*ಪಾಕಿಸ್ತಾನಿಯರನ್ನು ರಾಜ್ಯದಿಂದ ಗಡಿಪಾರು ಮಾಡಲು ಕ್ರಮ: ಗೃಹ ಸಚಿವ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನಿಯರನ್ನ ಪರಿಶೀಲಿಸಲಾಗುತ್ತಿದೆ. ಅವರ ವೀಸಾಗಳನ್ನು ರದ್ದು ಮಾಡಿ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆ ಬಗ್ಗೆಯೂ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇನ್ನೂ ಹೆಚ್ಚಿನ ಕಠಿಣವಾದ ನಿರ್ಧಾರಗಳನ್ನು ಕೇಂದ್ರ ಮಾಡಬೇಕು ಎಂದರು.
ರಾಷ್ಟ್ರದ ಭದ್ರತೆಯ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರ ಕೆಲವು ನಿರ್ಧಾರಗಳನ್ನು ರಾಜತಂತ್ರಿಕವಾಗಿ ತೆಗೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಕಠಿಣವಾದ ನಿರ್ಧಾರಗಳನ್ನು ಮಾಡಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಮಾಡಬೇಕು. ನಾವು ಇಷ್ಟನ್ನೇ ಹೇಳಬಹುದು. ಕೇಂದ್ರ ಸರ್ಕಾರದ ವಿಚಾರದಲ್ಲಿ ನಾನು ಹೆಚ್ಚು ಮಾತನಾಡಲು ಆಗಲ್ಲ ಎಂದು ಹೇಳಿದರು.
ಈಗ ಅಧಿಕೃತವಾಗಿ ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ವಾಪಸ್ ಕಳುಹಿಸುವ ಕೆಲಸ ಆಗುತ್ತಿದೆ. ಆದರೆ ಅನಧಿಕೃತವಾಗಿ ಇರುವವರ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಸದ್ಯ ಪಾಕಿಸ್ತಾನಿ ಪ್ರಜೆಗಳನ್ನಷ್ಟೇ ಭಾರತ ತೊರೆಯಲು ಹೇಳಿದ್ದಾರೆ. ಅವರ ವೀಸಾಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಬೇರೆ ದೇಶದ ಪ್ರಜೆಗಳು ಚಿಂತಿಸುವ ಅಗತ್ಯ ಇಲ್ಲ ಎಂದರು.