
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಪುನಾರಾಯ್ಕೆಯಾಗಿದ್ದಾರೆ.
2025-28ನೇ ಸಾಲಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾದಂತಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕುಗ್ರಾಮ ತಗಡೂರು ಗ್ರಾಮದ ರೈತ ಕುಟುಂಬದ ಶ್ರೀಮತಿ ಕಮಲಮ್ಮ ಮತ್ತು ವೀರೇಗೌಡ ದಂಪತಿಗಳ ಪುತ್ರನಾಗಿ ಜನಿಸಿದ ಟಿ.ವಿ.ಶಿವಾನಂದ (ಆನಂದ) ಅವರು ತೊಂಬತ್ತರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದವರು.
ಬಾಗೂರು-ನವಿಲೆ ಸುರಂಗ ಸಂತ್ರಸ್ತರ ಪರವಾಗಿ ಹೋರಾಟ ಸಂಘಟಿಸಿದ್ದ ಅವರು, ಹಾಸನ ಜಿಲ್ಲಾ ನೀರಾವರಿ ಹೋರಾಟ ಸಮಿತಿಗಳ ಒಕ್ಕೂಟ, ರೈತ ಹಿತ ರಕ್ಷಣಾ ಸಮಿತಿ, ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ಸಮಿತಿ ಸಂಚಾಲಕರಾಗಿ ದುಡಿದವರು. ಹಲವು ಜನಪರ ಚಳವಳಿಯಲ್ಲಿ ಮುಂದಾಳಾಗಿ ಗುರುತಿಸಿಕೊಳ್ಳುತ್ತಲೇ ಪತ್ರಕರ್ತರಾಗಿ ಮಾಗಿದವರು.
2004ರಲ್ಲಿ ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿದ್ದಾಗ ಸುಸಜ್ಜಿತ ಪತ್ರಕರ್ತರ ಭವನವನ್ನು ನಿರ್ಮಾಣ ಮಾಡಿದ್ದು ಅವರ ಕ್ರೀಯಾಶೀಲತೆಗೆ ಸಾಕ್ಷಿ. 2018ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕೆಯುಡಬ್ಲೂೃಜೆಗೆ ಹೆಜ್ಜೆ ಇಟ್ಟ ತಗಡೂರು, ಅಧ್ಯಕ್ಷರೊಬ್ಬರ ರಾಜೀನಾಮೆ ತರುವಾಯ ಆ ಸಂಘಟನೆಯ ಚುಕ್ಕಾಣಿ ಹಿಡಿದವರು.
ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೆರವು ಕೊಡಿಸಿದ ಅವರ ಹೋರಾಟದ ಪರಿಯನ್ನು ಯಾರೂ ಮರೆಯುವಂತಿಲ್ಲ. ಬಹುರೂಪಿ ಪ್ರಕಾಶನ ಪ್ರಕಟಿಸಿರುವ ಕೋವಿಡ್ ಕಥೆಗಳು ಪುಸ್ತಕದಲ್ಲಿ ಪ್ರತಿ ಘಟನೆಗಳನ್ನು ತಗಡೂರು ದಾಖಲಿಸಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಮನೆಯಂಗಳಕ್ಕೆ ಕೆಯುಡಬ್ಲೂೃಜೆ ಎನ್ನುವ ಹೊಸ ಕಲ್ಪನೆಯೊಂದಿಗೆ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿಯೇ ಗೌರವಿಸಿ, ಅವರ ಅನುಭವಗಳನ್ನು ದಾಖಲೀಕರಣ ಮಾಡಿದ್ದ್ದು ವಿಶೇಷ. ಅಷ್ಟೇ ಅಲ್ಲ, ಈ ಬಗ್ಗೆ ಅಮೃತ ಬೀಜ ಎನ್ನುವ ಪುಸ್ತಕವನ್ನು ಹೊರ ತಂದಿದ್ದಾರೆ.
ರಾಜ್ಯ ಪತ್ರಕರ್ತರ ಸಮ್ಮೇಳನಗಳಿಗೆ ಹೊಸ ರೂಪ ನೀಡಿದ್ದಲ್ಲದೆ, ಪತ್ರಕರ್ತರ ಕ್ಷೇಮ ನಿಧಿಯನ್ನು ಒಂದು ಕೋಟಿಗೆ ಹೆಚ್ಚಿಸಿದ್ದು ಸಾಧನೆ. ಹತ್ತು ಹಲವು ಕಾರ್ಯಕ್ರಮದ ಮೂಲಕ ಕೆಯುಡಬ್ಲೂೃಜೆಗೆ ಹೊಸ ಆಯಾಮ ನೀಡಿದ ತಗಡೂರು ಅವರು ಸತತ ಎರಡು ಬಾರಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಮತ್ತು ಅವರ ಸೇವೆಗೆ ಸಂದ ಗೌರವ.
ಇನ್ನೆರಡು ಸ್ಥಾನಕ್ಕೆ ಅವಿರೋಧ:
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಒಟ್ಟು ಒಂಬತ್ತು ಸ್ಥಾನಗಳಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಸಿ.ಲೋಕೇಶ್ ಮತ್ತು ಖಜಾಂಚಿ ಸ್ಥಾನಕ್ಕೆ ವಾಸುದೇವ ಹೊಳ್ಳ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಅಧಿಕೃತ ಘೋಣೆಯಷ್ಟೇ ಬಾಕಿ ಇದೆ.



