
ಪ್ರಗತಿವಾಹಿನಿ ಸುದ್ದಿ; ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿ ಸಿಕ್ಕಿ ಬಿದ್ದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮುಂಬೈನ ಕಾರ್ಡೇಲಿಯಾ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ವೇಳೆ ಕಳೆದ ಅಕ್ಟೋಬರ್ ನಲ್ಲಿ ಎನ್ ಸಿಬಿ ಅಧಿಕಾರಿಯಾಗಿದ್ದ ಸಮೀರ್ ವಾಂಖಡೆ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಆರ್ಯನ್ ಖಾನ್ ಕೂಡ ಸಿಕ್ಕಿಬಿದ್ದಿದ್ದರು. ಹಲವು ವಾರಗಳ ಕಾಲ ಜೈಲುವಾಸ ಅನುಭವಿಸಿದ್ದ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಡ್ರಗ್ಸ್ ಪಾರ್ಟಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ನಿನ್ನೆ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರಭಾಕರ್ ಸೈಲ್ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ ಡೀಲ್ ಆರೋಪ ಮಾಡಿದ್ದರು. ಎನ್ ಸಿಬಿ ಅಧಿಕಾರಿಗಳು 10 ಖಾಲಿ ಪೇಪರ್ ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡು ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಪ್ರಭಾಕರ್ ವಿಚಾರಣೆ ಕೂಡ ನಡೆದಿತ್ತು. ಏ.2ರೊಳಗೆ ಎನ್ ಸಿಬಿ ಡ್ರಗ್ಸ್ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಬೇಕಿತ್ತು.
ಆದರೆ ಚಾರ್ಜ್ ಶೀಟ್ ಗೂ ಮುನ್ನವೇ ಪ್ರಮುಖ ಸಾಕ್ಷಿ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೈಲ್ ಸಾವಿನ ತನಿಖೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ತನಿಖೆಯ ಹೊಣೆಯನ್ನು ಮಹಾರಾಷ್ಟ್ರ ಡಿಜಿಪಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ದಿಲೀಪ್ ವಾಲ್ಸೆ ತಿಳಿಸಿದ್ದಾರೆ.
ಗಂಡಸ್ತನದ ಮಾತನಾಡಿದ್ದ ಹೆಚ್.ಡಿ.ಕೆಗೆ BJP ತಿರುಗೇಟು