Latest

ಜುಲೈ 13ರಿಂದ ಸ್ವರ್ಣವಲ್ಲೀ ಶ್ರೀಗಳವರ 32ನೇ ಚಾತುರ್ಮಾಸ್ಯ ವೃತ ಸಂಕಲ್ಪ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಹಸಿರು ಸ್ವಾಮೀಜಿ‌ ಎಂದೇ ಪ್ರಸಿದ್ದರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾಸ್ವಾಮೀಜಿಗಳು ಆಷಾಢ ಪೂರ್ಣಿಮೆ ಬುಧವಾರ ಜು. 13ರಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಲಿದ್ದಾರೆ. ಅದೇ ದಿನ ಚಾತುರ್ಮಾಸ್ಯದುದ್ದಕ್ಕೂ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಅಂದು ಮುಂಜಾನೆ 10ಘಂಟೆಗೆ ಶ್ರೀಗಳವರು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸುವರು. ಆನಂತರ ಸಮಸ್ತ ಶಿಷ್ಯ-ಭಕ್ತರ ಪರವಾಗಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ದಂಪತಿಗಳು ಶ್ರೀಗಳವರ ಪಾದಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1ಘಂಟೆಗೆ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯಾದ ನಂತರ ಅನ್ನಪ್ರಸಾದ ಭೋಜನ ನೆರವೇರಲಿದೆ.

ಮಧ್ಯಾಹ್ನೋತ್ತರ 3:30ಕ್ಕೆ ಸುಧರ್ಮಾ ಸಭಾಭವನದಲ್ಲಿ ವ್ಯಾಸಪೂರ್ಣಿಮೆ ಹಾಗೂ ಚಾತುರ್ಮಾಸ್ಯ ವ್ರತ ಸಂಕಲ್ಪದ ನಿಮಿತ್ತ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀಗಳು ದಿವ್ಯಸಾನ್ನಿಧ್ಯ ನೀಡಲಿದ್ದಾರೆ. ಗಣ್ಯರನ್ನು ಸಂಮಾನಿಸಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಹಕಾರರತ್ನ ರಾಜ್ಯಪ್ರಶಸ್ತಿ ಪುರಸ್ಕೃತರಾದ ಶಂಭುಲಿಂಗ ಹೆಗಡೆ ನಡಗೋಡು ಹಾಗೂ ಕರ್ನಾಟಕ ರಾಜಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಕೃಷ್ಣ ಪ್ರಸಾದ ಉಡುಪಿ ಅವರನ್ನು ಶ್ರೀಗಳವರು ಸನ್ಮಾನಿಸಲಿದ್ದಾರೆ. ಭಗವತ್ಪಾದ ಪ್ರಕಾಶನದಿಂದ ಪ್ರಕಟಿತವಾದ ಗ್ರಂಥಗಳು ಲೋಕಾರ್ಪಣಗೊಳ್ಳಲಿದೆ.

ಜುಲೈ 13ರಂದು ವ್ಯಾಸಪೂರ್ಣಿಮೆಯಾಗಿದ್ದು ಶ್ರೀಮಠದಲ್ಲಿ ವಿರಾಜಮಾನವಾದ ಶ್ರೀವೇದವ್ಯಾಸರ ಅಧಿಷ್ಠಾನಕ್ಕೆ ಶ್ರೀಗಳವರು ಮಹಾಪೂಜೆಯನ್ನು ನೆರವೇರಿಸುವರು. ಜುಲೈ 9ರಿಂದಲೇ ಈ ನಿಮಿತ್ತವಾಗಿ ಚತುರ್ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ ಮಹಾಭಾರತ ಪಾರಾಯಣ ಆರಂಭವಾಗಿದ್ದು ಅದರ ಮಂಗಲೋತ್ಸವ ಜರುಗಲಿದೆ.
ಚಾತುರ್ಮಾಸ್ಯವು ಜುಲೈ 13ರಿಂದ ಸೆಪ್ಟೆಂಬರ್ 10ವರೆಗೆ ನಡೆಯಲಿದ್ದು ಆ ದಿನಗಳಲ್ಲಿ ಪ್ರತಿದಿನ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ಮಹಾಭಾರತ ಪುರಾಣ ಪ್ರವಚನ ಸಂಯೋಜಿಸಲಾಗಿದೆ. ದಿನವೂ ಶಿಷ್ಯ-ಭಕ್ತರಿಂದ ಶ್ರೀಗಳವರ ಭಿಕ್ಷೆ-ಪಾದಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಗಾಯತ್ರಿಜಪ ಮುಂತಾದ ದಾರ್ಮಿಕ ಅನುಷ್ಠಾನಗಳು ಜರುಗಲಿವೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಶಿಷ್ಯ-ಭಕ್ತರು ಆಗಮಿಸಿ ಪಾಲ್ಗೊಂಡು ಶ್ರೀಗುರುದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ಮಠದ ಪ್ರಕಟಣೆ ತಿಳಿಸಿದೆ.
ಕಾಶಿ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ; 5,000 ಸಹಾಯಧನ; ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button