಿಎಂ ಅವರು ಮಾತನಾಡಿದರು.

“ನಮಃ ಶಿವಾಯ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿದ್ದೇವೆ. ಶೃಂಗೇರಿಯ ಭಾರತೀ ತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕರಿಸಿ 50 ವರ್ಷಗಳ ಕಾಲ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ. ನಮ್ಮ ಪ್ರಯತ್ನಗಳು ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಶ್ರೀಗಳು ಐವತ್ತು ವರ್ಷಗಳ ಕಾಲ ನಮ್ಮೆಲ್ಲರ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ” ಎಂದು ಹೇಳಿದರು.

ನನಗೂ ಶೃಂಗೇರಿ ಮಠಕ್ಕೂ ಇರುವ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಭಕ್ತಿಯಿದ್ದರೆ ಶಿಲೆಯಲ್ಲೂ ಭಗವಂತನನ್ನು ಕಾಣಬಹುದು” ಎಂದರು.

“ಶ್ರೀ ಶಂಕರಾಚಾರ್ಯರು ಶಾರದಾ ಪೀಠವನ್ನು ಸ್ಥಾಪಿಸುವ ಮೂಲಕ ಇಡೀ ದೇಶದಲ್ಲಿಯೇ ಹಿಂದೂ ಧರ್ಮದ ಏಳಿಗೆಗೆ ಕಾರಣಿಭೂತರಾದವರು. ಈ ಸುದಿನದಂದು ಶಿವನ ಧ್ಯಾನ, ಪ್ರಾರ್ಥನೆಯ ಮೂಲಕ ಸಮಸ್ತ ಜನರಿಗೆ ಒಳ್ಳೆಯದನ್ನು ಮಾಡುವಂತೆ ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡೋಣ” ಎಂದರು.

“ಶ್ರೀ ವಿಧುಶೇಖರ ಸ್ವಾಮೀಜಿಗಳು ಉತ್ತಮವಾಗಿ ಹಿರಿಯ ಸ್ವಾಮೀಜಿಗಳ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇವರ ಆಶೀರ್ವಾದ ಸಮಸ್ತ ಜನರ ಮೇಲೆ ಹಾಗೂ ಸರ್ಕಾರದ ಮೇಲಿರಲಿ. ಕಳೆದ ವರ್ಷ ತಮ್ಮ ವಿದ್ವತ್ಪೂರ್ಣ ಮಾತುಗಳಿಂದ ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸಿದ್ದರು” ಎಂದರು.

“ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿರುವುದೇ ಪುಣ್ಯದ ಕಾರ್ಯ” ಎಂದರು.

“ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು” ಎಂದು ಹೇಳಿದರು.

“ನಿಂಬೆಗಿಂ ಹುಳಿಯಿಲ್ಲ, ದುಂಬಿಗಿಂ ಕರಿಯಿಲ್ಲ, ನಂಬಿಗೆಗಿಂತ ಅಧಿಕ ಗುಣವಿಲ್ಲ, ಶಂಭುವಿಗಿಂತ ಅಧಿಕ ದೇವರಿಲ್ಲ” ಎಂಬ ಸರ್ವಜ್ಞನ ಮಾತಿನಂತೆ ಶಿವನೇ ಶ್ರೇಷ್ಠ. ಎಲ್ಲರಿಗೂ ಶಿವ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತೇನೆ. ಶ್ರೀಗಳ ಮೇಲೆ ನಂಬಿಕೆ ಇರುವ ಕಾರಣಕ್ಕೆ ಭಕ್ತಿಯಿಂದ ಭಕ್ತ ಸಾಗರ ಸೇರಿದೆ” ಎಂದರು.

ಡಿ ಕೆ ಶಿವಕುಮಾರ್ ಅವರಿಂದ ರಾಜ್ಯಕ್ಕೆ ಇನ್ನಷ್ಟು ಉತ್ತಮ ಕೆಲಸಗಳಾಗಲಿ

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಹಳ ಹಿಂದಿನಿಂದಲೂ ಶಾರದಾ ಮಠಕ್ಕೆ ಭಕ್ತಿಪೂರ್ವಕವಾಗಿ ನಡೆದುಕೊಂಡು ಬಂದಿದ್ದಾರೆ. ಅವರಿಂದ ರಾಜ್ಯಕ್ಕೆ ಇನ್ನಷ್ಟು ಉತ್ತಮ ಕೆಲಸಗಳು ಆಗಲಿ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button