
ಸಿದ್ದೇಶ್ವರ ಶ್ರೀಗಳ ಅಂತಿಮ ವಿಧಿ ವಿಧಾನದ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ ಮಾಡಿ –
ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯ ಕಂಡ ಶತಮಾನದ ಅಪರೂಪದ ಸಂತ, ಯಾರ ಹಂಗಿಗೂ ಒಳಗಾಗದ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ, ಪ್ರವಚನಗಳ ಮೂಲಕವೇ ಜನರಲ್ಲಿ ಜ್ಞಾನದ ಜ್ಯೋತಿ ಬೆಳಗಿದ್ದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತರಾಗಿದ್ದು, ಅಗಲಿದ ಜ್ಞಾನಯೋಗಿಗೆ ಲಕ್ಷಾಂತರ ಭಕ್ತರು ಭಾವಪೂರ್ಣ ವಿದಾಯ ಹೇಳಿದ್ದಾರೆ.
ಸೋಮವಾರ ಸಂಜೆ 6 ಗಂಟೆಗೆ ಅಸ್ತಂಗತರಾಗಿರುವ ಸಿದ್ದೇಶ್ವರ ಸ್ವಾಮೀಜಿ(82) ಅವರ ಅಂತ್ಯಕ್ರಿಯೆ ಇಂದು ಸಂಜೆ ವಿಜಯಪುರದ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿದ್ದು, ರಾಜ್ಯ ಹೊರ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಬಂದ ಭಕ್ತರು ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಮಹಾ ಸಂತನಿಗೆ ಕಣ್ಣೀರ ವಿದಾಯ ಹೇಳಿದರು.
ಇದಕ್ಕೂ ಮುನ್ನ ನಿನ್ನೆ ರಾತ್ರಿ 11 ಗಂಟೆಯಿಂದ ಇಂದು ಮುಂಜಾನೆ 5 ಗಂಟೆಯವರೆಗೂ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿಜಯಪುರದ ಸೈನಿಕ ಶಾಲೆಯ ಮೈದಾನದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮದರ್ಶನಕ್ಕೆ ಇಡಲಾಗಿತ್ತು. ನಿನ್ನೆ ರಾತ್ರಿಯಿಂದ ಇಂದು ರಾತ್ರಿಯವರೆಗೂ ಸುಮಾರು 18 ಗಂಟೆಗಳ ಕಾಲ ನಿರಂತರವಾಗಿ ಭಕ್ತ ಸಾಗರವೇ ವಿಜಯಪುರದತ್ತ ಹರಿದು ಬಂದಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದು, ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಂಜೆ 5 ಗಂಟೆಗೆ ಸೈನಿಕ ಶಾಲಾ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳಿಗೆ ಸರ್ಕಾರದ ವಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್, ರಾಷ್ಟ್ರಗೀತೆ, 3 ಸುತ್ತು ಕುಶಾಲ ತೋಪು ಸಿಡಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಮುರಿಗೇಶ್ ನಿರಾಣಿ, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುತ್ತೂರು ಶ್ರೀಗಳು, ನಿರ್ಮಲಾನಂದ ಸ್ವಾಮೀಜಿ, ಸಿರಿಗೆರೆಶ್ರೀ, ವಿಜಯಪುರ ಜಿಲ್ಲಾಧಿಕಾರಿ, ಎಸ್ ಪಿ ಸೇರಿದಂತೆ ಗಣ್ಯಾತಿಗಣ್ಯರು ಶ್ರೀಗಳ ಶ್ರೀಗಳ ಪಾರ್ಥಿವಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಭಕ್ತರಿಗಾಗಿ ಕೆಲ ಸಮಯ ಶ್ರೀಗಳ ಪಾರ್ಥಿವಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅದಾದ ಬಳಿಕ ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆ ಆರಂಭವಾಯಿತು. ಸೈನಿಕ ಶಾಲೆಯ ಆವರಣದಿಂದ ಶ್ರೀಗಳ ಪಾರ್ಥಿವಶರವನ್ನು ಹೂವಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಜ್ಞಾನಯೋಗಾಶ್ರಮದವರೆಗೂ ಮೆರವಣಿಗೆ ಮಾಡಲಾಯಿತು.
ಸೈನಿಕ ಶಾಲೆ ಆವರಣದಿಂದ ಗಾಂಧಿ ಚೌಕ, ಸಿದ್ದೇಶ್ವರ ದೇಗುಲ, ಬಿಎಲ್ ಡಿಇ ಕಾಲೇಜು ಮೂಲಕ ಸಾಗಿ ಜ್ಞಾನಯೋಗಾಶ್ರಮಕ್ಕೆ ಶ್ರೀಗಳ ಪಾರ್ಥಿವಶರೀರವನ್ನು ತರಲಾಯಿತು. ಸುಮಾರು 7-8 ಕಿ.ಮೀ ವರೆಗೆ ಸಾಗಿದ ಶ್ರೀಗಳ ಅಂತಿಮ ಯಾತ್ರೆ ಮೆರವಣಿಗೆಯುದ್ಧಕ್ಕೂ ಭಕ್ತ ಸಾಗರ ಪಾಲ್ಗೊಂಡಿದ್ದು, ರಸ್ತೆಯ ಇಕ್ಕೆಲೆಗಳಲ್ಲಿ ಲಕ್ಷಾಂತರ ಭಕ್ತರು ನೆರೆದಿದ್ದರು. ವಿಜಯಪುರ ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ಜನಸ್ತೋಮ, ರಸ್ತೆಯ ಇಕ್ಕೆಲೆಗಳಲ್ಲಿ ಭಕ್ತಸಾಗರವೇ ನೆರೆದಿತ್ತು. ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಸಿದ್ದೇಶ್ವರ ಶ್ರೀಗಳಿಗೆ ಹೂವಿನಮಳೆಗರೆದು ಭಾವಪೂರ್ಣ ವಿದಾಯ ಹೇಳಿದರು.
ಮೆರವಣಿಗೆ ಮೂಲಕ ಜ್ಞಾನಯೋಗಾಶ್ರಮಕ್ಕೆ ಶ್ರೀಗಳ ಪಾರ್ಥಿವಶರೀರ ತರಲಾಯಿತು. ಬಳಿಕ ಆಶ್ರಮದ ಅವರಣದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀ ಗದ್ದುಗೆ ಬಳಿ, ಆಯತಾಕಾರದಲ್ಲಿ ನಿರ್ಮಿಸಲಾದ ಚಿತೆ ಕಟ್ಟೆಯ ಮೇಲೆ ಸಿದ್ದೇಶ್ವರ ಶ್ರೀಗಳ ಪಾರ್ಥಿವಶರೀರವನ್ನಿರಸಿ ಶ್ರೀಗಂಧದ ಕಟ್ಟಿಗೆಯಿಂದ ಮುಚ್ಚಲಾಯಿತು. ಅಂತಿಮ ವಿಧಿವಿಧಾನಗಳು ನೆರವೇರಿದ ನಂತರ ಕೊನೆಯದಾಗಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ, ಕೆಪಿಸಿಸಿ ಅಧ್ಯಕ್ಷ ಡಿಕೆ,ಶಿವಕುಮಾರ್, ಎಂಬಿ.ಪಾಟೀಲ್, ಸಚಿವರಾದ ಸಿಸಿ ಪಾಟೀಲ್, ಮುರುಗೇಶ್ ನಿರಾಣಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಶಾಸಕ ಯತ್ನಾಳ್, ಲಕ್ಷ್ಮಣ ಸವದಿ ಸೇರಿದಂತೆ ಗಣ್ಯಾತಿಗಣ್ಯರು, ವಿವಿಧ ಮಠಗಳ ಸ್ವಾಮೀಜಿಗಳು ಚಿತೆಗೆ ಕರ್ಪೀಊರಹಾಕಿ, ತುಪ್ಪಸುರಿದು ಅಂತಿಮ ನಮನ ಸಲ್ಲಿಸಿದರು. ಬಳಿಕ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ಚಿತ್ಗೆ ಅಗ್ನಿಸ್ಪರ್ಶ ಮಾಡಿದರು. ಸಿದ್ದೇಶ್ವರ ಶ್ರೀಗಳ ಇಚ್ಛೆಯಂತೆಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ನಾಡಿನ ಸರ್ವಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನರಾದರು.
ಜ್ಞಾನಯೋಗಾಶ್ರಮದ ಆವರಣದಲ್ಲಿ ನಡೆದ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 1000 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದ ಭಕ್ತರಿಗೆ ಎಲ್ ಇ ಡಿ ಸ್ಕ್ರೀನ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.
ಸಂತನೆಂದರೆ ಹೇಗಿರಬೇಕು ಎಂಬುದಕ್ಕೆ ನಿದರ್ಶನರಾಗಿದ್ದ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ, ಮಾತಿನ ಮೂಲಕವೇ ಸಮಾಜವನ್ನು, ಜನರನ್ನು ತಿದ್ದಿ ತೀಡಿದ ಅಪರೂಪದ ಜ್ಞಾನಯೋಗಿಯಾಗಿದ್ದರು.
*ಸಿದ್ದೇಶ್ವರ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ರಾಜ್ಯ ಸರ್ಕಾರ*
https://pragati.taskdun.com/siddeshwar-swamijiall-government-honourfuneralvijaypur/