*ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಜೀವನದಲ್ಲೂ ಯಶಸ್ಸು ಸಾಧ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕ್ರೀಡೆಗಳಲ್ಲಿ ಸೋಲು -ಗೆಲುವು ಮಹತ್ವವಲ್ಲ. ಭಾಗವಹಿಸುವ ಮನೋಭಾವ ಮುಖ್ಯ. ಪಾಠದ ಜೊತೆಗೆ ಆಟವನ್ನೂ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲೂ ಕ್ರೀಡಾ ಮನೋಭಾವ ಬೆಳೆದು ಯಶಸ್ಸು ಸಾಧ್ಯವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳ ಬಗ್ಗೆ ನನಗೆ ಯಾವಾಗಲೂ ಅಪಾರ ಆಸಕ್ತಿ, ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಇಂತಹ ಅವಕಾಶಗಳು ಪದೇ ಪದೇ ಸಿಗುವುದಿಲ್ಲ, ಆದ್ದರಿಂದ ಕ್ರೀಡಾ ಚಟುವಟಿಕೆಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು. ಇಂದು ಮೊಬೈಲ್, ಇಂಟರ್ನೆಟ್ ಮತ್ತು ರ್ಯಾಂಕ್ ಬರಬೇಕೆನ್ನುವ ಮನೋಭಾವದಿಂದಾಗಿ ನಾವು ಆಟ ಆಡುವುದನ್ನೇ ಮರೆತಿದ್ದೇವೆ. ಆದರೆ ನೆನಪಿರಲಿ—ಕ್ರೀಡೆಯಲ್ಲಿ ಬೆಳೆದ ಶಿಸ್ತು, ಸಹಕಾರ, ಹೋರಾಟದ ಮನೋಭಾವ ಜೀವನದಲ್ಲಿ ಒಳ್ಳೆಯ ಯಶಸ್ಸನ್ನು ತಂದುಕೊಡುತ್ತವೆ ಎಂದು ಅವರು ಹೇಳಿದರು.
ನಮ್ಮಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಕ್ರೀಡೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಪ್ರತಿಭಾವಂತರೇ, ನಾವೆಲ್ಲರೂ ಅವರಿಗೆ ಪ್ರೋತ್ಸಾಹ ನೀಡಬೇಕು. ಅವರಲ್ಲಿ ಸ್ಫೂರ್ತಿ ತುಂಬಿದಾಗ ಖಂಡತ ಯಶಸ್ವಿಯಾಗುತ್ತಾರೆ ಎಂದು ಸಚಿವರು ಹೇಳಿದರು.
ಈ ವೇಳೆ ಶಾಸಕರಾದ ಆಸೀಫ್ ಸೇಠ್, ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ.ಶ್ರೀನಿವಾಸ್, ಇಲಾಖೆಯ ಅಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.