*ಮೆಕ್ಕೆಜೋಳ ಖರೀದಿಯಲ್ಲಿ ರೈತರ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಬೇಡ್ತಿ–ವರದಾ ನದಿ ತಿರುವು ಆಗಬೇಕು. ಹೀಗಾಗಿಯೇ ಈ ಹಿಂದಿನ ಯೋಜನೆಯ ಸಮಗ್ರ ವರದಿ ಬದಲಿಸಿ ಹೊಸದಾಗಿ ಸಿದ್ಧಪಡಿಸಲಾಗಿದೆ. ಆದರೂ ಜನರಲ್ಲಿ ಆತಂಕವಿರುವ ಕಾರಣ ರಾಜ್ಯ ಸರ್ಕಾರದಲ್ಲಿ ಆ ಬಗ್ಗೆ ಚರ್ಚಿಸಿ ಯಾರಿಗೂ ತೊಂದರೆಯಾಗದ ರೀತಿ ನೀರು ಕೊಂಡೊಯ್ಯಲು ಸಿದ್ಧತೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶನಿವಾರ ಮಾಧ್ಯಮದವರ ಜತೆ ಮಾತನಾಡಿ, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಬೇಕು. ಜತೆಗೆ, ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಬಾರದು. ಈಗಾಗಲೇ ಮೆಕ್ಕೇಜೋಳ ಬೆಂಬಲಬೆಲೆ ಯೋಜನೆಯಡಿ ಸರ್ಕಾರ ಖರೀದಿಸುವುದಾಗಿ ಘೋಷಿಸಿದೆ. ಆದರೂ ಬೆಂಬಲ ಬೆಲೆ ಮೊತ್ತ ಕಡಿಮೆಯೆಂದು, ಹೆಚ್ಚುವರಿ ದರ ಕೊಡಬೇಕು ಎಂದು ರೈತರ ಹೋರಾಟ ಜಾರಿಯಲ್ಲಿದೆ. ಆದರೆ ರಾಜ್ಯ ಸರ್ಕಾರ ರೈತರ ಜತೆ ಚಲ್ಲಾಟ ಆಡುತ್ತಿದೆ ಎಂದರು.
ಕಳೆದ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿದ್ದು, 2 ಲಕ್ಷ ಮೆಟ್ರಿಕ್ ಟನ್ ನಷ್ಟ ಆಗಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಲು ಏನು ಮಾಡಬೇಕು ಎಂಬುದನ್ನು ಸರ್ಕಾರ ಯೋಚಿಸಬೇಕು. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಬೇಕು. ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರ್ಕಾರ ಖರೀದಿಸಬೇಕು. ಆದರೆ ರಾಜ್ಯ ಸರ್ಕಾರಕ್ಕೆ ರೈತಪರ ಚಿಂತನೆಯಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಹೈಕಮಾಂಡ್ ಇದಿಯಾ?
ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ನಡೆಯುತ್ತಿರುವ ಪೈಪೋಟಿ, ಕಚ್ಚಾಟ ನೋಡುತ್ತಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಇದೆಯೋ? ಇಲ್ಲವೋ? ಎಂಬ ಅನುಮಾನ ಬರುತ್ತಿದೆ ಎಂದ ಅವರು, ಸಮಾಜವಾದಿ ಪಟ್ಟಿ ಕಟ್ಟಿಕೊಂಡು ದುಬಾರಿ ವಾಚ್ ಕೈಗೇರಿಸಿಕೊಳ್ಳುವವರ ಎಲ್ಲ ವೈಭವ ನೋಡಿದ್ದೇವೆ. ಪ್ರಸ್ತುತ ಅಂತವರ ಆಡಳಿತದ ಜತೆ ನಡವಳಿಕೆಯೂ ಹಳ್ಳ ಹಿಡಿದಿದೆ ಎಂದರು.




