Belagavi NewsKannada NewsKarnataka NewsLatest

ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ ಸದೃಢಗೊಳಿಸಿ: ಪ್ರಕಾಶ ಕಮ್ಮರಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆದರೆ ಸಾಲದು, ನಮ್ಮ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯನ್ನು ಸದೃಢಗೊಳಿಸಿ ರೈತ ಸ್ನೇಹಿ ಮಾಡಬೇಕು ಎಂದು ಕೃಷಿ ಆರ್ಥಿಕ ತಜ್ಞ ಪ್ರಕಾಶ ಕಮ್ಮರಡಿ ಹೇಳಿದರು.

ಅವರು ಸೋಮವಾರ ಎಪಿಎಂಸಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಈ‌ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿರುವ, ರೈತರಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿರುವ ರಾಜ್ಯದ ಹಾಲಿ ಸರಕಾರದ ಕ್ರಮ ಸ್ವಾಗತಾರ್ಹ” ಎಂದರು.

“ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ. ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮಾರಾಟ ಈ ಪ್ರಾಂಗಣದಲ್ಲಿ ನಡೆಯಬೇಕು. ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಎಪಿಎಂಸಿಗೆ ಬಂದರೆ ವರ್ತಕರು ಅದನ್ನು ಖರೀದಿಸಿ ಇಲ್ಲಿಯೇ ಮಾರಾಟ ಮಾಡುತ್ತಾರೆ. ಅದು ಬೇಡ ಎನ್ನುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರಕಾರ ನಿರ್ಧಾರ ಮಾಡಿ ಎಪಿಎಂಸಿ ಕಾಯ್ದೆ ಜಾರಿಗೆ ತಂದಿತ್ತು” ಎಂದರು.

“ತಾಲೂಕು ಮಟ್ಟದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ತಾವು ಬೆಳೆದಿರುವ ಉತ್ಪನ ತರಲು ರೈತರಿಗೆ ಕಷ್ಟವಾಗಿದೆ. ಇದಕ್ಕೆ ಪರಿಹಾರವಾಗಿ ಆದಷ್ಟು ಬೇಗ ಎಪಿಎಂಸಿ ಶಾಖೆ ತೆರೆಯಬೇಕು. ರೈತರನ್ನು ಒಗ್ಗೂಡಿಸಿ ಉತ್ಪಾದಕರ ಸಂಘಗಳನ್ನು ರಚಿಸಬೇಕು. ಸಂಪೂರ್ಣ ಉಚಿತವಾಗಿ ಸರಕಾರವೇ ಕೃಷಿ ಉತ್ಪನ್ನ ಸಾಗಾಣಿಕೆ ವೆಚ್ಚ ಭರಿಸಬೇಕು ಮತ್ತು ಗುಣಮಟ್ಟದ ಬಗ್ಗೆ ರೈತರಿಗೆ ತರಬೇತಿ ನೀಡಿ ಹೊಲದಲ್ಲಿಯೇ ಇದು ನಿರ್ಧಾರವಾಗಬೇಕು” ಎಂದರು.

“ರೈತ ಬೆಳೆದಿರುವ ಉತ್ಪನ್ನಗಳ ಶೇಖರಣೆ ಪ್ರಮಾಣದ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ಅಡಮಾನ್ ಸಾಲ ವ್ಯವಸ್ಥೆಯನ್ನು ಮಾಡಿ ಸಮರ್ಪಕವಾಗಿ ಜಾರಿಯಾದಂತದಲ್ಲಿ ಬೆಳೆ ಕೊಯ್ಲಾದ ತಕ್ಷಣ ಬೇಕಾಬಿಟ್ಟಿ ಧಾರಣೆಗೆ ರೈತರು ಮಾರಾಟ ಮಾಡುವುದನ್ನು ತಡಗಟ್ಟಬಹುದು. ಗ್ರಾಮಾಂತರ ಪ್ರದೇಶದಲ್ಲಿ ಶೇಖರಿಸಿಟ್ಟರೆ ಆ ಆಧಾರದ ಮೇಲೂ ಅಡಮಾನ ಸಾಲ ವ್ಯವಸ್ಥೆ ನೀಡುವ ವಿನೂತನ ವ್ಯವಸ್ಥೆ ಜಾರಿಗೆ ಬರಬೇಕು ‌ ರೈತ ಪಡೆದಿರುವ ಬೆಳೆ ಸಾಲ ಮತ್ತು ಮಾಡಿರುವ ಉತ್ಪನ್ನದ ಶೇಖರಣೆ ಇವೆರಡರ ನಡುವೆ ಸಂಬಂಧ ಏರ್ಪಡಿಸಿ ಸಾಲ ವಸೂಲಾತಿ ಕ್ರಮವನ್ನು ರೈತ ಸ್ನೇಹಿ ಮಾಡುವ ಜವಾಬ್ದಾರಿ ಸರಕಾರದ್ದು” ಎಂದರು.

“ಸರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಅಥವಾ ಅದಕ್ಕೆ ಸಮಾನವಾದ ಬೆಲೆಗಿಂತ ಕಡಿಮೆ ಧಾರಣೆಯಲ್ಲಿ ರಾಜ್ಯದ ರೈತರು ಬೆಳೆದ ಉತ್ಪನ್ನ ಮಾರಾಟವಾಗದ ರೀತಿ ಕಾನೂನು ರಕ್ಷಣೆ ಒದಗಿಸುವುದು, ಇ ಟೆಂಡರ್ ನಲ್ಲಿ ಬೆಂಬಲ ಬೆಲೆ ಕಡಿಮೆ ಮಾಡಿ ಉಲ್ಲೇಖಕ್ಕೆ ಬರದ ಹಾಗೆ ಮಾಡುವ ಎಲ್ಲ ಹೊಣೆಗಾರಿಕೆಯನ್ನು ಎಪಿಎಂಸಿ ಕಾರ್ಯದರ್ಶಿಗೆ ವಹಿಸಬೇಕು. ಸಕಾಲದಲ್ಲಿ ಖರೀದಿ ಕೈಗೊಳ್ಳಲು 5 ಸಾವಿರ ಕೋಟಿ ಬೆಲೆ ನಿಗದಿ ಪಡಿಸಬೇಕು” ಎಂದು ಒತ್ತಾಯಿಸಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ಶಿವಲೀಲಾ‌ ಮಿಸಾಳೆ, ಎಪಿಎಂಸಿ ವರ್ತಕ ಬಸನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button