*ಬಂಡೆ ರೀತಿ ನಮ್ಮ ಸರ್ಕಾರ 5 ವರ್ಷ ಭದ್ರವಾಗಿರುತ್ತೆ: ಡಿಕೆಶಿ ಕೈ ಮೇಲಕೆತ್ತಿ ಒಗ್ಗಟ್ಟು ಪ್ರದರ್ಶಿಸಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರು ತಂದು ಹಾಕಿದರೂ ನಾವು ಯಾರ ಮಾತನ್ನು ಕೇಳಲ್ಲ ನಾವು ಚನ್ನಾಗಿಯೇ ಇದ್ದೇವೆ ಎಂದು ಹೇಳುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೈ ಮೇಲಕೆತ್ತಿ ಒಗ್ಗಟ್ಟು ಪ್ರದರ್ಶಿಸಿದ ಘಟನೆ ನಡೆದಿದೆ.
ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಾರಿ ಹೊಸ ಮುಖ್ಯಮಂತ್ರಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಖಚಿತ ಎಂದಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸುಳ್ಲು ಹೇಳುವುದರಲ್ಲಿ ನಿಸ್ಸೀಮರು. ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ನಾನೇ ದಸರಾವನ್ನೂ ಉದ್ಘಾಟನೆ ಮಾಡುತ್ತೇನೆ ಅಂತಾ ನಿಮಗೆ ಅನ್ನಿಸುತ್ತಿಲ್ವಾ? ಅದೇ ಸತ್ಯ. ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಶ್ರೀರಾಮುಲು ಹೇಳಿಕೆಗೂ ತಿರುಗೇಟು ನೀಡಿದ ಸಿಎಂ, ನಮ್ಮ ಬಗ್ಗೆ ಮಾತನಾಡಲು ಶ್ರೀರಾಮುಲು ಎಷ್ಟು ಸಲ ಸೋತಿಲ್ಲ? ಹಿಂದೆ ಅವರಿಗೆ ಅವರ ಭವಿಷ್ಯದ ಬಗ್ಗೆ ಗೊತ್ತಿರಲಿಲ್ಲವೇ? ನಮ್ಮ ಸರ್ಕಾರ ಭದ್ರವಾಗಿಯೇ ಇದೆ ಎಂದರು.
ನಾನು, ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಚನ್ನಾಗಿಯೇ ಇದ್ದೇವೆ. ಮುಂದೆಯೂ ಚೆನ್ನಾಗಿಯೇ ಇರುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ ಎಂದು ಹೇಳುತ್ತಾ ಡಿ.ಕೆ.ಶಿವಕುಮಾರ್ ಅವರ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ದಿ.ಕೆ.ಶಿವಕುಮಾರ್ ಮುಗುಳ್ನಗುತ್ತಾ ಹೌದೆಂಬಂತೆ ತಲೆಯಾಡಿಸಿದರು. ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಭದ್ರವಾಗಿ ಇರುತ್ತದೆ. ನಾನು, ಡಿ.ಕೆ.ಶಿವಕುಮಾರ್ ಒಗ್ಗಟ್ಟಗಿಯೇ ಇದ್ದೇವೆ. ಯಾರು ತಂದು ಹಾಕಲು ಯತ್ನಿಸಿದರೂ ನಾವು ಯಾರ ಮಾತು ಕೇಳಲ್ಲ ಎಂದು ಹೇಳಿದರು.