EducationKannada News

ಮೂಡಲಗಿಗೆ ತಾ ಪಂ ಕಾರ್ಯಾಲಯ ಮಂಜೂರು: ಬಾಲಚಂದ್ರ ಜಾರಕಿಹೊಳಿ

 

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಸದುದ್ದೇಶದಿಂದ ಅರಭಾಂವಿ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ ಎಂದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರ ಸಂಜೆ ಪಟ್ಟಣದ ಹೊರವಲಯದಲ್ಲಿ 3.25 ಕೋಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಭಾಂವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ನೀಡಿರುವಷ್ಟು ಆದ್ಯತೆ ಯಾವ ಇಲಾಖೆಗಳಿಗೂ ನೀಡಿಲ್ಲವೆಂದು ಹೇಳಿದರು.
ಮೂಡಲಗಿ ಪಟ್ಟಣದಲ್ಲಿ ಹೊಸದಾಗಿ 3.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದ ಗುಣಮಟ್ಟವನ್ನು ಪ್ರಶಂಸಿಸಿದ ಅವರು, ವಸತಿ ನಿಲಯದಲ್ಲಿ ವಾಸವಿರುವ ವಿದ್ಯಾರ್ಥಿಗಳು ಸ್ವಚ್ಚತೆಗೆ ಆದ್ಯತೆ ನೀಡಬೇಕು, ಸತತ ಅಧ್ಯಯನದಿಂದ ವಿದ್ಯಾರ್ಥಿಗಳು ಸಾಧನೆ ಮಾಡುವಂತಾಗಬೇಕು, ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಸಮಾಜದ ಋಣ ತೀರಿಸುವ ಕಾರ್ಯ ಮಾಡುವಂತೆ ಹೇಳಿದರು.
ಈ ಹಿಂದೆ ತಾವು ಸಚಿವರಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಅಗತ್ಯವಿರುವ ಸಾಕಷ್ಟು ಕೆಲಸಗಳನ್ನು ಕೈಗೊಂಡು ವಿದ್ಯಾರ್ಥಿಗಳ ಅಗತ್ಯ ಅನುಸಾರವಾಗಿ ಪ್ರೌಢ ಶಾಲೆಗಳು ಹಾಗೂ ವಿವಿಧ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ, ಇದರ ಜೊತೆಗೆ ವಸತಿ ನಿಲಯಗಳನ್ನು ಹಾಗೂ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ, ಬಾಲಕಿಯರು ಶಾಲೆಯಿಂದ ಹಿಂದೆ ಉಳಿಯಬಾರದೆನ್ನುವ ದೃಷ್ಠಿಯಿಂದ ಅವರ ಗ್ರಾಮಗಳಿಗೆ ಅತೀ ಸಮೀಪ ಇರುವ ಊರುಗಳಲ್ಲಿ ಸರಕಾರಿ ಪ್ರೌಢ ಶಾಲೆಗಳನ್ನು ಮಂಜುರು ಮಾಡಿಸಲಾಗಿದೆ, ಒಟ್ಟಿನಲ್ಲಿ ಬಡ ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಸರಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಲಾಗಿದೆ ಎಂದು ಹೇಳಿದರು.

ತಾ.ಪಂ ಕಾರ್ಯಾಲಯ ಮಂಜೂರು:

Home add -Advt

ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿರುವದರಿಂದ ತಹಶೀಲ್ದಾರ ಕಾರ್ಯಾಲಯ ಸೇರಿದಂತೆ ತಾಲೂಕ ಮಟ್ಟದ ಕೆಲ ಸರಕಾರಿ ಕಚೇರಿಗಳನ್ನು ಆರಂಭಿಸಲಾಗಿದೆ, ಮೂಡಲಗಿಯಲ್ಲಿ ತಾಲೂಕ ಪಂಚಾಯತ ಕಾರ್ಯಾಲಯ ತೆರೆಯಲು ಸರಕಾರಿ ಆದೇಶ ಬಂದಿದೆ ಎಂದು ಹೇಳಿದರು. ಆದಷ್ಟು ಬೇಗ ಮೂಡಲಗಿ ಪಟ್ಟಣದಲ್ಲಿ ಸರಕಾರದ ಮುಖ್ಯ ಕಚೇರಿಗಳು ಆರಂಭಗೊಳ್ಳಲಿವೆ, ಇದಕ್ಕಾಗಿ ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವದಾಗಿ ಅವರು ಹೇಳಿದರು.
ರಸ್ತೆ ಸುಧಾರಣೆ: ಮೂಡಲಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಧರ್ಮಟ್ಟಿ, ಮುನ್ಯಾಳ , ಕಮಲದಿನ್ನಿ, ಹಳ್ಳೂರ ಶಿವಾಪೂರ ಗ್ರಾಮಗಳ ರಸ್ತೆ ಸುಧಾರಣೆ ಕಾಮಗಾರಿಗಳನ್ನು ತಮ್ಮ ಸ್ವಂತ ಹಣದಲ್ಲಿ ಮಾಡುತ್ತಿರುವದಾಗಿ ಹೇಳಿದ ಅವರು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಗಳ ಸುಧಾರಣೆಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಮಾರಂಭದ ಸಾನಿದ್ಯವನ್ನು ಶ್ರೀಪಾದಬೋಧ ಮಹಾಸ್ವಾಮಿಗಳು ವಹಿಸಿ ಆರ್ಶೀವಚನ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ತಾ.ಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಜಿ.ಪಂ ಸದಸ್ಯರಾದ ವಾಸಂತಿ ತೇರದಾಳ, ಗೋವಿಂದ ಕೊಪ್ಪದ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ,ಜಿ.ಪಂ ಮಾಜಿ ಸದಸ್ಯ ಡಾ: ರಾಜೇಂದ್ರ ಸಣ್ಣಕ್ಕಿ, ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸುರ, ರಾಮಣ್ಣಾ ಹಂದಿಗುಂದ, ಮೂಡಲಗಿ ತಹಶಿಲ್ದಾರ ಮುರಳಿಧರ ತಳ್ಳಕೇರಿ, ಗೋಕಾಕ ತಾ.ಪಂ ಇಒ ಬಸವರಾಜ ಹೆಗ್ಗನಾಯಕ್ಕ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಆರ್.ಕೆ.ಬಿಸಿರೋಟ್ಟಿ, ಬಸವಂತ ಕಮತಿ, ಮುತ್ತಪ್ಪ ಕುಳ್ಳೂರ, ರವೀಂದ್ರ ಸೋನವಾಲ್ಕಾರ, ಪ್ರಭು ಬಂಗೆನ್ನವರ, ರವಿ ಪರುಶೆಟ್ಟಿ, ರಮೇಶ ಸಣ್ಣಕ್ಕಿ, ಲಾಲಸಾಬ ಸಿದ್ದಾಪೂರ, ಡಾ: ಎಸ್.ಎಸ್.ಪಾಟೀಲ, ಮೂಡಲಗಿ ಪುರಸಭೆ ಹಾಗೂ ತಾ.ಪಂ ಸದಸ್ಯರುಗಳು, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ಎ.ಆರ್.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ವಸತಿ ನಿಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಶ್ರೀಗಳು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button